ADVERTISEMENT

ಲಿಂಗಸುಗೂರು: ಅಪಾಯದ ಮಟ್ಟದಲ್ಲಿ ಪಟ್ಟಣದ ಪ್ರಮುಖ ರಸ್ತೆಗಳು

ಲಿಂಗಸುಗೂರು ಸಿರಡೋಣ ರಾಜ್ಯ ಹೆದ್ದಾರಿ ಮೇಲುಸ್ತುವಾರಿ ನಿರ್ವಹಣೆ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 5:16 IST
Last Updated 11 ಸೆಪ್ಟೆಂಬರ್ 2024, 5:16 IST
ಲಿಂಗಸುಗೂರು ಪಟ್ಟಣದ ಬಸವಸಾಗರ ವೃತ್ತದಿಂದ ಕಾಳಾಪುರ ಕ್ರಾಸ್‍ ಸಂಪರ್ಕಿಸುವ ರಾಜ್ಯ ಹೆದ್ದಾರಿ ರಸ್ತೆ ಕೊಚ್ಚಿ ಡಾಂಬರ್‌ ರಸ್ತೆಗೆ ಹೊಂದಿಕೊಂಡ ಶೋಲ್ಡರ್ ಇಳಿಜಾರಾಗಿರುವುದು
ಲಿಂಗಸುಗೂರು ಪಟ್ಟಣದ ಬಸವಸಾಗರ ವೃತ್ತದಿಂದ ಕಾಳಾಪುರ ಕ್ರಾಸ್‍ ಸಂಪರ್ಕಿಸುವ ರಾಜ್ಯ ಹೆದ್ದಾರಿ ರಸ್ತೆ ಕೊಚ್ಚಿ ಡಾಂಬರ್‌ ರಸ್ತೆಗೆ ಹೊಂದಿಕೊಂಡ ಶೋಲ್ಡರ್ ಇಳಿಜಾರಾಗಿರುವುದು   

ಲಿಂಗಸುಗೂರು: ಪುರಸಭೆ ವ್ಯಾಪ್ತಿಯ ವಾರ್ಡ್‌ಗಳಳಿಗೆ ಸಂಪರ್ಕ ಕಲ್ಪಿಸುವ ಹಾಗೂ ತಾಲ್ಲೂಕು ಕೇಂದ್ರದಿಂದ ವಿವಿಧ ಪಟ್ಟಣಗಳಿಗೆ ಸಂಪರ್ಕಿಸುವ ರಸ್ತೆಗಳು ಭಾಗಶಃ ಅಪಾಯದ ಹಂಚಿನಲ್ಲಿವೆ. ದುರ್ಘಟನೆಗಳು ಸಂಭವಿಸುವ ಮುಂಚೆ ದುರಸ್ತಿ ಕಾಮಗಾರಿ ಕೈಗೊಳ್ಳುವವರು ಯಾರು ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಹೆಚ್ಚು ವಾಹನ ಸಂಚಾರ ಸಾಮಾನ್ಯವಾಗಿ ಕಂಡು ಬರುತ್ತದೆ. ರಾಯಚೂರು ಬೆಳಗಾವಿ, ಜೇವರ್ಗಿ ಚಾಮರಾಜ ನಗರ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಲಿಂಗಸುಗೂರು ಸಿರಡೋಣ ರಾಜ್ಯ ಹೆದ್ದಾರಿ ಪಟ್ಟಣ ಮೂಲಕ ಹಾಯ್ದು ಹೋಗಿರುವುದು ವಿಶೇಷ.

ಜೇವರ್ಗಿ ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಾಗರಿಕರ ಅಸಹಕಾರ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೋಟ್ಯಂತರ ಹಣ ಖರ್ಚಾದರೂ ವಾಹನ ಸವಾರರ ಸಂಕಷ್ಟ ನಿವಾರಣೆಯಾಗುತ್ತಿಲ್ಲ. ರಾಯಚೂರು ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಮತ್ತು ಲಿಂಗಸುಗೂರು ಸಿರಡೋಣ ನಿರ್ವಹಣೆ ಪುರಸಭೆ ವ್ಯಾಪ್ತಿಗೆ ಬಿಟ್ಟಿರುವುದರಿಂದ ನಿರ್ವಹಣೆ ಮೇಲುಸ್ತುವಾರಿಗೆ ಅನುದಾನ ಕೊರತೆ ಎದುರಾಗಿದೆ.

ADVERTISEMENT

ಪುರಸಭೆ ಆಡಳಿತ ಮಂಡಳಿ ಬ್ರಾಂಡಿ ಶಾಪ್‍ಗಳಿಗೆ ಪರವಾನಗಿ ನೀಡುವ ಭರದಲ್ಲಿ ನ್ಯಾಯಾಲಯಕ್ಕೆ ಸ್ಥಳೀಯ ಸಂಸ್ಥೆ ವ್ಯಾಪ್ತಿಯ 5 ಕಿ.ಮೀ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಿಂದ ಮುಕ್ತಗೊಳಿಸಿ ಅಫಡವಿಟ್‍ ಸಲ್ಲಿಸಿದೆ. ಈ ರಸ್ತೆಗಳ ಅಭಿವೃದ್ಧಿಗೆ ಇಂದಿಗೂ ಬಿಡಿಕಾಸು ನೀಡುತ್ತಿಲ್ಲ. ಲೋಕೋಪಯೋಗಿ ಇಲಾಖೆ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ.

ಲಿಂಗಸುಗೂರು ಸಿರಡೋಣ ರಾಜ್ಯ ಹೆದ್ದಾರಿ ಬಸವಸಾಗರ ವೃತ್ತದಿಂದ ಕಾಳಾಪುರ ಕ್ರಾಸ್‌ವರೆಗೆ ಎರಡು ಮಗ್ಗಲು ಶೋಲ್ಡರ್ ಕುಸಿದು ಸಂಪೂರ್ಣ ಹಾಳಾಗಿದೆ. ಕೆಲವೆಡೆ ಆಳವಾದ ಗುಂಡಿ ಕಾಣಿಸಿಕೊಂಡಿದ್ದು ಡಾಂಬರ್ ರಸ್ತೆ ಇಳಿದು ಸಂಚರಿಸಲು ಸಾಧ್ಯವಾಗದಷ್ಟು ದುಸ್ತರಗೊಂಡಿದೆ. ವಾರ್ಡ್‍ಗಳಿಗೆ ತೆರಳುವ ಜನತೆ ನಡೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ವಾಹನ ಸವಾರರ ಸ್ಥಿತಿ ಶೋಚನೀಯವಾಗಿದೆ.

‘ಲಿಂಗಸುಗೂರು ಸಿರಡೋಣ ರಾಜ್ಯ ಹೆದ್ದಾರಿ ಸೇರಿದಂತೆ ಪಟ್ಟಣದ ಬಹುತೇಕ ಪ್ರಮುಖ ರಸ್ತೆಗಳ ಶೋಲ್ಡರ್ ಭಾಗ ಕುಸಿದು ಹೋಗಿವೆ. ವಾಹನಗಳು ಡಾಂಬರ್ ರಸ್ತೆ ಇಳಿದರೆ ಅಪಘಾತ ನಿಶ್ಚಿತ. ಸಾಮಾನ್ಯ ಜನತೆ ನಡೆದುಕೊಂಡು ಹೋಗಲು ಅವಕಾಶವಿಲ್ಲ. ಮಾನ್ವಿ ಶಾಲಾ ವಾಹನ ಅಪಘಾತ ಸಂಭವಿಸಿದ ರೀತಿ ಇಲ್ಲಿಯೂ ಆಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ನಾಗರಿಕ ಮಲ್ಲಿಕಾರ್ಜುನ ಸಕ್ರಿ ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಿಗೆ ಸಂಬಂಧಿಸಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಕನಿಷ್ಠ 5 ಕಿ.ಮೀ ರಸ್ತೆ ತಮ್ಮ ವ್ಯಾಪ್ತಿಗೆ ಬರುವುದಿಲ್ಲ. ಸಿರಡೋಣ ಲಿಂಗಸುಗೂರು ರಾಜ್ಯ ಹೆದ್ದಾರಿಗೆ ₹6 ಕೋಟಿ ಅನುದಾನ ಬಂದಿದೆ. ರೋಡಲಬಂಡ ಬಳಿ ರಸ್ತೆ ಕೆಲಸ ಟೆಂಡರ್ ಆಗಿದೆ. ಪಟ್ಟಣದಲ್ಲಿ ನಮಗೆ ಸಂಬಂಧವೆ ಇಲ್ಲ ಎಂದು ಲೊಕೋಪಯೋಗಿ ಇಲಾಖೆ ಹೆಸರು ಹೇಳಲಿಚ್ಛಿಸದ ಅಧಿಕಾರಿ ಹೇಳಿಕೊಂಡಿದ್ದಾರೆ.

‘ಲಿಂಗಸುಗೂರು ಸಿರಡೋಣ ರಾಜ್ಯ ಹೆದ್ದಾರಿ ಸೇರಿದಂತೆ ಪಟ್ಟಣದ ಪ್ರದೇಶದಲ್ಲಿನ ಪ್ರಮುಖ ರಸ್ತೆಗಳ ನಿರ್ವಹಣೆಗೆ ಯಾವುದೇ ವಿಶೇಷ ಅನುದಾನವಿಲ್ಲ. ಪುರಸಭೆ ತೆರಿಗೆ ಹಣದಲ್ಲಿ ಸಂಪೂರ್ಣ ಹಾಳಾಗಿರುವ ರಸ್ತೆಗಳ ನಿರ್ವಹಣೆಗೆ ಮಾಡಲಾಗುವುದು. ರಸ್ತೆಗಳ ಪರಿಶೀಲನೆ ನಡೆಸಿ ತಾತ್ಕಾಲಿಕ ದುರಸ್ತಿಗೆ ಕ್ರಮ ಕೈಗೊಳ್ಳಲು ಎಂಜಿನಿಯರ್‌ಗೆ ಸೂಚಿಸುವೆ’ ಎಂದು ಮುಖ್ಯಾಧಿಕಾರಿ ರಡ್ಡಿ ರಾಯನಗೌಡ್ರ ಹೇಳಿದ್ದಾರೆ.

ಲಿಂಗಸುಗೂರು ಪಟ್ಟಣದ ಬಸವಸಾಗರ ವೃತ್ತದಿಂದ ಕಾಳಾಪುರ ಕ್ರಾಸ್‍ ಸಂಪರ್ಕಿಸುವ ರಾಜ್ಯ ಹೆದ್ದಾರಿ ಡಾಂಬರ್‌ ರಸ್ತೆಗೆ ಹೊಂದಿಕೊಂಡ ಶೋಲ್ಡರ್ ಕೊಚ್ಚಿಹೋಗಿ ಆಳವಾದ ಗುಂಡಿ ಬಿದ್ದಿರುವುದು

ಮಾನ್ವಿ ಘಟನೆಯಿಂದ ಎಚ್ಚೆತ್ತುಕೊಳ್ಳಬೇಕಿದೆ ಆಡಳಿತ ಪ್ರಮುಖ ರಸ್ತೆಗಳ ನಿರ್ವಹಣೆಗೆ ಅನುದಾನ ನೀಡಿ ರಸ್ತೆಗಳ ಮಧ್ಯೆ ಗುಂಡಿ, ಕೊಚ್ಚಿ ಹೋದ ಶೋಲ್ಡರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.