ಮುದಗಲ್: ‘ಕಲ್ಯಾಣ ಪಥ ಯೋಜನೆ ಅನುಷ್ಠಾನಗೊಳಿಸುವ ಮೂಲಕ ಗ್ರಾಮೀಣ ರಸ್ತೆ ಸುಧಾರಣೆಗೆ ಆದ್ಯತೆ ನೀಡಲಾಗುವುದು’ ಎಂದು ರಾಯಚೂರು ಸಂಸದ ಜಿ.ಕುಮಾರ ನಾಯಕ ಹೇಳಿದರು.
ಸಮೀಪದ ಪೈಗಂಬರ್ ನಗರದಿಂದ ಜಕ್ಕೇರುಮಡು ಗ್ರಾಮದವರೆಗೆ ಕೆ.ಕೆ.ಆರ್.ಡಿ.ಬಿಯ ಮ್ಯಾಕ್ರೊ ಯೋಜನೆಯ ₹74.32 ಲಕ್ಷ ಅನುದಾನದ ಡಾಂಬರು ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
‘ಲಿಂಗಸುಗೂರು ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಮೂಲ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಲಿಂಗಸುಗೂರು ವಿಧಾನಸಭಾ ಕ್ಷೇತ್ರಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಹೆಚ್ಚಿನ ಅನುದಾನವನ್ನು ತಂದು ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ’ ಎಂದರು.
ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ಮಾತನಾಡಿ,‘ಸಂಸದರೊಂದಿಗೆ ನಾವು ಕೂಡ ಕೈ ಜೋಡಿಸಿ ಅನುದಾನ ನೀಡಿ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದು ಹೇಳಿದರು.
ಮಾಜಿ ಶಾಸಕ ಡಿ.ಎಸ್.ಹೂಲಗೇರಿ, ರಾಹುಲ್ ಗಾಂಧಿ ಯುವ ಬ್ರಿಗೇಡ್ನ ರಾಜ್ಯ ಕಾರ್ಯದರ್ಶಿ ಶೇಖ್ ರಸೂಲ್ ಮಾತನಾಡಿದರು.
ತಮ್ಮಣ್ಣ ಗುತ್ತೇದಾರ, ಅಜ್ಮೀರ್ ಬೆಳ್ಳಿಕಟ್, ಬಸವರಾಜ ಲೆಕ್ಕಿಹಾಳ, ಮಲ್ಲರೆಡ್ಡೆಪ್ಪ, ಬಸವಂತಪ್ಪ ಮಟ್ಟೂರು, ಅಜೀಂಸಾಬ್, ನ್ಯಾಮತ್ ಖಾದ್ರಿ, ಅಮೀರ್ ಬೇಗ್ ಉಸ್ತಾದ್, ತಸ್ಲೀಂ ಮುಲ್ಲಾ, ಅಮೀರ್ ಹುಸೇನ್ ಕೋರಿ, ರಘುವೀರ ಮುದಗಲ್, ಮಹ್ಮದ್ ಅಲಿ, ಸಂಗಮೇಶ ಸರಗಣಾಚಾರಿ, ಖದೀರ್ ಪಾನವಾಲೆ, ಗಫೂರ್ ಖಾನ್ ಹಾಗೂ ಸೈಯದ್ ಸಾಬ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.