ರಾಯಚೂರು: ಮುಖ್ಯಮಂತ್ರಿ ಗ್ರಾಮವಾಸ್ತವ್ಯ ಸಂದರ್ಭದಲ್ಲಿ ಭದ್ರತಾ ವೈಫಲ್ಯ ಆರೋಪಕ್ಕಾಗಿ ಸಿಪಿಐ ದತ್ತಾತ್ರೇಯ ಕಾರ್ನಾಡ್ ಅವರನ್ನು ಅಮಾನತುಗೊಳಿಸಿದ್ದ ಆದೇಶವನ್ನು ರದ್ದುಗೊಳಿಸಿ ಮರುನೇಮಕಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ವೇದಮೂರ್ತಿ ತಿಳಿಸಿದ್ದಾರೆ.
ಸಿಪಿಐ ಹಾಗೂ ಪಿಎಸ್ಐ ಅಮಾನತು ಮಾಡಿದ್ದನ್ನು ವಿವಿಧ ಸಂಘ–ಸಂಸ್ಥೆಗಳು ಖಂಡಿಸಿ, ಅಮಾನತು ರದ್ದುಗೊಳಿಸುವಂತೆ ನಿರಂತರ ಮನವಿ ಸಲ್ಲಿಸುತ್ತಾ ಬಂದಿದ್ದವು. ಸಾಮಾಜಿಕ ಜಾಲತಾಣದಲ್ಲೂ ಪೊಲೀಸ್ ಅಧಿಕಾರಿಗಳು ಕೈಗೊಂಡ ಕ್ರಮಕ್ಕೆ ವಿರೋಧ ವ್ಯಕ್ತವಾಗಿತ್ತು.
ಜೂನ್ 26 ರಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಯಚೂರು ಪ್ರವಾಸಿ ಮಂದಿರದಿಂದ ಕರೇಗುಡ್ಡಕ್ಕೆ ಗ್ರಾಮವಾಸ್ತವ್ಯಕ್ಕಾಗಿ ಸರ್ಕಾರಿ ಬಸ್ನಲ್ಲಿ ತೆರಳುವಾಗ, ವೈಟಿಪಿಎಸ್ ಕಾರ್ಮಿಕರು ದಿಢೀರ್ ರಸ್ತೆ ತಡೆ ನಡೆಸಿದ್ದರು. ಇದನ್ನು ಭದ್ರತಾ ವೈಫಲ್ಯವೆಂದು ಪರಿಗಣಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಯರಗೇರಾ ವೃತ್ತದ ಸಿಪಿಐ ದತ್ತಾತ್ರೇಯ ಕಾರ್ನಾಡ್ ಮತ್ತು ರಾಯಚೂರು ಗ್ರಾಮೀಣ ಠಾಣೆಯ ಪಿಎಸ್ಐ ನಿಂಗಪ್ಪ ಅವರನ್ನು ಅಮಾನತು ಮಾಡಲಾಗಿತ್ತು. ಇದೀಗ ಸಿಪಿಐ ಅಮಾನತು ಆದೇಶ ಮಾತ್ರ ರದ್ದುಗೊಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.