ADVERTISEMENT

ದ್ರುವನಾರಾಯಣ ಅಗಲಿಕೆಯಿಂದ ದುಃಖ: ಬಿ.ವಿ.ನಾಯಕ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 8:22 IST
Last Updated 11 ಮಾರ್ಚ್ 2023, 8:22 IST
   

ರಾಯಚೂರು: ದ್ರುವನಾರಾಯಣ ಅವರ ಅಕಾಲಿಕ ಮರಣವು ಪಕ್ಷಕ್ಕೆ ಅಲ್ಲದೇ ವೈಯಕ್ತಿಕವಾಗಿಯೂ ಭಾರಿ ದುಃಖವನ್ನುಂಟು ಮಾಡಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ನಾಯಕ ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದ್ರುವನಾರಾಯಣ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ದ್ರುವನಾರಾಯಣರು ಪಕ್ಷಕ್ಕೆ ನಿಷ್ಠವಂತರು, ಪ್ರಾಮಾಣಿಕ ಹಾಗೂ ಶಿಸ್ತಿನ ನಾಯಕರಾಗಿದ್ದರು. ಅತ್ಯಂತ ಮೃದು ಸ್ವಭಾವಿಯಾಗಿದ್ದರೂ ಕೂಡ ತುಂಬಾ ಸಂಘಟನಾ ಚತುರರಾಗಿದ್ದರು. ಮಸ್ಕಿಯಲ್ಲಿ ನಡೆದ ಉಪಚುನಾವಣೆಯಲ್ಲಿ ಪಕ್ಷದ ಉಸ್ತುವಾರಿಯಾಗಿ ಕೆಲಸ ಮಾಡಿ ತಮ್ಮ ಸಂಘಟನಾತ್ಮಕ ಶಕ್ತಿಯಿಂದ ಜಿಲ್ಲೆಯ ಎಲ್ಲಾ ನಾಯಕರನ್ನು ಒಗ್ಗೂಡಿಸಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕಾರಣೀಭೂತರಾದರು ಎಂದು ಸ್ಮರಿಸಿದರು.

ADVERTISEMENT

ಧ್ರುವನಾರಾಯಣರು ತಮ್ಮ ಕಾರ್ಯವೈಖರಿಯಿಂದ ರಾಜ್ಯದ ಹಾಗೂ ರಾಷ್ಟ್ರದ ಎಲ್ಲಾ ನಾಯಕರುಗಳೊಂದಿಗೆ, ಉತ್ತಮವಾದ ಸಂಬಂಧವನ್ನು ಹೊಂದಿದ್ದರು. ಕಳೆದ ಲೋಕಸಭೆಯಲ್ಲಿ ಅವರ ಜೊತೆಗೆ ಐದು ವರ್ಷಗಳ ಕಾಲ ಕೆಲಸ ಮಾಡುವುದರ ಮುಖಾಂತರ ಅವರನ್ನು ಅತ್ಯಂತ ಹತ್ತಿರದಿಂದ ಬಲ್ಲವನ್ನಾಗಿದ್ದೇನೆ ಎಂದು ತಿಳಿಸಿದರು.

‘ನಾನು ವೈಯಕ್ತಿಕವಾಗಿ ನನ್ನ ಕುಟುಂಬದ ಸದಸ್ಯನನ್ನೆ ಕಳೆದುಕೊಂಡೆ ಎನ್ನುವಷ್ಟು ದುಃಖವಾಗಿದೆ’ ಎಂದು ಗದ್ಗದಿತರಾಗಿ ನುಡಿದರು.

ಕೆ‍ಪಿಸಿಸಿ ಕಾರ್ಯದರ್ಶಿ ಎ.ವಸಂತಕುಮಾರ ಮಾತನಾಡಿ, ದಿ. ಧ್ರುವನಾರಾಯಣರಲ್ಲಿದ್ದ ಶಿಸ್ತು, ಪ್ರಾಮಾಣಿಕತೆ, ಸಂಘಟನೆಯ ವಿಚಾರಗಳನ್ನು ತಿಳಿಸಿದರು.

‘ಪಕ್ಷದ ಕಾರ್ಯಾಧ್ಯಕ್ಷರಾಗಿ ರಾಜ್ಯ ಹಾಗೂ ವಿಶೇಷವಾಗಿ ಹಳೆ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿ ರಾಜ್ಯ ಹಾಗೂ ರಾಷ್ಟ್ರ ನಾಯಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರ ಅಕಾಲಿಕ ನಿಧನ ಕೇವಲ ಕಾಂಗ್ರೆಸ್ ಪಕ್ಷಕ್ಕೆ ನಷ್ಟವಲ್ಲದೆ ಇಡೀ ಕರ್ನಾಟಕ ರಾಜ್ಯಕ್ಕೆ ತುಂಬಲಾರದ ಹಾನಿಯಾಗಿದೆ’ ಎಂದು ತಿಳಿಸಿದರು.
ಕೇವಲ 61ನೇ ವಯಸ್ಸಿಗೆ ಅಕಾಲಿಕವಾಗಿ ನಿಧನರಾದ ದ್ರವನಾರಾಯಣರಿಗೆ ಪಕ್ಷದ ಪರವಾಗಿ ಶ್ರದ್ಧಾಂಜಲಿ ಸಮರ್ಪಿಸುವದರೊಂದಿಗೆ, ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಎಂದು ತಿಳಿಸಿದರು.

ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು, ಮುಖಂಡರಾದ ಸೈಯದ್ ಯಾಸೀನ್, ಶರಣಪ್ಪ ಮಟ್ಟೂರು ಮಾತನಾಡಿದರು. ಪಕ್ಷದ ಮುಖಂಡರಾದ ಜಿ.ಬಸವರಾಜರೆಡ್ಡಿ, ಜಯಣ್ಣ, ಕೆ.ಶಾಂತಪ್ಪ, ಅಮರೇಗೌಡ ಹಂಚಿನಾಳ, ಅಬ್ದುಲ್ ಕರೀಂ, ಜಿ.ಶಿವಮೂರ್ತಿ, ತಾಯಣ್ಣ ನಾಯಕ, ರುದ್ರಪ್ಪ ಅಂಗಡಿ, ಅಸ್ಲಂ ಪಾಷಾ ಮತ್ತಿತರರು ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.