ADVERTISEMENT

ರಾಯಚೂರು | ಕಾಲುವೆಗೆ ಹರಿಯದ ನೀರು: ಆತಂಕದಲ್ಲಿ ರೈತ

ನೀರಾವರಿ ಸಲಹಾ ಸಮಿತಿ ಸಭೆ ನಿರ್ಣಯಿಸಿದರೂ ಅಧಿಕಾರಿಗಳಿಂದ ಇಲ್ಲದ ನೆಪ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 7:06 IST
Last Updated 2 ಆಗಸ್ಟ್ 2025, 7:06 IST
ಲಿಂಗಸುಗೂರು ಪಟ್ಟಣದ ಹೊರವಲಯದಲ್ಲಿರುವ ನೀರಿಲ್ಲದೆ ಬಣಗುಡುತ್ತಿರುವ ರಾಂಪುರ ಯೋಜನೆ ಮುಖ್ಯ ಕಾಲುವೆ
ಲಿಂಗಸುಗೂರು ಪಟ್ಟಣದ ಹೊರವಲಯದಲ್ಲಿರುವ ನೀರಿಲ್ಲದೆ ಬಣಗುಡುತ್ತಿರುವ ರಾಂಪುರ ಯೋಜನೆ ಮುಖ್ಯ ಕಾಲುವೆ   

ಲಿಂಗಸುಗೂರು : ಜುಲೈ 8ರಿಂದ ನಾರಾಯಣಪುರ ಬಲದಂಡೆ, ರಾಂಪುರ ಕಾಲುವೆಗಳಿಗೆ ನೀರು ಹರಿಸುವಂತೆ ಕೃಷ್ಣಾ ಮೇಲ್ದಂಡೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯಿಸಿದ್ದರೂ ಇಲ್ಲಿನ ಅಧಿಕಾರಿಗಳು ರಾಂಪುರ ಕಾಲುವೆಗೆ ನೀರು ಹರಿಸಿಲ್ಲ. ಇದರಿಂದ ರೈತರು ಆತಂಕಕ್ಕೆ ಒಳಲಾಗಿದ್ದಾರೆ. ‌

ರಾಂಪುರ ಏತ ನೀರಾವರಿ ಯೋಜನೆ ಮೂಲಕ ತಾಲ್ಲೂಕಿನ ನವಲಿ ಮತ್ತು ಆನಾಹೊಸೂರು ಗ್ರಾಮದಲ್ಲಿ ಜಾಕ್‌ವೆಲ್ ನಿರ್ಮಿಸಿ ಜಮೀನಿಗೆ ನೀರು ಹರಿಸಲಾಗುತ್ತಿದೆ. 20 ಕಿ.ಮೀ ವರೆಗೆ ಕಾಲುವೆ ನಿರ್ಮಿಸಿ 20,355 ಹೆಕ್ಟೇರ್ ಭೂಮಿಗೆ ನೀರು ಹರಿಸಲಾಗುತ್ತಿದೆ.

2018ರಲ್ಲಿ 20 ಕಿ.ಮೀನಿಂದ 27 ಕಿ.ಮೀ ವರೆಗೆ ಕಾಲುವೆ ನಿರ್ಮಿಸಿ ಯೋಜನೆ ವಿಸ್ತರಣೆ ಮಾಡಿದೆ. ಆದರೆ ವಿಸ್ತರಣೆಯಾದ 7 ಕಿ.ಮೀ ವರೆಗಿನ ಕಾಲುವೆಗೆ ನೀರು ಹರಿಸಲು ಅಧಿಕೃತ ಅಧಿಸೂಚನೆ ಹೊರಡಿಸಿಲ್ಲ. ರೈತರ ಹಿತದೃಷ್ಠಿಯಿಂದ ನೀರು ಹರಿಸಲಾಗುತ್ತಿದೆ.

ADVERTISEMENT

ಮೋಟಾರ್ ಪಂಪ್ ದುರಸ್ತಿ ನೆಪ: ಜುಲೈ 8ರಿಂದ 120 ದಿನಗಳ ಕಾಲ ಕೃಷ್ಣಾ ಅಚ್ಚುಕಟ್ಟು ಪ್ರದೇಶಗಳ ಕಾಲುವೆಗೆ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯಿಸಿದೆ. ಅದಕ್ಕೆ ಬೇಕಾಗುವ ಸಿದ್ಧತೆ ಮಾಡಿಕೊಳ್ಳುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ನವಲಿ ಮತ್ತು ಆನಾಹೊಸೂರು ಜಾಕ್‌ವೆಲ್‌ನಲ್ಲಿ ಮೋಟಾರ್ ಪಂಪ್ ದುರಸ್ತಿ ನೆಪವೊಡ್ಡಿ ಕೇವಲ 173 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. 173 ಕ್ಯೂಸೆಕ್ ನೀರು 20 ಕಿ.ಮೀ ವರೆಗಿನ ಮುಖ್ಯ ಕಾಲುವೆಗಳಿಗೆ ಹಾಗೂ ವಿತರಣಾ ಕಾಲುವೆಗಳಿಗೆ ಯಾವಾಗ ತಲುಪಬೇಕು ಎಂಬುದು ರೈತರ ಪ್ರಶ್ನೆಯಾಗಿದೆ.

ಆನಾಹೊಸೂರು ಜಾಕ್‌ವೆಲ್‌ನಲ್ಲಿ ಎರಡು ಮೋಟಾರು ಪಂಪ್‌ಗಳು ಕೆಟ್ಟು ನಿಂತು ವರ್ಷಗಳೇ ಕಳೆದರೂ ರಿಪೇರಿ ಮಾಡಿಸುವಲ್ಲಿ ನೀರಾವರಿ ಇಲಾಖೆರ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಬೇಸಿಗೆ ಸಮಯದಲ್ಲಿ ಪಂಪ್ ರಿಪೇರಿ ಮಾಡಿಸಿ ಮುಂಗಾರು ಹಂಗಾಮಿನಲ್ಲಿ ಸಮರ್ಪಕ ನೀರು ಹರಿಸದೇ ನೀರು ಬಿಡುವ ಸಮಯದಲ್ಲಿ ಓಡಾಡುತ್ತಿದ್ದಾರೆ. ಅಧಿಕಾರಿಗಳು ರೈತರ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ರೈತ ಬಸವರಾಜ ಹೊಸಳ್ಳಿ ಆರೋಪಿಸಿದ್ದಾರೆ.

ಬೆಳೆ ರಕ್ಷಣೆಯೇ ಸವಾಲು: ರಾಂಪುರ ಕಾಲುವೆಯ ನೀರನ್ನೇ ನೆಚ್ಚಿಕೊಂಡು ಯೋಜನೆ ವ್ಯಾಪ್ತಿಯ ರೈತರು ಭತ್ತ, ಮೆಣಸಿನಕಾಯಿ, ತೊಗರಿ, ಮೆಕ್ಕೆಜೋಳ ಸೇರಿ ಇತರೆ ಬೆಳೆ ಭಿತ್ತನೆ ಮಾಡಿದ್ದಾರೆ.

ಕೆಲ ರೈತರು ಜೂನ್‌ನಲ್ಲಿ ಮುಂಗಾರು ಪ್ರವೇಶ ಮುಂಚಿತವಾಗಿ ಭಿತ್ತನೆ ಮಾಡಿದ್ದಾರೆ, ಇನ್ನೂ ಕೆಲವರು ನಂತರ ಬಿತ್ತನೆ ಮಾಡಿದ್ದಾರೆ. ಬಿತ್ತನೆ ಮಾಡಿದ ಬೆಳೆಗಳಿಗೆ ಪ್ರಸ್ತುತ ನೀರಿನ ಅವಶ್ಯಕತೆ ಬಹಳ ಇದೆ. ಮಳೆ ಕಡಿಮೆಯಾಗಿದ್ದು, ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸಿದರೆ ಮಾತ್ರ ಬೆಳೆಗಳು ಸಮೃದ್ಧಿಯಾಗಿ ಬೆಳೆದು ರೈತನ ಕೈಹಿಡಿಯುತ್ತವೆ. ಇಲ್ಲದಿದ್ದರೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಎಂದು ರೈತ ಮಲ್ಲಿಕಾರ್ಜುನ ಭೂಪುರ ಹೇಳಿದರು.

ಆನಾಹೊಸೂರು ಜಾಕ್‌ವೆಲ್‌ನಲ್ಲಿ ಮೋಟಾರ್‌ ಪಂಪ್ ಕೆಟ್ಟಿವೆ ಎಂದು ನೆಪ ಹೇಳುವ ಅಧಿಕಾರಿಗಳಿಗೆ  ನೀರು ಹರಿಸುವ ಮುಂಚೆ ರಿಪೇರಿ ಮಾಡಿಸುವ ಆಲೋಚನೆ ಬರುವುದಿಲ್ಲವಾ. ರೈತರನ್ನು ಸಂಕಷ್ಟಕ್ಕೆ ತಳ್ಳುವುದೇ ಅಧಿಕಾರಿಗಳ ಕೆಲಸವಾಗಿದೆ ಶಿವಪುತ್ರಗೌಡ ಜಾಗಿರನಂದಿಹಾಳ ಅಧ್ಯಕ್ಷ ರೈತ ಸಂಘದ ಜಿಲ್ಲಾ ಘಟಕ ರಾಯಚೂರು   ಆನಾಹೊಸೂರು ಜಾಕ್‌ವೆಲ್‌ನಲ್ಲಿ ಎರಡು ಪಂಪ್‌ಗಳು ದುರಸ್ತಿಯಲ್ಲಿವೆ. ಒಂದು ಪಂಪ್‌ನಿಂದ ನೀರು ಹರಿಸಲಾಗುತ್ತಿದೆ ಆದರೆ ಅದು ರೈತರ ಜಮೀನಿಗೆ ಸಮರ್ಪಕವಾಗಿ ಹರಿಯುತ್ತಿಲ್ಲ. ಮೋಟಾರ್‌ಗಳ ರಿಪೇರಿಗೆ ಟೆಂಡರ್ ಕರೆಯಲಾಗಿದೆ ಅಲ್ಲಿವರಿಗೂ ತಾತ್ಕಾಲಿಕವಾಗಿ ಮೋಟಾರ್‌ ವ್ಯವಸ್ಥೆ ಮಾಡಲಾಗುವುದು ಚಂದ್ರಕಾಂತ ಸ್ವಾಮಿ ಎಇಇ ರೋಡಲಬಂಡಾ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.