ರಾಯಚೂರು: ಸಂಕ್ರಮಣ ದಿನದಂದು ಅಯ್ಯಪ್ಪಸ್ವಾಮಿ ಪಲ್ಲಕ್ಕಿ ಮಹೋತ್ಸವ, ಮಹಾಮಂಡಲ ಪಡಿಪೂಜೆ ಮತ್ತು ಹೋಂ ಹವನ ಪೂಜಾ ಕಾರ್ಯಕ್ರಮಗಳು ಭಕ್ತಿಭಾವದೊಂದಿಗೆ ಗುರುವಾರ ನೆರವೇರಿದವು.
ನಗರದ ವಾಲ್ಕಟ್ ಮೈದಾನದಲ್ಲಿ ಎನ್.ಎಸ್.ಬೋಸರಾಜು ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಯ್ಯಪ್ಪ ಭಕ್ತರು, ಗುರುಸ್ವಾಮಿಗಳುಭಾಗಿಯಾಗಿದ್ದರು.
ನಗರದ ಎಲ್ಲಾ ಆಶ್ರಮಗಳ ಗುರುಸ್ವಾಮಿ ಹಾಗೂಅಯ್ಯಪ್ಪಭಕ್ತರ ನೇತೃತ್ವದಲ್ಲಿ ಈ ಚಕ್ರ ಜ್ಯೋತಿ ದರ್ಶನ, ಮಹಾಮಂಗಳಾರತಿ, ಅಯ್ಯಪ್ಪಸ್ವಾಮಿ ಮೂರ್ತಿಯ ಮೆರವಣಿಗೆ ನಡೆಯಿತು. ಶ್ರದ್ಧಾಭಾವದಲ್ಲಿ ಮುಳುಗಿದ್ದ ಭಕ್ತಾದಿಗಳೆಲ್ಲ ಮೆರವಣಿಗೆ ಉದ್ದಕ್ಕೂ ಜಯಘೋಷಗಳು, ಅಯ್ಯಪ್ಪಸ್ವಾಮಿ ಪರ ಭಕ್ತಪ್ರದಾನ ಹಾಡು ಹೇಳಿದರು. ಅಯ್ಯಪ್ಪಸ್ವಾಮಿ ಮಾಲೆ ಧರಿಸಿದ್ದ ಭಕ್ತರು ಬರಿಗಾಲಿನಲ್ಲಿಯೇ ಸೇವೆ ಸಲ್ಲಿಸಿದರು.
ವ್ರತಾಚರಣೆ ಮಾಡಿದ್ದ ಅಯ್ಯಪ್ಪಸ್ವಾಮಿ ಭಕ್ತರು ಈ ವರ್ಷ ಮಕರ ಸಂಕ್ರಮಣ ದಿನದಂದು ಶಬಲಿಮಲೆಗೆ ಹೋಗುವುದಕ್ಕೆ ಸಾಧ್ಯವಾಗಲಿಲ್ಲ. ಕೋವಿಡ್ ಕಾರಣದಿಂದ ಈ ವರ್ಷ ಮಕರಜ್ಯೋತಿ ದರ್ಶನಕ್ಕಾಗಿ ಜನರು ಸೇರುವುದನ್ನು ನಿರ್ಬಂಧ ಹಾಕಲಾಗಿದೆ. ಹೀಗಾಗಿ ಸ್ಥಳೀಯವಾಗಿಯೇ ಸ್ವಾಮಿಯನ್ನು ಸ್ಮರಿಸಿ, ವಿಶೇಷ ಪೂಜೆ ನೆರವೇರಿಸಲಾಯಿತು.
ನೆರೆದ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಮೈದಾನದಲ್ಲಿ ವಿಶಾಲವಾದ ಪೆಂಡಾಲ್ ಹಾಕಲಾಗಿತ್ತು. 18 ಮೆಟ್ಟಿಲುಗಳ ಅಲಂಕಾರ ಮತ್ತು ಅಯ್ಯಪ್ಪಸ್ವಾಮಿ ದೇವಸ್ಥಾನ ಮಾದರಿಗಳು ಭಕ್ತಿಭಾವ ಹೆಚ್ಚಿಸುವಂತಿದ್ದವು.
ಪೂಜಾ ಕಾರ್ಯಗಳಲ್ಲಿ ಎನ್.ಎಸ್.ಬೋಸರಾಜು, ರವಿ ಬೋಸರಾಜು ದಂಪತಿ, ಬಿ.ರಮೇಶ, ಜಿ. ತಿಮ್ಮಾರೆಡ್ಡಿ, ಜಿ.ಬಸವರಾಜ ರೆಡ್ಡಿ, ದೇವಣ್ಣ ನಾಯಕ, ಅಯ್ಯಪ್ಪಮಾಲಾಧಾರಿ ಡಿ.ವೀರೇಶ, ಗುರು ವಿಶ್ವಕರ್ಮ, ಕೇಶವರೆಡ್ಡಿ, ಮಹೇಂದ್ರ, ಸಂಜು ಆಚಾರಿ, ಮಹಾಂತೇಶ, ಪ್ರಭುಕಾಂತ ಮತ್ತಿತರರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.