ADVERTISEMENT

ನೇಮಕಾತಿ ಸುತ್ತೋಲೆ ಸರಿಪಡಿಸಲು ಒತ್ತಾಯ: ಪ್ರತಿಭಟನೆ ನಾಳೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2022, 4:01 IST
Last Updated 29 ಜೂನ್ 2022, 4:01 IST
ಡಾ.ರಜಾಕ್‌ ಉಸ್ತಾದ್‌
ಡಾ.ರಜಾಕ್‌ ಉಸ್ತಾದ್‌   

ರಾಯಚೂರು: ‘ಸಂವಿಧಾನದ ಕಲಂ 371(ಜೆ) ನೇಮಕಾತಿ ಸುತ್ತೋಲೆಗಳು ಗೊಂದಲದಿಂದ ಕೂಡಿವೆ. ಇದರಿಂದ ಈ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದ್ದು, ಇದನ್ನು ವಿರೋಧಿಸಿ ಈ ಭಾಗದ ಎಲ್ಲ ಜಿಲ್ಲೆಗಳಲ್ಲಿಯೂ ಜೂನ್ 30ರಂದು ಪ್ರತಿಭಟನೆ ನಡೆಲಾಗುವುದು’ ಎಂದು ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿ ಮುಖಂಡ ಡಾ.ರಜಾಕ್ ಉಸ್ತಾದ್ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಮೊದಲನೇ ಆಯ್ಕೆ ವಿಧಾನವನ್ನು 2015ರ ಮೇ 22ರಂದು ಸೂಚಿಸಲಾಯಿತು. ಇದರಲ್ಲಿ ಈ ಭಾಗದ ಅಭ್ಯರ್ಥಿಗಳ ವೃಂದ ಆಯ್ಕೆ ಕುರಿತ ಕೇಳಲಾಗಿತ್ತು. ಬಳಿಕ 16 ನವೆಂಬರ್ 2016ರಂದು ಮೆರಿಟ್ ಆಧಾರದಲ್ಲಿ ಇನ್ನುಳಿದ ವೃಂದದ ಹುದ್ದೆಗಳಿಗೆ ಆಯ್ಕೆ ಮಾಡಲು ಸೂಚಿಸಲಾಗಿತ್ತು. ಮೇ 23, 2019 ರಂದು ಮಿಕ್ಕುಳಿದ ವೃಂದ, ಸ್ಥಳೀಯ ವೃಂದಕ್ಕೆ ಪ್ರತ್ಯೇಕವಾಗಿ ಎರಡು ಅಧಿಸೂಚನೆ, ಎರಡು ಪರೀಕ್ಷಾ ಶುಲ್ಕ, ಒಂದು ಪರೀಕ್ಷೆ, ಎರಡು ಆಯ್ಕೆ ಪಟ್ಟಿ ತಯಾರಿಸಲು ಸೂಚನೆ ನೀಡಲಾಗಿತ್ತು. ಬಳಿಕ 2020ರ ಜೂನ್ 6ರಂದು ಹೊರಡಿಸಲಾದ ಸುತ್ತೋಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಯಾವ ವೃಂದ ಸೇರುತ್ತೀರಿ ಎಂದು ಆಯ್ಕೆ ಕೇಳಲಾಯಿತು. ಇದು ಗೊಂದಲಕ್ಕೆ ಕಾರಣವಾಗಿ, ಹಲವಾರು ನೇಮಕಾತಿ ಪ್ರಕ್ರಿಯೆಗಳು ಈಗಾಗಲೇ ಸ್ಥಗಿತಗೊಂಡಿವೆ ಎಂದು ಆರೋಪಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ವಿರುದ್ಧವಾಗಿರುವ ಸುತ್ತೋಲೆಗಳನ್ನು ತಕ್ಷಣ ವಾಪಸ್ ಪಡೆದು 16-11-2016 ರ ಸುತ್ತೋಲೆಯಲ್ಲಿರುವ ಅಂಶದಂತೆ ಮೆರಿಟ್ ಆಧಾರದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳನ್ನು ಮೊದಲಿಗೆ ಮಿಕ್ಕುಳಿದ ವೃಂದದ ಹುದ್ದೆಗಳಿಗೆ ಪರಿಗಣಿಸಿ ಆಯ್ಕೆ ಪಟ್ಟಿ ತಯಾರಿಸಬೇಕು. ಇನ್ನುಳಿದ ಅಭ್ಯರ್ಥಿಗಳನ್ನು ಸ್ಥಳೀಯ ವೃಂದದ ಹುದ್ದೆಗಳಿಗೆ ಪರಿಗಣಿಸಿ ಆಯ್ಕೆ ಪಟ್ಟಿ ತಯಾರಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಈ ಗೊಂದಲಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಪಕ್ಷಾತೀತವಾಗಿ ಎಲ್ಲ ಸಂಘಟನೆಗಳ ಕಾರ್ಯಕರ್ತರೂ ಹೋರಾಟದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ವಿಶ್ವನಾಥ ಪಟ್ಟಿ, ವಿನೋದರೆಡ್ಡಿ, ಖಲೀಲ್ ಪಾಷಾ ಹಾಗೂ ಮಹಮ್ಮದ್ ರಫಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.