ADVERTISEMENT

ರಾಯಚೂರು: ನೀರು, ಬೀದಿದೀಪ ನಿರ್ವಹಣೆಯಲ್ಲಿ ಸಮನ್ವಯತೆ ಸಾಧಿಸಿ –ಶಾಸಕ

ನಗರಸಭೆ ಅಧಿಕಾರಿಗಳೊಂದಿಗೆ ಶಾಸಕರ ಸಭೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 14:55 IST
Last Updated 6 ಜನವರಿ 2022, 14:55 IST
ರಾಯಚೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ ಅವರು ನಗರ ಅಭಿವೃದ್ಧಿಗೆ ಸಂಬಂಧಿಸಿದಂತೆ ಗುರುವಾರ ಅಧಿಕಾರಿಗಳ ಸಭೆ ನಡೆಸಿದರು
ರಾಯಚೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ ಅವರು ನಗರ ಅಭಿವೃದ್ಧಿಗೆ ಸಂಬಂಧಿಸಿದಂತೆ ಗುರುವಾರ ಅಧಿಕಾರಿಗಳ ಸಭೆ ನಡೆಸಿದರು   

ರಾಯಚೂರು: ನಗರಸಭೆಯಿಂದ ಕುಡಿಯುವ ನೀರು ಸರಬರಾಜು, ಬೀದಿದೀಪ ನಿರ್ವಹಣೆ, ಸ್ವಚ್ಛತೆ ಕಾರ್ಯದಲ್ಲಿ ಗುತ್ತಿಗೆದಾರರುಹಾಗೂ ಅಧಿಕಾರಿಗಳ ನಡುವೆ ಸಮನ್ವಯತೆಯ ಕೊರತೆಯಿಂದಾಗಿ ಜನರಿಗೆ ಸಮಸ್ಯೆಯಾಗಿದೆ. ಅನೇಕ ಬಾರಿ ಸೂಚನೆ ನೀಡಿದರೂ ಯಾಕೆ ಸುಧಾರಣೆ ಆಗುತ್ತಿಲ್ಲ ಎಂದು ಶಾಸಕ ಡಾ. ಶಿವರಾಜ ಪಾಟೀಲ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ನಗರಾಭಿವೃದ್ಧಿ ಕೋಶ ಹಾಗೂ ನಗರಸಭೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ. ಬೀದಿ ದೀಪಗಳ ನಿರ್ವಹಣೆಯ ಗುತ್ತಿಗೆ ಪಡೆದ ಚೈತನ್ಯ ಎಲೆಕ್ಟ್ರಿಲ್ ಕಂಪನಿಗೆ ಉಪ ಗುತ್ತಿಗೆ ನೀಡಿದ್ದು, ಕಳಪೆ ಮಟ್ಟದ ವಿದ್ಯುತ್ ದೀಪ ಅಳವಡಿಕೆಯಾಗಿದೆ. ಕೂಡಲೇ ಉಪ ಗುತ್ತಿಗೆ ರದ್ದುಪಡಿಸಬೇಕು ಎಂದು ಸೂಚಿಸಿದರು.

ADVERTISEMENT

ಜಿಲ್ಲಾಧಿಕಾರಿ ಡಾ.ಅವಿನಾಶ ಮೆನನ್ ಮಾತನಾಡಿ, ನಗರದ ಎಲ್ಲಾ 35 ವಾರ್ಡ್‌ಗಳ ಆರು ತಂಡಗಳನ್ನು ರಚಿಸಿ ಬೀದಿ ದೀಪಗಳ ನಿರ್ವಹಣೆಗೆ ಮುಂದಾಗಬೇಕು. ಕುಡಿಯುವ ನೀರಿನ ಪೈಪ್ ಲೈನ್ ಜೋಡಣೆ, ದುರಸ್ತಿ ಕಾರ್ಯಗಳು ತ್ವರಿತಗತಿಯಲ್ಲಿ ಮಾಡಬೇಕು.29 ಆಟೋ ಟಿಪ್ಪರ್, 2 ಜೆಸಿಬಿ ಹಾಗೂ ತಳ್ಳುಬಂಡಿಗಳ ಖರೀದಿಸಲು ಟೆಂಡರ್ ಪ್ರಕ್ರಿಯೆ ಆರಂಭಿಸಬೇಕು. ಸ್ವಚ್ಛತಾ ಕಾರ್ಯಕ್ಕೆ 150 ಕಾರ್ಮಿಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಸೂಚಿಸಿದರು.

ಟಿಪ್ಪುಸುಲ್ತಾನ್, ಮಚ್ಚಿ ಬಜಾರ್ ರಸ್ತೆ ವಿಸ್ತರಣಾ ಕಾರ್ಯ, ನಗರದ ವಿವಿಧ ರಸ್ತೆಗಳ ದುರಸ್ತಿ, ಹೊಸರಸ್ತೆ ನಿರ್ಮಾಣ ಹಾಗೂ ಇತರೆ ವಿಷಯದ ಕುರಿತು ಚರ್ಚೆ ನಡೆಯಿತು.

ನಗರಸಭೆ ಅಧ್ಯಕ್ಷ ಈ.ವಿನಯಕುಮಾರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೈ.ಗೋಪಾಲರೆಡ್ಡಿ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮಹೇಂದ್ರಕುಮಾರ, ಪೌರಾಯುಕ್ತ ಮುನಿಸ್ವಾಮಿ, ಮಲ್ಲಿಕಾರ್ಜುನ ಗೋಪಿಶೇಟ್ಟಿ, ನಗರಸಭೆ ಸದಸ್ಯ ಎನ್.ಕೆ ನಾಗರಾಜ, ಶಶಿರಾಜ ಶ್ರಿನಿವಾಸ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.