ಮಸ್ಕಿ: ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಆಗ್ರಹಿಸಿ ಜಂಗಮ ಸಮಾಜದಿಂದ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು.
ಪಟ್ಟಣದ ಗಚ್ಚಿನಮಠದಿಂದ ಆರಂಭವಾದ ಮೆರವಣಿಗೆ ಕನಕ, ವಾಲ್ಮೀಕಿ ಹಾಗೂ ಬಸವೇಶ್ವರ ವೃತ್ತದ ಮೂಲಕ ಸಾಗಿ ತಹಶೀಲ್ದಾರ್ ಕಚೇರಿ ತಲುಪಿತು.
ಬೇಡ ಜಂಗಮ ಸಮಾಜದ ಮುಖಂಡರ ನಿಯೋಗಕ್ಕೆ ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ನೀಡದ್ದಕ್ಕೆ ಆಕ್ರೋಶ ವ್ಯಕ್ತಪಡಿಸಲಾಯಿತು. ಬಳಿಕ ತಹಶೀಲ್ದಾರ್ ಕಚೇರಿ ಶಿರಸ್ತೇದಾರ್ ಅಖ್ತರ ಅಲಿ ಅವರಿಗೆ ಮನವಿ ಸಲ್ಲಿಸಲಾಯಿತು.
ಜಂಗಮ ಸಮಾಜದ ಮುಖಂಡ ಘನಮಠದಯ್ಯ ಸಾಲಿಮಠ ಮಾತನಾಡಿ,‘ಸರ್ಕಾರ ಕೂಡಲೇ ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಬೇಕು’ ಎಂದು ಆಗ್ರಹಿಸಿದರು.
ಜಂಗಮ ಸಮಾಜದ ಅಧ್ಯಕ್ಷ ಸಿದ್ಧಲಿಂಗಯ್ಯ ಸೊಪ್ಪಿಮಠ ಮಾತನಾಡಿ,‘ಬೇಡ ಜಂಗಮ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಬಿ.ಡಿ.ಹಿರೇಮಠ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ತಾಲ್ಲೂಕು ಘಟಕ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಈ ಮೆರವಣಿಗೆ ಹಮ್ಮಿಕೊಂಡಿದೆ’ ಎಂದರು.
ಸರ್ಕಾರ ಕೂಡಲೇ ಹೋರಾಟಗಾರರ ಮನವಿಗೆ ಸ್ಪಂದಿಸಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಜಂಗಮ ಸಮಾಜದ ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಪೂರ್ಣಿಮಾ ವಿ.ಪಾಟೀಲ, ಕರಿಬಸ್ಸಯ್ಯಸ್ವಾಮಿ, ಆದಯ್ಯ ಕ್ಯಾತನಟ್ಟಿ, ಶಿವಕುಮಾರ ಶಾಸ್ತ್ರಿ, ಸಿದ್ದಲಿಂಗಯ್ಯ ಗಚ್ಚಿನಮಠ, ಅಮರಯ್ಯಸ್ವಾಮಿ ಕೊನ್ನಾಪುರ, ವಿರುಪಾಕ್ಷಯ್ಯ, ತಿಪ್ಪಯ್ಯಸ್ವಾಮಿ, ಶರಣಯ್ಯ ಸೊಪ್ಪಿಮಠ, ಮಂಜುನಾಥ ಗಣಚಾರಿ ಹಾಗೂ ಮಹೇಶ ಕೊಟ್ಟೂರುಮಠ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.