ADVERTISEMENT

ರಾಯಚೂರು ಬಂದ್: ಭಾಗಶಃ ಯಶಸ್ವಿ

ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸ್ಥಾಪಿಸುವಂತೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2023, 5:09 IST
Last Updated 25 ಮಾರ್ಚ್ 2023, 5:09 IST
ಬಂದ್‌ ಹಿನ್ನೆಲೆಯಲ್ಲಿ ರಾಯಚೂರಿನ ಬಟ್ಟೆ ಬಜಾರ್‌ನಲ್ಲಿ ಕಂಡು ಬಂದ ದೃಶ್ಯ
ಬಂದ್‌ ಹಿನ್ನೆಲೆಯಲ್ಲಿ ರಾಯಚೂರಿನ ಬಟ್ಟೆ ಬಜಾರ್‌ನಲ್ಲಿ ಕಂಡು ಬಂದ ದೃಶ್ಯ   

ರಾಯಚೂರು: ರಾಯಚೂರಿನಲ್ಲಿಯೇ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಸ್ಥಾಪಿಸುವಂತೆ ಒತ್ತಾಯಿಸಿ ರಾಯಚೂರು ಏಮ್ಸ್ ಹೋರಾಟ ಸಮಿತಿಯ ನೇತೃತ್ವದಲ್ಲಿ ಶುಕ್ರವಾರ ಕರೆ ನೀಡಿದ್ದ ರಾಯಚೂರು ಬಂದ್ ಹೋರಾಟ ಭಾಗಶಃ ಯಶಸ್ವಿಯಾಯಿತು.

ನಗರದ ಉಸ್ಮಾನಿಯಾ ತರಕಾರಿ ಮಾರಾಟಗಾರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ರಾಜ್ಯ ರೈತ ಸಂಘ, ಜೆಡಿಎಸ್, ಕಾಂಗ್ರೆಸ್ ಎಸ್ ಡಿಪಿಐ, ಜೈ ಕನ್ನಡ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿದ್ದವು.

ನಗರದ ಉಸ್ಮಾನಿಯ ತರಕಾರಿ ಮಾರ್ಕೆಟ್, ಮೀನಾ ಬಜಾರ್, ಪೆಟ್ಲಾ ಬುರ್ಜ, ಕಿರಾಣಿ ಬಜಾರ್, ರಾಜೇಂದ್ರ ಗಂಜ್, ಬಟ್ಟೆ ಬಜಾರ್,ಸರಾಫ್ ಬಜಾರ್ ಸೇರಿದಂತೆ ವಿವಿ ಕಡೆ ಅಂಗಡಿ ಮುಂಗಟ್ಟು ಬಂದ್ ಮಾಡಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಹೋರಾಟಕ್ಕೆ ಬೆಂಬಲ ನೀಡಿದರು.

ADVERTISEMENT

ಏಮ್ಸ್ ಹೋರಾಟ ಸಮಿತಿಯಿಂದ ಕಳೆದ 316 ದಿನಗಳಿಂದ ಧರಣಿ ಸತ್ಯಗ್ರಹ ನಡೆಯುತ್ತಿದೆ. 66 ದಿನಗಳಿಂದ ಸರದಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದ್ದು ಸರ್ಕಾರ ಕೇವಲ ಭರವಸೆ ನೀಡುತ್ತಿದೆ ವಿನಾ ಏಮ್ಸ್ ಸ್ಥಾಪನೆ ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಏಮ್ಸ್ ಹೋರಾಟ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಪ್ರಮುಖ ರಸ್ತೆಗಳ ಮೂಲಕ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಕಿಲ್ಲೆ ಬೃಹನ್ ಮಠದ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿ ಮಾತನಾಡಿ, ಜಿಲ್ಲೆಯ ಸರ್ವ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು, ಶಾಸಕರು, ಸಂಸದರು ಏಮ್ಸ್ ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ ಮಾಡಿ ಸರ್ಕಾರದ ಮೇಲೆ ಒತ್ತಡ ತರಬೇಕು. ರಾಯಚೂರಿಗೆ ಏಮ್ಸ್ ಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಚುನಾವಣೆಯ ಸಂದರ್ಭದಲ್ಲಿ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಮಾತನಾಡಿ, ರಾಯಚೂರಿಗೆ ಏಮ್ಸ್ ಕೊಡುವುದಾಗಿ ನಂಬಿಸಿ ವಂಚನೆ ಮಾಡಿದ್ದಾರೆ. ಈಗ ಕೇವಲ ರಾಯಚೂರಿಗೆ ಏಮ್ಸ್ ಮಾದರಿ ಆಸ್ಪತ್ರೆ ನೀಡುವುದಾಗಿ ಘೋಷಿಸಿದ್ದು ಖಂಡನೀಯ. ರಾಜ್ಯ ಸರ್ಕಾರದ ಈ ತಾರತಮ್ಯ ನೀತಿ ಖಂಡನೀಯ ಎಂದು ಆಕ್ರೋಶ ವ್ಯಕ್ತ‍ಪಡಿಸಿದರು.

ಪ್ರತಿಭಟನೆಯಲ್ಲಿ ಬಟ್ಟೆ ವ್ಯಾಪಾರಸ್ಥರ ಸಂಘ, ಅಂಗನವಾಡಿ, ಶಿಕ್ಷಕರ ಸಂಘ, ಕನ್ನಡ ರಕ್ಷಣಾ ವೇದಿಕೆ ಕರ್ನಾಟಕ', ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಭೂಮಿ ಉಳಿಸಿ ಹೋರಾಟ ಸಮಿತಿ, ಎಸ್ ಕೆ ಎಸ್ ಪ್ಯಾರಮೆಡಿಕಲ್ ಕಾಲೇಜ್, ನವೋದಯ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು.

ಏಮ್ಸ್ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಡಾ.ಬಸವರಾಜ ಕಳಸ, ಅಶೋಕ ಕುಮಾರ ಜೈನ್, ಎನ್ ಮಹಾವೀರ್, ಎಂ ಆರ್ ಭೇರಿ, ಸುಲೋಚನಾ, ವಿನಯ್ ಕುಮಾರ, ಚಿತ್ರಗಾರ ಗುರುರಾಜ ಕುಲಕರ್ಣಿ, ಕಾಮರಾಜ ಪಾಟೀಲ್, ಬಸವರಾಜ್ ಮಿಮಿಕ್ರಿ, ಜಾನ್ ವೆಸ್ಲಿ, ನರಸಪ್ಪ ಬಾಡಿಯಾ, ಪಂಪನಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.