ADVERTISEMENT

ರಾಯಚೂರು | ಹಮಾಲಿ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಲು ಸೂಚನೆ

ಯದ್ಲಾಪುರ ಗ್ರಾ.ಪಂ ಪಿಡಿಒ, ತಾ.ಪಂ ಇಒ ವಿರುದ್ಧ ಕ್ರಮಕ್ಕೆ ಸೂಚನೆ ಉಪ ಲೋಕಾಯುಕ್ತರ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 6:35 IST
Last Updated 29 ಆಗಸ್ಟ್ 2025, 6:35 IST
ರಾಯಚೂರು ನಗರದ ತರಕಾರಿ ಮಾರುಕಟ್ಟೆಗೆ ಗುರುವಾರ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಅಲ್ಲಿನ ವ್ಯಾಪಾರಿಗಳೊಂದಿಗೆ ಚರ್ಚಿಸಿದರು
ರಾಯಚೂರು ನಗರದ ತರಕಾರಿ ಮಾರುಕಟ್ಟೆಗೆ ಗುರುವಾರ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಅಲ್ಲಿನ ವ್ಯಾಪಾರಿಗಳೊಂದಿಗೆ ಚರ್ಚಿಸಿದರು   

ರಾಯಚೂರು: ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ನಗರದ ವಿವಿಧೆಡೆ ಗುರುವಾರ ಅನಿರೀಕ್ಷಿತ ಭೇಟಿ ನೀಡಿದರು.

ನಗರದ ಹೈದರಾಬಾದ್ ರಸ್ತೆಯಲ್ಲಿನ ತರಕಾರಿ ಮಾರುಕಟ್ಟೆ ಆವರಣಕ್ಕೆ ಭೇಟಿ ನೀಡಿದ ಅವರು,
ತರಕಾರಿಯ ಗುಣಮಟ್ಟ‌, ಮಾರಾಟದ ಪ್ರಕ್ರಿಯೆ ಬಗ್ಗೆ ಮಾಲೀಕರು ಮತ್ತು ಹಮಾಲಿ ಕಾರ್ಮಿಕರಿಂದ ಮಾಹಿತಿ ಪಡೆದರು.

ಕಾಯಿಪಲ್ಲೆ ಚೀಲವನ್ನು ತೂಕದ ಯಂತ್ರಗಳಲ್ಲಿಟ್ಟು ಯಂತ್ರದ ಪ್ರಮಾಣ ಪರೀಕ್ಷಿಸಿದರು.
ಮಾರಾಟಗಾರ ಮಹಮ್ಮದ್ ಇಕ್ಬಾಲ್ ಎಂಬುವವರಿಂದ ತರಕಾರಿ ಮಾರಾಟದ ಬಗ್ಗೆ ಮಾಹಿತಿ ಪಡೆದರು.

ADVERTISEMENT

ಹಮಾಲಿ ಕಾರ್ಮಿಕರನ್ನು ತಮ್ಮ ಬಳಿ ಕರೆಯಿಸಿಕೊಂಡು, 'ನೀವು ಜೀವವಿಮೆ ಮಾಡಿಸಿದ್ದೀರಾ?, ಪ್ರತಿ ದಿನ ಎಷ್ಟು ಸಂಪಾದನೆ ಮಾಡ್ತೀರಾ?’ ಎಂದು ಕೇಳಿದರು.‌

ಹಮಾಲಿ ಕಾರ್ಮಿಕರು ನಿತ್ಯ ತಂಗುವ ಸ್ಥಳ, ಅವರಿಗೆ ನೀಡುವ ಸೌಕರ್ಯದ ಬಗ್ಗೆ ಉಪ ಲೋಕಾಯುಕ್ತರು ಖುದ್ದು ಪರಿಶೀಲಿಸಿದರು.

‘ಹಮಾಲಿ ಕಾರ್ಮಿಕರಿಗೆ ಸರಿಯಾದ ಸೌಕರ್ಯ ಕಲ್ಪಿಸಬೇಕು. ಆರೋಗ್ಯದ ಬಗ್ಗೆ ತಿಳಿವಳಿಕೆ ಮೂಡಿಸಿ’ ಎಂದು ಕೃಷಿ ಮಾರುಕಟ್ಟೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

‘ಹಮಾಲಿ ಕಾರ್ಮಿಕರ ಕಡ್ಡಾಯ ನೋಂದಣಿ ಮಾಡಿಸಿ, ಫೋಟೊ, ದಾಖಲಾತಿ ಇಟ್ಟುಕೊಳ್ಳಬೇಕು. ಅವರಿಗೆ ಪಿಎಫ್, ವಿಮೆ ಸಿಗುವ ಹಾಗೆ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದಲ್ಲಿ ಕ್ರಿಮಿನಲ್ ಮೊಕದ್ದಮೆ ಎದುರಿಸಬೇಕಾಗುತ್ತದೆ’ ಎಂದು ತರಕಾರಿ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದರು.

‘ಎಪಿಎಂಸಿ ಅಧಿಕಾರಿಗಳು ಇದುವರೆಗೆ ರೈತರ ಮತ್ತು ವ್ಯಾಪಾರಿಗಳ ಸಭೆ ಮಾಡಿಲ್ಲ’ ಎಂದು ಉಪ ಲೋಕಾಯುಕ್ತರ ಎದುರು ರೈತರು ದೂರಿದರು.

‘ಎಪಿಎಂಸಿ ಅಧಿಕಾರಿಗಳಿಗೆ ಸಭೆಗಳನ್ನು ನಿಯಮಿತವಾಗಿ ನಡೆಸಬೇಕು’ ಎಂದು ಉಪಲೋಕಾಯುಕ್ತರು, ಅಧಿಕಾರಿಗಳಿಗೆ ಸೂಚಿಸಿದರು.

ಹಮಾಲಿ ಕುಟುಂಬಗಳು ಇರುವ ಸ್ಥಳಕ್ಕೆ ಬಸ್‌ನ ಸೌಕರ್ಯ ಇಲ್ಲ ಎಂದು ಹಮಾಲಿ ಕುಟುಂಬದ ಮಹಿಳೆಯರು ಉಪಲೋಕಾಯುಕ್ತರ ಮುಂದೆ ತಮ್ಮ ಅಳಲು ತೋಡಿಕೊಂಡರು. ರೈತ ಭವನ ನಿರ್ಮಾಣಕ್ಕೆ ಮತ್ತು ರಸ್ತೆ ದುರಸ್ತಿಗೆ ಕ್ರಿಯಾಯೋಜನೆಯಲ್ಲಿ ಅನುದಾನ ಮೀಸಲಿಟ್ಟು ಕಾರ್ಯಕೈಗೊಳ್ಳುವುದಾಗಿ ಎಪಿಎಂಸಿ ಅಧಿಕಾರಿಗಳು ಲೋಕಾಯುಕ್ತರಿಗೆ ಉತ್ತರಿಸಿದರು.

ಬಳಿಕ ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಅವರು, ಬಸ್ ನಿಲ್ದಾಣದ ಕ್ಯಾಂಟೀನ್ ಒಳಗಿನ ಅಡುಗೆ ಕೋಣೆಗೆ ತೆರಳಿ ತರಕಾರಿ, ಧಾನ್ಯಗಳ ಗುಣಮಟ್ಟ‌‌ ಪರೀಕ್ಷಿಸಿದರು.

ಪ್ರಯಾಣಿಕರಿಗೆ ಅನುಕೂಲವಾಗಲು ಶೌಚಾಲಯಗಳ ಬಳಿ ಕ್ಯೂಆರ್ ಕೋಡ್ ಹಾಕಲು ಏಜೆನ್ಸಿಗಳಿಗೆ ಸೂಚನೆ‌ ನೀಡಿದರು. ದ್ವಿಚಕ್ರ ವಾಹನ ನಿಲುಗಡೆ ಸ್ಥಳದಲ್ಲಿ ಬಸ್ ಶೆಲ್ಟರ್ ಅಳವಡಿಸಲು, ಆವರಣದಲ್ಲಿ ಶುಚಿತ್ವ ಕಾಯ್ದುಕೊಳ್ಳಬೇಕು ಎಂದುಸಾರಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚನೆ ನೀಡಿದರು.

ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಎಚ್.ಎ.ಸಾತ್ವಿಕ, ಜಿಲ್ಲಾಧಿಕಾರಿ ನಿತೀಶ್.ಕೆ, ಜಿ.ಪಂ ಸಿಇಒ ಈಶ್ವರ ಕುಮಾರ ಕಾಂದೂ, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸತೀಶ್ ಬಿ.ಚಿಟುಗುಬ್ಬಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ, ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತ ಜುಬೀನ್ ಮೊಹಾಪಾತ್ರ, ರಾಯಚೂರು ಉಪವಿಭಾಗಾಧಿಕಾರಿ ಗಜಾನನ ಬಾಳೆ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಲೋಕಾಯುಕ್ತ ಡಿಎಸ್ಪಿ ರವಿ ಪುರಷೋತ್ತಮ, ವಸಂತಕುಮಾರ, ಪೊಲೀಸ್‌ ನಿರೀಕ್ಷಕ ಕಾಳಪ್ಪ ಬಡಿಗೇರ, ಚಂದ್ರಪ್ಪ, ಸುನಿಲ್‌ ಮೇಗಳಮನಿ, ಶೈಲಜಾ, ನಾಗರತ್ನಾ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಬಸ್ ನಿಲ್ದಾಣ, ತರಕಾರಿ ಮಾರುಕಟ್ಟೆ ಪರಿಶೀಲನೆ ಕೈಗಾರಿಕಾ ಪ್ರದೇಶಕ್ಕೆ ಭೇಟಿ ಕಾರ್ಖಾನೆಗಳಿಂದ ಕಲುಷಿತ ನೀರು: ಪರಿಸರ ಅಧಿಕಾರಿಗೆ ತರಾಟೆಗೆ

ಉಪ ಲೋಕಾಯುಕ್ತರು ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಟೈಮಾಕ್ಸ್ ಮತ್ತು ಹತ್ತಿರದ ವಿವಿಧ ಕಾರ್ಖಾನೆಗಳ ಬಳಿಯಲ್ಲಿ ಹರಿಯುತ್ತಿದ್ದ ಕೆಮಿಕಲ್ ಮಿಶ್ರಿತ ಕುಲುಷಿತ ನೀರು ವೀಕ್ಷಣೆ ಮಾಡಿದರು. ‘ಇಲ್ಲಿಗೆ ತಾವು ನಿಯಮಿತ ಭೇಟಿ ನೀಡಿ ಈ ಕಲುಷಿತ ನೀರು ಎಲ್ಲಿಗೆ ಹರಿಯುತ್ತದೆ ಎಂದು ನೋಡಿದ್ದೀರಾ? ಕೆಮಿಕಲ್ ಮಿಶ್ರಿತ ಕಲುಷಿತ ನೀರು ಹರಿಸುವ ಕಾರ್ಖಾನೆಗಳಿಗೆ ನೊಟೀಸ್ ಕೊಟ್ಟಿದ್ದೀರಾ? ಎಂದು ಉಪಲೋಕಾಯುಕ್ತರು ಪರಿಸರ ಅಧಿಕಾರಿಗೆ ಪ್ರಶ್ನಿಸಿದರು. ‘ಪರಿಸರ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದಾಗ ಹೀಗೆ ಕೆಮಿಕಲ್ ಮಿಶ್ರಿತ ವಿಷಯುಕ್ತ ನೀರು ನದಿಗೆ ಹರಿದು ಜನ-ಜೀವಜಂತು ಸಾಯುವಂತಾಗುತ್ತದೆ’ ಎಂದು ತರಾಟೆ ತೆಗೆದುಕೊಂಡ ಅವರು ಯದ್ಲಾಪುರ ಗ್ರಾಪಂ ಪಿಡಿಒ ಮತ್ತು ತಾ.ಪಂ ಇಒ ಮೇಲೆ ಕ್ರಮ ಜರುಗಿಸಲು ಅವರು ಸೂಚನೆ ನೀಡಿದರು. ಕೆಮಿಕಲ್‌ ನೀರು ಹೊರಬಿಡುವ ಕಾರ್ಖಾನೆಗಳಿಗೆ ನೊಟೀಸ್ ನೀಡಿ ಮುಚ್ಚಲು ಕ್ರಮವಹಿಸಬೇಕು ಎಂದು ಪರಿಸರ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಂಚಿಕೊಂಡ ಆಗ್ರೋ ಫುಡ್ ಕಾರ್ಖಾನೆಯಿಂದ ಕಲುಷಿತ ನೀರು ಹರಿಯುತ್ತಿರುವುದನ್ನು ವೀಕ್ಷಿಸಿದರು. ‘ಕಾರ್ಖಾನೆಗಳಿಂದ‌ ಹೊರಬರುವ ಕಲುಷಿತ ನೀರಿನಿಂದ ಭತ್ತದ ಬೆಳೆಗೆ ಹಾನಿಯಾಗುತ್ತಿದೆ. ಜನರಿಗೆ ಚರ್ಮ ರೋಗ ಭಾದೆ ಕಾಡುತ್ತಿದೆ’ ಎಂದು ಸಾರ್ವಜನಿಕರು ದೂರಿದರು. ‘ಸುತ್ತಲಿನ ಹಳ್ಳಿಗಳಲ್ಲಿ ಸಂಚರಿಸಿ ಚರ್ಮ‌ರೋಗ ಬಗ್ಗೆ ಮತ್ತು ಭತ್ತದ ಬೆಳೆಯ ಬಗ್ಗೆ ಪರಿಶೀಲಿಸಿ ವರದಿ ನೀಡಬೇಕು’ ಎಂದು ಚಿಕ್ಕಸಗೂರು ಪಿಡಿಒ ಅವರಿಗೆ ಉಪ ಲೋಕಾಯುಕ್ತರು ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.