ರಾಯಚೂರು: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಸೋಷಿಯಲಿಸ್ಟ್ ಸೆಂಟರ್ ಆಫ್ ಇಂಡಿಯಾ (ಎಸ್ ಯುಸಿಐ) ಹಾಗೂ ರೈತ ಕೃಷಿ ಕಾರ್ಮಿಕರ ಸಂಘಟನೆ (ಕೆಆರ್ ಎಸ್)ಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಭೂ ಸುಧಾರಣೆ ಕಾಯ್ದೆ ರೈತರ, ಕೃಷಿ ಕಾರ್ಮಿಕರಿಗೆ ಮರಣ ಶಾಸನವಾಗಿದೆ. ವ್ಯವಸಾಯ ಮಾಡಲು ಆಸಕ್ತರಿಗೆ ಭೂಮಿ ಖರೀದಿ ಮಾಡಲು ಅನುಕೂಲವಾಗಲು ತಿದ್ದುಪಡಿ ತರಲಾಗಿದೆ ಎಂದು ಸರ್ಕಾರ ಹೇಳಿದೆ. ಈಗಾಗಲೇ ಕೃಷಿ ಮಾಡುತ್ತಿರುವ ರೈತರು ಕೃಷಿ ಚಟುವಟಿಕೆಯಿಂದ ವಿಮುಖರಾಗುತ್ತಿರುವ ಬಗ್ಗೆ ಹಾಗೂ ಆತ್ಮಹತ್ಯೆಗೆ ಶರಣಾಗುತ್ತಿರುವ ಬಗ್ಗೆ ಪರಿಹಾರ ಹುಡುಕದೇ ಬದಲಾಗಿ ಕಾರ್ಪೋರೆಟ್ ಕಂಪನಿ ಗಳಿಗೆ, ಬಂಡವಾಳಶಾಹಿಗಳು, ಅಕ್ರಮವಾಗಿ ಹಣ ಗಳಿಸಿದವರಿಗೆ ಕೃಷಿ ಭೂಮಿ ಖರೀದಿಸಲು ಅವಕಾಶ ನೀಡಿದೆ ಎಂದು ಆರೋಪಿಸಿದರು.
ಕೊರೊನಾ ಲಾಕ್ ಡೌನ್ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು ಸರ್ಕಾರ ಸುಗ್ರಿವಾಜ್ಞೆ ಮೂಲಕ ಎಪಿಎಂಸಿ, ಭೂ ಸುಧಾರಣಾ ತಿದ್ದುಪಡಿ ಹಾಗೂ ಇತರೆ ಜನವಿರೋಧಿ, ಕಾನೂನುಗಳನ್ನು ಜಾರಿಗೆ ತರಲು ಹೊರಟಿದೆ. ಕೂಡಲೇ ಕಾಯ್ದೆಗಳನ್ನು ಹಿಂಪಡೆಯಬೇಕು ಇಲ್ಲದೇ ಹೋದಲ್ಲಿ ರೈತ ಸಮುದಾಯವನ್ನು ಸಂಘಟಿಸಿ ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಆರ್.ಕೆ.ಎಸ್ ಜಿಲ್ಲಾಧ್ಯಕ್ಷ ಎಂ.ರಾಮಣ್ಣ, ಎಸ್.ಯುಸಿಐ ಕಾರ್ಯದರ್ಶಿ ಚಂದ್ರ ಗಿರೀಶ, ವೀರೇಶ ಎನ್.ಎಸ್.ಪ್ರಮೋದ ಕುಮಾರ, ಚನ್ನಬಸವ ಜಾನೇಕಲ್, ಮಹೇಶ ಚೀಕಲಪರ್ವಿ, ಉಮಾ ಮಹೇಶ್ವರಿ, ಮಲ್ಲನಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.