ADVERTISEMENT

ರಾಯಚೂರು ಉತ್ಸವಕ್ಕೆ ಸಿದ್ಧತೆ ಆರಂಭವಾಗಲಿ

ಸಭೆಯಲ್ಲಿ ಜಿಲ್ಲಾಧಿಕಾರಿ ನಿತೀಶ್ ಅಧಿಕಾರಿಗಳಿಗೆ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 5:19 IST
Last Updated 23 ಡಿಸೆಂಬರ್ 2025, 5:19 IST
ರಾಯಚೂರಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ರಾಯಚೂರು ಉತ್ಸವ-26ರ ಪೂರ್ವಭಾವಿ ಸಭೆಯಲ್ಲಿ ನಿತೀಶ್ ಕೆ. ಮಾತನಾಡಿದರು. ಈಶ್ವರಕುಮಾರ ಕಾಂದೂ, ಜುನಿನ್‌ ಮೊಹಾಪಾತ್ರ ಹಾಗೂ ಶಿವಾನಂದ ಭಜಂತ್ರಿ ಉಪಸ್ಥಿತರಿದ್ದರು
ರಾಯಚೂರಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ರಾಯಚೂರು ಉತ್ಸವ-26ರ ಪೂರ್ವಭಾವಿ ಸಭೆಯಲ್ಲಿ ನಿತೀಶ್ ಕೆ. ಮಾತನಾಡಿದರು. ಈಶ್ವರಕುಮಾರ ಕಾಂದೂ, ಜುನಿನ್‌ ಮೊಹಾಪಾತ್ರ ಹಾಗೂ ಶಿವಾನಂದ ಭಜಂತ್ರಿ ಉಪಸ್ಥಿತರಿದ್ದರು   

ರಾಯಚೂರು: ‘ಬಹುವರ್ಷಗಳ ನಂತರ ಜಿಲ್ಲೆಯಲ್ಲಿ 2026ರ ಜನವರಿ 29, 30 ಹಾಗೂ 31ರಂದು ಮೂರು ದಿನಗಳ‌ ಕಾಲ ರಾಯಚೂರು ಉತ್ಸವ‌‌ ನಿಗದಿಯಾಗಿದೆ. ಇದು ರಾಯಚೂರು ನಗರಕ್ಕಷ್ಟೇ ಸೀಮಿತವಲ್ಲ. ಇದು ಇಡೀ ಜಿಲ್ಲೆಯ ಉತ್ಸವವಾಗಿದೆ. ಅಧಿಕಾರಿಗಳು ಸಿದ್ಧತಾ ಕಾರ್ಯವು ಇಂದಿನಿಂದಲೇ ಆರಂಭವಾಗಬೇಕು’ ಎಂದು ನಿತೀಶ್ ಕೆ. ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಗರದ ನೂತನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ರಾಯಚೂರು ಉತ್ಸವ-26ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಉತ್ಸವದ ಎಲ್ಲ ಕೆಲಸ-ಕಾರ್ಯಗಳ ಸುಗಮವಾಗಿ ನಡೆಯಲು ಅನುಕೂಲವಾಗುವಂತೆ
ಉತ್ಸವದ ಮೊದಲನೇ ಸಭೆಯ ಪೂರ್ವದಲ್ಲಿಯೇ ನಾವು ಸಮಿತಿಗಳನ್ನು ರಚಿಸಲಾಗಿದೆ. ಆಯಾ ಸಮಿತಿಗಳು ನಿರ್ವಹಿಸಬೇಕಾದ ಕಾರ್ಯಗಳನ್ನು ಪಟ್ಟಿ ಮಾಡಲಾಗಿದೆ. ಅದರಂತೆ ಎಲ್ಲ ಕೆಲಸ ಕಾರ್ಯಗಳು ಅಚ್ಚುಕಟ್ಟಾಗಿ ನಡೆಯಬೇಕು’ ಎಂದು ಸೂಚನೆ ನೀಡಿದರು.

ADVERTISEMENT

‘ರಾಯಚೂರು ಸಿಟಿ ಜೊತೆಗೆ ದೇವದುರ್ಗ, ಸಿರವಾರ, ಅರಕೇರಾ, ಲಿಂಗಸಗೂರು, ಮಸ್ಕಿ, ಸಿಂಧನೂರ, ಮಾನವಿ‌ ಸೇರಿದಂತೆ ಎಲ್ಲ ತಾಲ್ಲೂಕಿನ ಜನತೆ ಉತ್ಸವದಲ್ಲಿ ಭಾಗಿಯಾಗಬೇಕು. ಇದಕ್ಕಾಗಿ ಈಗಿನಿಂದಲೇ ಬಸ್ ಗಳ ವ್ಯವಸ್ಥೆಗೆ ಯೋಜನೆ ರೂಪಿಸಬೇಕು. ಮುಖ್ಯವಾಗಿ ಪೊಲೀಸ್ ಇಲಾಖೆಯು ಈಗಿನಿಂದಲೇ ಜಾಗೃತಿ ವಹಿಸಿ ಜನವರಿ 29, 30 ಹಾಗೂ 31ರಂದು ಅದ್ದೂರಿಯಾಗಿ ಜರುಗುವ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಅವಘಡಗಳಾಗಿ ಜಿಲ್ಲೆಯ ಹೆಸರು ಕೆಡದಂತೆ ಜನಸಂದಣಿ ನಿರ್ವಹಣೆಗೆ ಶಿಸ್ತುಬದ್ಧ ಯೋಜನೆ ರೂಪಿಸಬೇಕು. ವಾಹನಗಳ ಪಾರ್ಕಿಂಗ್‌ಗೆ ಮಾರ್ಗಸೂಚಿ‌ ರೂಪಿಸಿ ವಾಹನ ಮತ್ತು ಜನ ಸಂಚಾರಕ್ಕೆ ಸುಗಮ ವ್ಯವಸ್ಥೆ ಮಾಡಬೇಕು’ ಎಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕಾಂದೂ ಮಾತನಾಡಿ, ‘ಜಿಲ್ಲಾ ಉತ್ಸವವು ಅರ್ಥಪೂರ್ಣವಾಗಿ ಹಾಗೂ ವ್ಯವಸ್ಥಿತವಾಗಿ ನಡೆಯಲು ಈಗಾಗಲೇ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಅಧಿಕಾರಿ ಮತ್ತು ಸಿಬ್ಬಂದಿಗೆ ವಹಿಸಿದ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು’ ಎಂದರು.

ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಾಪಾತ್ರ ಮಾತನಾಡಿ, ‘ಅಧಿಕಾರಿಗಳು ಜಾಗ್ರತೆಯಿಂದ ಕೆಲಸ ಮಾಡಬೇಕು. ಗೊಂದಲಗಳಿದ್ದರೆ ಆರಂಭದಲ್ಲೇ ಅವುಗಳನ್ನು ಸರಿಪಡಿಸಿಕೊಳ್ಳಬೆಕು. ಯಾವುದಕ್ಕೂ ನಿರ್ಲಕ್ಷ್ಯ ಮಾಡಬಾರದು’ ಎಂದು ಎಚ್ಚರಿಕೆ ನೀಡಿದರು.

ಸ್ವಾಗತ ಮತ್ತು ಶಿಷ್ಟಾಚಾರ ಸಮಿತಿಯ ಸದಸ್ಯ ಕಾರ್ಯದರ್ಶಿ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರು ಆಯಾ ಸಮಿತಿಗಳ ವಿವರ, ನೇಮಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿವರ ಹಾಗೂ ಕೆಲಸದ ಹಂಚಿಕೆಯ ವಿವರದ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ರಾಯಚೂರು ಉಪ ವಿಭಾಗಾಧಿಕಾರಿ ಗಜಾನನ ಬಾಳೆ, ಬಸವಣ್ಣೆಪ್ಪ ಕಲಶೆಟ್ಟಿ, ಪಾಲಿಕೆಯ ಸಮಿತಿ ಕಾರ್ಯದರ್ಶಿ ಕೃಷ್ಣ ಶಾವಂತಗೇರಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಈರಣ್ಣ, ಮಹಾನಗರ ಪಾಲಿಕೆಯ ಉಪ ಆಯುಕ್ತ ಸಂತೋಷರಾಣಿ, ಆಯಾ ತಾಲ್ಲೂಕುಗಳ ತಹಶೀಲ್ದಾರರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.