ADVERTISEMENT

ಬಾಡುತ್ತಿರುವ ಬೆಳೆ: ರೈತರಿಗೆ ಆತಂಕ

ಎನ್ಆರ್‌ಬಿಸಿ ಕಾಲುವೆಗೆ ನೀರು ಸ್ಥಗಿತ

ವೆಂಕಟೇಶ ಪಾಟೀಲ
Published 7 ಡಿಸೆಂಬರ್ 2018, 17:20 IST
Last Updated 7 ಡಿಸೆಂಬರ್ 2018, 17:20 IST
ದೇವದುರ್ಗದಲ್ಲಿ ರೈತರು ಬೆಳೆಗಾಗಿ ಟ್ಯಾಂಕರ್ ನೀರು ಅವಲಂಬಿಸಿರುವುದು
ದೇವದುರ್ಗದಲ್ಲಿ ರೈತರು ಬೆಳೆಗಾಗಿ ಟ್ಯಾಂಕರ್ ನೀರು ಅವಲಂಬಿಸಿರುವುದು   

ದೇವದುರ್ಗ: ತಾಲ್ಲೂಕಿನಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟ ನಂತರ ಶೇ 80ರಷ್ಟು ರೈತರು ನಾರಾಯಣಪುರ ಬಲದಂಡೆ ಕಾಲುವೆ ನೀರನ್ನು ನಂಬಿ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅಣೆಕಟ್ಟೆಯಲ್ಲಿ ನೀರಿನ ಕೊರತೆಯಾದ ಕಾರಣ ಕಾಲುವೆಗೆ ನೀರು ಹರಿಸುವುದು ಸ್ಥಗಿತಗೊಳಿಸಲಾಗಿದೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಬಾಡುತ್ತಿದ್ದು, ರೈತರಲ್ಲಿ ಆತಂಕ ಹೆಚ್ಚಿದೆ.

ಬಲದಂಡೆ ಯೋಜನೆ ಪ್ರಕಾರ, ದೇವದುರ್ಗ ತಾಲ್ಲೂಕಿನ ಶೇ 90ರಷ್ಟು ಪ್ರದೇಶ ನೀರಾವರಿಗೆ ಒಳಪಟ್ಟರೆ, ಲಿಂಗಸೂಗೂರು ಮತ್ತು ರಾಯಚೂರು ತಾಲ್ಲೂಕುಗಳು ಕಡಿಮೆ ಪ್ರದೇಶ ಹೊಂದಿದೆ.ನೀರಾವರಿ ಪ್ರದೇಶ ಅಧ್ಯಾಯನದ ನಂತರ ಮುಖ್ಯ ಕಾಲುವೆ ನಿರ್ಮಿಸಲಾಗಿದ್ದು, 3600 ಕ್ಯುಸೆಕ್‌ ಸಾಮರ್ಥ್ಯ ಹೊಂದಿದೆ. ಲಿಂಗಸೂಗೂರು ತಾಲ್ಲೂಕು 1ರಿಂದ 8 ರವರೆಗೆ ಉಪ ಕಾಲುವೆ, ದೇವದುರ್ಗ ತಾಲ್ಲೂಕಿನಲ್ಲಿ 9ರಿಂದ 18ರವರೆಗೂ ಉಪ ಕಾಲುವೆ ಇದೆ.

‘ಪ್ರತಿ ವರ್ಷ ಜುಲೈನಿಂದ ನವೆಂಬರ್‌ವರೆಗೆ ವಾರಬಂದಿಯಂತೆ ಕಾಲುವೆಗೆ ನೀರು ಹರಿಸದರೆ ರೈತರಿಗೆ ತೃಪ್ತಿಯಾಗಿ ನೀರು ಕೊಡಬಹುದು. ಆದರೆ ನೀರಾವರಿ ಇಲಾಖೆಯ ನಿರ್ಲಕ್ಷ್ಯದಿಂದ ಅಣೆಕಟ್ಟೆಯಿಂದ ಹರಿಯುವ ನೀರು ನದಿಗೆ ಸೇರಿ ಆಂಧ್ರ ಪ್ರದೇಶದ ಪಾಲಾಗುತ್ತಿದೆ. ಅಧಿಕಾರಿಗಳು ಕಾಲುವೆಗೆ ನೀರು ಹರಿಸುವುದು ಸ್ಥಗಿತಗೊಳಿಸಿದ್ದರಿಂದ ರೈತರಿಗೆ ನಷ್ಟವಾಗಿದೆ’ ಎಂದು ರೈತ ಸಂಘದ ಅಧ್ಯಕ್ಷ ಬೂದಯ್ಯಸ್ವಾಮಿ ಗಬ್ಬೂರು ಆರೋಪಿಸಿದರು.

ADVERTISEMENT

‘ನೀರಾವರಿಗೆ ಒಳಪಟ್ಟ ನಂತರ ಜಮೀನುಗಳಲ್ಲಿ ತೇವಾಂಶ ಹೆಚ್ಚಾಗಿದ್ದು ಮೆಣಸಿನಕಾಯಿಯಂಥ ಬೆಳಗಳನ್ನೆ ಬೆಳೆಯಬೇಕಾದ ಅನಿವಾರ್ಯತೆ ರೈತರಿಗಿದೆ. ಸೂರ್ಯಕಾಂತಿ, ಶೇಂಗ ಮತ್ತು ಸಜ್ಜೆಯಂಥ ಬೆಳೆಗಳಿಗೆ ಇಳುವರಿ ಬರುತ್ತಿಲ್ಲ. ಈ ಬೆಳೆಗಳಿಗೆ ಕನಿಷ್ಟ ಫೆಬ್ರುವರಿವರೆಗೂ ನೀರಿನ ಅವಶ್ಯಕತೆ ಇದೆ.ಇದನ್ನು ಮನಗಂಡು ರೈತರು ನೀರು ಹರಿಸಬೇಕು’ ಎಂದು ಹೇಳಿದರು.

ಬೆಳೆಗಳನ್ನು ಉಳಿಸಿಕೊಳ್ಳಲು ಕೆಲ ರೈತರು ದುಬಾರಿ ಹಣ ಖರ್ಚು ಮಾಡಿ ಟ್ಯಾಂಕರ್ ಮೂಲಕ ಬೆಳೆಗಳಿಗೆ ನೀರು ಹರಿಸಲು ಆರಂಭಿಸಿದ್ದಾರೆ. ಆದರೆ ಅದು ಎಲ್ಲ ರೈತರಿಗೆ ಸಾಧ್ಯವಾಗಲ್ಲ. ಒಂದು ದಿನಕ್ಕೆ ಟ್ರ್ಯಾಕ್ಟರ್ ಬಾಡಿಗೆ ₹ 700, ಟ್ಯಾಂಕರ್ ಬಾಡಿಗೆ ₹ 500 ಇದೆ’ ರೈತ ಸಂಘದ ಮುಖಂಡ ಪ್ರಭಾಕರ ಪಾಟೀಲ ಇಂಗಳದಾಳ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.