ಜಾಲಹಳ್ಳಿ: ‘ಪಟ್ಟಣದ ಸುತ್ತಲಿನ ಗ್ರಾಮಗಳಲ್ಲಿ ಈಚೆಗೆ ಚಿರತೆ ಹಾಗೂ ಮಂಗಳ ಹಾವಳಿ ಹೆಚ್ಚಾಗಿದ್ದು, ಅವುಗಳ ಸ್ಥಳಾಂತರಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಸ್ಥಳೀಯ ಪ್ರಾಂತ ರೈತ ಸಂಘಟನೆಯ ಪದಾಧಿಕಾರಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಉಪ ತಹಶೀಲ್ದಾರ್ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ದುರಗಪ್ಪ ನಾಯಕ, ‘ಸ್ಥಳೀಯರಿಗೆ ಸೇರಿದ ಮೂರು ಹಸುಗಳನ್ನು ಚಿರತೆ ಕೊಂದು ಹಾಕಿದೆ. ಅವುಗಳ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕು. ಮಂಗಗಳನ್ನು ಬೇರೆ ಕಡೆ ಸೆರೆಹಿಡಿದು ಪಟ್ಟಣದ ಸುತ್ತಮುತ್ತ ಬಿಟ್ಟು ಹೋಗಿರುವ ಕಾರಣ ಮಂಗಳ ಸಂಖ್ಯೆ ವ್ಯಾಪಕವಾಗಿ ಹೆಚ್ಚಿದೆ. ರೈತರು ಬೆಳೆದ ವಿವಿಧ ಬೆಳೆಗಳನ್ನು ಮಂಗಳಗಳು ಹಾಳು ಮಾಡುತ್ತಿವೆ. ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಮಂಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸೆರೆಹಿಡಿದು ಬೇರೆ ಕಡೆ ಸಾಗಿಸಬೇಕು’ ಎಂದು ಒತ್ತಾಯಿಸಿದರು.
‘ಅರಣ್ಯ ಇಲಾಖೆಯ ಅಧಿಕಾರಿ ಚನ್ನಬಸವರಾಜ ಕಟ್ಟಿನಮನಿ, ಗಿರಿಯಪ್ಪ ಅವರು ಲಿಖಿತ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು’ ಎಂದು ಸಂಘಟನೆಯ ಕಾರ್ಯದರ್ಶಿ ರಂಗನಾಥ ನಾಯಕ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗುಂಡಪ್ಪ, ಕರವಸೂಲಿಗಾರ ವೆಂಕೋಬ ಪಲಕನಮರಡಿ ಸೇರಿದಂತೆ ಅನೇಕ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.