ರಾಯಚೂರು: ‘ವ್ಯಾಪಾರ ವಹಿವಾಟಿನಲ್ಲಿ ರಾಜ್ಯದ ಜಿಲ್ಲೆಗಳ ಸ್ಥಾನದಲ್ಲಿ ರಾಯಚೂರು 14ನೇ ಸ್ಥಾನದಲ್ಲಿದೆ’ ಎಂದು ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಮಾಲೋಚಕ ಸತೀಶ ಕೋಟಾ ಹೇಳಿದರು.
ನಗರದ ರಂಜಿತಾ ಪ್ಯಾಲೇಸ್ನಲ್ಲಿ ಬುಧವಾರ ಉದ್ಯಮಿಗಳು ಹಾಗೂ ವ್ಯಾಪಾರಿಗಳಿಗೆ ಏರ್ಪಡಿಸಿದ್ದ ಲೀನ್ ಯೋಜನೆ, ಝಡ್.ಇ.ಡಿ. ಹಾಗೂ ರಫ್ತು ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
‘ರಾಯಚೂರು ಜಿಲ್ಲೆಯಲ್ಲಿ ಬೆಳೆಯುವ ಗುಣಮಟ್ಟದ ಹತ್ತಿ, ಭತ್ತ, ಮೆಣಸಿನಕಾಯಿ, ಶೇಂಗಾ, ಪ್ಲಾಸ್ಟಿಕ್ ಕಚ್ಚಾ ಸಾಮಗ್ರಿಗಳು ಹಾಗೂ ಗ್ರಾನೈಟ್ ವಿದೇಶಕ್ಕೆ ರಫ್ತು ಆಗುತ್ತಿದೆ. ಒಂದು ಅಂದಾಜಿನ ಪ್ರಕಾರ ವಾರ್ಷಿಕ ₹800 ಕೋಟಿ ವ್ಯವಹಾರ ನಡೆಯುತ್ತಿದೆ’ ಎಂದು ತಿಳಿಸಿದರು.
‘ವ್ಯಾಪಾರ ವಹಿವಾಟು ವಿಸ್ತರಿಸುವ ದಿಸೆಯಲ್ಲಿ ಉದ್ಯಮಿಗಳು ಆನ್ಲೈನ್ ಪ್ರಚಾರ ವಿಧಾನವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು’ ಎಂದು ಉದ್ಯಮಿಗಳಿಗೆ ಸಲಹೆ ನೀಡಿದರು.
‘ರಫ್ತು ಮಾಡಲು ಅನೇಕ ಗ್ರುಪ್ಗಳು ಇವೆ. ಇದರಲ್ಲಿ ಅಮೆಜಾನ್ ಒಂದು. ಅಮೆಜಾನ್ 13 ದೇಶಗಳಲ್ಲಿ ವಹಿವಾಟು ನಡೆಸುತ್ತಿದೆ. ಇದರ ಮೂಲಕವೇ ಇಲ್ಲಿಯ ಉದ್ಯಮಿಗಳು 52 ದೇಶಗಳೊಂದಿಗೆ ವಹಿವಾಟು ಮಾಡಲು ಸಾಧ್ಯವಿದೆ’ ಎಂದು ವಿವರಿಸಿದರು.
‘ರಫ್ತುದಾರರಿಗೆ ಜಿಎಸ್ಟಿ ಕಡ್ಡಾಯ. ಕಂಪನಿಯ ಲೊಗೊ, ಟ್ರೇಡ್ ಮಾರ್ಕ್ ವಹಿವಾಟಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಬ್ಯಾಂಕಿಂಗ್ ಹಾಗೂ ವಿದೇಶ ವಿನಿಯಮದ ಅರಿವು ಸಹ ಇರಬೇಕು. ಇಷ್ಟು ಇದ್ದರೆ ಉತ್ಪನ್ನಗಳ ರಫ್ತು ವಹಿವಾಟು ಸುಲಭವಾಗಲಿದೆ’ ಎಂದು ತಿಳಿಸಿದರು.
‘ಫೆಬ್ರುವರಿಯಲ್ಲಿ ಉತ್ಪನ್ನಗಳ ರಫ್ತಿಗೆ ಗ್ರಾಹಕರನ್ನು ಹುಡುಕುವುದು ಸುಲಭ ಕಾರಣ. ಸೌದಿ ಅರೇಬಿಯಾದಂತಹ ರಾಷ್ಟ್ರಗಳು ದೊಡ್ಡಮಟ್ಟದ ವ್ಯಾಪಾರ ಮೇಳ ಆಯೋಜಿಸುತ್ತವೆ. ಅಂತಹ ಮೇಳದಲ್ಲಿ ಉತ್ಪನ್ನಗಳನ್ನು ಸಮರ್ಥ ರೀತಿಯಲ್ಲಿ ಪರಿಚಯಿಸಿದರೆ ಸಾಕು. ವಹಿವಾಟಿಗೆ ದಾರಿಯಾಗುತ್ತದೆ’ ಎಂದು ಹೇಳಿದರು.
‘ಯಾವ ಉತ್ಪನ್ನಗಳು ಮಾರಾಟ ಮಾಡಬೇಕು. ಯಾವ ದೇಶಗಳಲ್ಲಿ ಮಾರಾಟಕ್ಕೆ ಅವಕಾಶಗಳು ಇವೆ. ರಿಯಾಯಿತಿಗಳು ಇವೆ. ಉತ್ಪನ್ನಗಳ ಕೋಡ್ಗಳು, ಗುಣಮಟ್ಟದ ಪ್ಯಾಕಿಂಗ್ ವಿಧಾನ, ನೋಂದಣಿ, ಪರವಾನಗಿ ಇವೆಲ್ಲವುಗಳ ಅರಿವು ಸಹ ಉದ್ಯಮಿಗಳಿಗೆ ಅಗತ್ಯ’ ಎಂದು ತಿಳಿಸಿದರು.
‘ದೇಶದಲ್ಲಿ ಉತ್ಪಾದನೆಯಾಗುವ ಶೇಕಡ 70ರಷ್ಟು ಅರಿಷಿಣ ವಿದೇಶಕ್ಕೆ ರಫ್ತು ಆಗುತ್ತದೆ. ಕೊಲ್ಲಿ ರಾಷ್ಟ್ರಗಳು ಭಾರತದಿಂದ ಅರಿಷಿಣ ಖರಿದೀಸಿ ಬೇರೆ ರಾಷ್ಟ್ರಗಳಿಗೆ ರಫ್ತು ಮಾಡುತ್ತಿವೆ. ಇಲ್ಲಿಯ ಉದ್ಯಮಿಗಳೇ ನೇರವಾಗಿ ವ್ಯಾಪಾರ ವಹಿವಾಟು ನಡೆಸಿದ ಇನ್ನೂ ಹೆಚ್ಚಿನ ಲಾಭ ಗಳಿಸಲು ಸಾಧ್ಯವಿದೆ’ ಎಂದು ಹೇಳಿದರು.
ರಾಯಚೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಎಸ್.ಕಮಲಕುಮಾರ ಮಾತನಾಡಿ, ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉತ್ತರ ಕರ್ನಾಟಕವನ್ನು ಕಡೆಗಣಿಸುತ್ತ ಬಂದಿವೆ. ಇಲ್ಲಿ ಲಭ್ಯವಿರುವ ಸಂಪತ್ತು ರಾಜ್ಯದ ಯಾವುದೇ ಭಾಗದಲ್ಲೂ ದೊರಕುವುದಿಲ್ಲ. ಕೈಗಾರಿಕೋದ್ಯಮದ ಅಭಿವೃದ್ಧಿ ದೃಷ್ಟಿಯಿಂದ ಕಾರ್ಯಾಗಾರ ಆಯೋಜಿಸಲಾಗಿದೆ’ ಎಂದರು.
ಕಾಟನ್, ಜಿನ್ನಿಂಗ್ ಹಾಗೂ ಪ್ರೆಸ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷ ವಿ.ಲಕ್ಷ್ಮೀರೆಡ್ಡಿ ಮಾತನಾಡಿ, ‘ಹೈದರಾಬಾದ್ ಕರ್ನಾಟಕ ಪ್ರದೇಶದಗಳಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಅನುಕೂಲಗಳು ಕಡಿಮೆ ಇವೆ. ಹೀಗಾಗಿ ಕೈಗಾರಿಕೆಗಳ ಅಭಿವೃದ್ಧಿಗೆ ಲೀನ್ ಯೋಜನೆ, ಝಡ್ಇಡಿ ಹಾಗೂ ರಫ್ತು ಪ್ರಕ್ರಿಯೆ ಮಹತ್ವದ ಪಾತ್ರ ವಹಿಸಬಲ್ಲದು’ ಎಂದು ಅಭಿಪ್ರಾಯಪಟ್ಟರು.
ಮಾರಂ ತಿಪ್ಪಣ್ಣ, ದಿನೇಶಕುಮಾರ, ವಿ.ಕೇಶವಮೂರ್ತಿ, ಕಿರಣ, ನಂದಿಕೋಲ, ಲವಕುಮಾರ ಉಪಸ್ಥಿತರಿದ್ದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ (ವಿ.ಟಿ.ಪಿ.ಸಿ) ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಹಯೋಗದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
‘ಲೀನ್ ಯೋಜನೆ ಲಾಭ ಪಡೆಯಿರಿ’
‘ಲೀನ್ ಯೋಜನೆಯು ಕೈಗಾರಿಕೋದ್ಯಮಿಗಳು ಹಾಗೂ ಇತರೆ ವ್ಯಾಪಾರಿಗಳಿಗೆ ಸಹಕಾರಿಯಾಗಿದೆ. ಜಿಲ್ಲೆಯ ಉದ್ಯಮಿಗಳು ಇದರ ಪೂರ್ಣ ಲಾಭ ಪಡೆದುಕೊಳ್ಳಬೇಕು’ ಎಂದು ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕೈಗಾರಿಕೆ ಕೇಂದ್ರ ಜಂಟಿ ನಿರ್ದೇಶಕ ಬಿ.ಸತೀಶ ಹೇಳಿದರು. ‘ಲೀನ್ ಕೈಗಾರಿಕೆ ಬೆಳವಣಿಗೆಯಲ್ಲೂ ಮಹತ್ವದ ಪಾತ್ರ ವಹಿಸುತ್ತದೆ. ಸೂಕ್ಷ್ಮ ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ಲೀನ್ ಹೆಚ್ಚು ಅನುಕೂಲವಾಗಿದೆ’ ಎಂದು ತಿಳಿಸಿದರು.
ಗುಣಮಟ್ಟದ ಸೈಂದವಲವಣ ಸಿಗುವುದು ಪಾಕಿಸ್ತಾನದಲ್ಲಿ. ನೇರ ವಹಿವಾಟು ಇಲ್ಲದ ಕಾರಣ ದುಬೈ ಪಾಕಿಸ್ತಾನದ ಸೈಂದವಲವಣ ಖರೀದಿಸಿ ಭಾರತಕ್ಕೆ ರಫ್ತು ಮಾಡುತ್ತಿದೆ- ಸತೀಶ ಕೋಟಾ, ಸಮಾಲೋಚಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.