ಮಸ್ಕಿ: ಉಪ ಚುನಾವಣೆ ನಂತರ ಪಕ್ಷ ಸಂಘಟನೆಗೆ ಮುಂದಾಗಿರುವ ಬಿಜೆಪಿ ಸ್ಥಳೀಯ ಸಂಸ್ಥೆಗಳ ಹಾಗೂ 2023 ರಲ್ಲಿ ಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ತಾಲ್ಲೂಕಿನ ವಿವಿಧ ಸಮಿತಿಗಳಿಗೆ ಕಾರ್ಯಕರ್ತರನ್ನು ನೇಮಕ ಮಾಡಲು ಮುಂದಾಗಿದೆ.
ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ 10 ಕ್ಕೂ ಹೆಚ್ಚು ಸಮಿತಿಗಳಿಗೆ 50 ಕ್ಕೂ ಕಾರ್ಯಕರ್ತರನ್ನು ನೇಮಕ ಮಾಡುವ ಸಂಬಂಧ ಪಕ್ಷದ ಮಂಡಲದ ಕಡೆಯಿಂದ ಈಗಾಗಲೇ ಕಾರ್ಯಕರ್ತರ ಪಟ್ಟಿ ಶಿಫಾರಸ್ಸು ಮಾಡಲಾಗಿದೆ.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹಾಗೂ ಬಿಜೆಪಿ ಮಂಡಲ ಆಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ ಸೇರಿದಂತೆ ಪಕ್ಷದ ಮುಖಂಡರು ಕೋರ್ ಕಮಿಟಿ ಸಭೆಯಲ್ಲಿ ಕಾರ್ಯಕರ್ತರನ್ನು ಗುರುತಿಸುವ ಕೆಲಸ ಮಾಡಿದ್ದಾರೆ.
ತಾಲ್ಲೂಕು ಪಂಚಾಯಿತಿಯ ತ್ರೈಮಾಸಿಕ (ಕೆಡಿಪಿ) ಸಮಿತಿ, ಜಿಲ್ಲಾ ಪಂಚಾಯಿತಿ ಕೆಡಿಪಿ, ಪುರಸಭೆ, ಪಟ್ಟಣ ಪಂಚಾಯಿತಿ, ಆಶ್ರಯ, ಆರಾಧನಾ, ಜೆಸ್ಕಾಂ, ಆರೋಗ್ಯ ಇಲಾಖೆ, ನ್ಯಾಯಬೆಲೆ ಅಂಗಡಿ ಜಾಗೃತಿ ಸಮಿತಿ ಸೇರಿದಂತೆ ಹತ್ತಕ್ಕೂ ಹೆಚ್ಚು ಸಮಿತಿಗಳನ್ನು ಪಟ್ಟಿ ಮಾಡಿದ್ದು ಯಾವ ಕಾರ್ಯಕರ್ತರನ್ನು ಯಾವ ಸಮಿತಿಗೆ ನೇಮಕ ಮಾಡಬೇಕು. ಆ ಕಾರ್ಯಕರ್ತರ ಪಕ್ಷ ನಿಷ್ಠೆ ಎಲ್ಲವನ್ನೂ ಗುರುತಿಸಿ ಪಕ್ಷದ ವರಿಷ್ಠರಿಗೆ ರವಾನಿಸಿದ್ದಾರೆ. ಈಗಾಗಲೇ ಪಕ್ಷದಿಂದ ಅಂತಿಮ ಪಟ್ಟಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಡಿ. 14 ರ ನಂತರ ಪಟ್ಟಿ ಪ್ರಕಟವಾಗಲಿದೆ ಎಂದು ಶಿವಪುತ್ರಪ್ಪ ಅರಳಹಳ್ಳಿ ತಿಳಿಸಿದ್ದಾರೆ.
ತಾ.ಪಂ ಕೆಡಿಪಿ ಸಮಿತಿಗೆ ನೇಮಕ: ಮಸ್ಕಿ ತಾಲ್ಲೂಕು ಪಂಚಾಯಿತಿಯ ಕೆಡಿಪಿ ಸಮಿತಿಗೆ ಆರು ಜನರನ್ನು ಅಧಿಕಾರೇತರ ಸದಸ್ಯರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶಿಸಿದೆ.
ಕೆಡಿಪಿ ಸದಸ್ಯರಾಗಿ ನೇಮಕಗೊಂಡವರು ಅಕ್ಕಮಹಾದೇವಿ ಶೇಖರಪ್ಪ ತಲೇಖಾನ, ಶರಣಯ್ಯ ಸ್ವಾಮಿ ಗುಡದೂರು, ಶರಣಪ್ಪ ಶಾವಂತಗೇರಿ ತೋರಣದಿನ್ನಿ, ರಾಮಪ್ಪ ಟೋಪಣ್ಣ ಅಡವಿಭಾವಿ ತಾಂಡಾ, ಮಲ್ಲಿಕಾರ್ಜುನ ಬಸ್ಸಪ್ಪ ಜಾಲಿಹಾಳ ಗೌಡನಭಾವಿ, ಅಶೋಕ ಬಾಟಿ ಕಡದರಾಳ.
ಜಿಲ್ಲಾ ಕೆಡಿಪಿಗೆ ನೇಮಕ: ಶಿವಕುಮಾರ ವಟಗಲ್ ಅವರನ್ನು ಜಿಲ್ಲಾ ಕೆಡಿಪಿ ಸಭೆಗೆ ನೇಮಕ ಮಾಡಿ ಸರ್ಕಾರ ಆದೇಶಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.