ರಾಯಚೂರು: ಕೋವಿಡ್ ಹಿನ್ನೆಲೆಯಲ್ಲಿ ಮುಸ್ಲಿಮರು ತಮ್ಮ ಮನೆಗಳಲ್ಲಿಯೇ ಪ್ರಾರ್ಥನೆ ಮಾಡಿ ರಂಜಾನ್ ಹಬ್ಬವನ್ನು ಶುಕ್ರವಾರ ಸರಳವಾಗಿ ಆಚರಿಸಿದರು.
ಲಾಕ್ಡೌನ್ ಇರುವುದರಿಂದ ಮಸೀದಿ ಹಾಗೂ ಈದ್ಗ ಮೈದಾನದಲ್ಲಿ ಸಾಮೂಹಿಕ ನಮಾಜ್ ಮಾಡಲು ಸರ್ಕಾರ ನಿರ್ಬಂಧ ವಿಧಿಸಿದೆ.
ಕುಟುಂಬ ಸದಸ್ಯರೊಂದಿಗೆ ಸಾಮೂಹಿಕವಾಗಿ ಮನೆಯೊಳಗೆ ಹಾಗೂ ಮಾಳಿಗೆಗಳ ಮೇಲೆ ನಮಾಜ್ ಮಾಡಿದರು.
ಪರಸ್ಪರ ಅಲಿಂಗನ, ಕೈ ಕುಲುಕಿಸದೇ ಅಂತರ ಕಾಪಾಡಿಯೇ ಶುಭಾಶಯ ವಿನಿಮಯ ಮಾಡಿಕೊಂಡರು. ಮಕ್ಕಳು ಮಾತ್ರ ಹೊಸಬಟ್ಟೆ ಧರಿಸಿದರೆ ಬಹುತೇಕರು ಶುಭ್ರ ಬಟ್ಟೆಯಲ್ಲಿಯೇ ಹಬ್ಬ ಆಚರಿಸಿದರು.
ನೆರೆಹೊರೆಯವರನ್ನು ಹೆಚ್ಚಾಗಿ ಕರೆಯದೇ ಆಪ್ತರನ್ನು ಮಾತ್ರ ಮನೆಗಳಿಗೆ ಕರೆದು ಶಿರ್ ಖುರ್ಮಾ ವಿಶೇಷ ಊಟ ಮಾಡಿಸಿದರು. ಹಲವರು ಮನೆಗಳಿಗೆ ತೆರಳಿ ಹಂಚಿದರು. ಹಬ್ಬದ ದಿನ ತಮ್ಮ ಹಿರಿಯರ ಸಮಾಧಿಗಳಿಗೆ ಕುಟುಂಬ ಸಮೇತರಾಗಿ ಭೇಟಿ ನೀಡುತ್ತಿದ್ದು ಈ ಬಾರಿ ಕುಟುಂಬದ ಒಬ್ಬರಿಬ್ಬರು ಸದಸ್ಯರು ಮಾತ್ರ ತೆರಳಿ ಹೂ ಹಾಕಿ ಪ್ರಾರ್ಥನೆ ಮಾಡಿದರು.
ಲಾಕ್ಡೌನ್ನಿಂದಾಗಿ ವಿವಿಧ ಕಡೆ ಇರುವ ಸಂಬಂಧಿಕರು ಮನೆಗಳಿಗೆ ಭೇಟಿ ನೀಡಲು ಆಗದೇ ಸಾಮಾಜಿಕ ಜಾಲತಾಣದ ಮೂಲಕವೇ ಶುಭಾಶಯ ವಿನಿಮಯ ಮಾಡಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.