ರಾಯಚೂರು: ಭಾರತೀಯ ಯೋಧರ ಮೇಲೆ ಈಚೆಗೆ ನಡೆದ ಉಗ್ರ ದಾಳಿಯನ್ನು ಖಂಡಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪಾಕಿಸ್ತಾನದ ಧ್ವಜಕ್ಕೆ ಬೆಂಕಿ ಹಚ್ಚಿ ಸುಟ್ಟು ಭಾನುವಾರ ಪ್ರತಿಭಟನೆ ನಡೆಸಿದರು.
ಉಗ್ರ ಚಟುವಟಿಕೆಗಳಿಗೆ ಆಶ್ರಯ ಒದಗಿಸಿರುವ ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಸೈನಿಕರನ್ನು ಬಲಿ ಪಡೆದಿರುವ ಉಗ್ರರ ವಿರುದ್ಧ ತ್ವರಿತವಾಗಿ ಕಠಿಣ ಕ್ರಮವನ್ನು ಕೇಂದ್ರ ಸರ್ಕಾರ ಕೈಗೊಳ್ಳುವ ಮೂಲಕ ಪ್ರತೀಕಾರ ತೀರಿಸಬೇಕು ಎಂದು ಒತ್ತಾಯಿಸಿದರು.
ಓಂಕಾರ್ ಯಾದವ್, ವಿರೇಶ ನಾಯಕ, ದೇವರಾಜ, ಶರಣು, ಪ್ರಕಾಶ, ವಿಜಯ ಪ್ರಸಾದ, ಪ್ರಶಾಂತ ಭಂಡಾರಿ ಸೇರಿದಂತೆ ಇತರರು ಇದ್ದರು.
ಬಿಜೆಪಿ ಪ್ರತಿಭಟನೆ:ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಯೋಧರ ಮೇಲೆ ಉಗ್ರರ ನಡೆಸಿರುವ ಹೇಡಿ ಕೃತ್ಯವನ್ನು ಖಂಡಿಸಿ ಬಿಜೆಪಿ ಜಿಲ್ಲಾ ಘಟಕದ ಕಾರ್ಯಕರ್ತರು ನಗರದ ಟಿಪ್ಪುಸುಲ್ತಾನ ಉದ್ಯಾನದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.
ಪಾಕಿಸ್ತಾನದ ಉಗ್ರರು ನಡೆಸಿದ ಆತ್ಮಹತ್ಯೆ ಬಾಂಬ್ ಸ್ಪೋಟದ ಹೇಡಿಕೃತ್ಯದಿಂದ ದೇಶದ 42 ವೀರ ಯೋಧರನ್ನು ಕಳೆದುಕೊಳ್ಳುವಂತಾಗಿದೆ. ಇಂತಹ ಕೃತ್ಯಗಳಿಗೆ ಬೆನ್ನೆಲುಬಾಗಿ ನಿಂತಿರುವ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಪಾಕಿಸ್ತಾನದ ಹೇಡಿ ಕೃತ್ಯಕ್ಕೆ ತಕ್ಕ ಉತ್ತರ ನೀಡಲು ಸೇನೆಗೆ ಮುಕ್ತ ಅವಕಾಶ ನೀಡಿದೆ. ಪಾಕಿಸ್ತಾನದ ದುಷ್ಕತ್ಯಗಳಿಗೆ ಕಡಿವಾಣ ಹಾಕುವ ಮೂಲಕ ಉಗ್ರರ ಚಟುವಟಿಕೆಗಳನ್ನು ಬೇರು ಸಮೇತ ಕಿತ್ತೆಸೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಎನ್.ಶಂಕರಪ್ಪ ಮಾತನಾಡಿ, ಉಗ್ರರು ಹೇಡಿ ಕೃತ್ಯದ ಮೂಲಕ ಸೈನಿಕರನ್ನು ಬಲಿಪಡೆದಿರುವುದು ಖಂಡನೀಯವಾಗಿದ್ದು, ಆದಷ್ಟು ಶೀಘ್ರದಲ್ಲಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಹೇಳಿದರು.
ಜಿಲ್ಲಾ ಘಟಕ ಅಧ್ಯಕ್ಷ ಶರಣಪ್ಪಗೌಡ ಜಾಡಲದಿನ್ನಿ, ನಗರ ಘಟಕ ಅಧ್ಯಕ್ಷ ದೊಡ್ಡ ಮಲ್ಲೇಶಪ್ಪ, ಮುಖಂಡರಾದ ಆರ್.ತಿಮ್ಮಯ್ಯ, ರಾಜಕುಮಾರ, ಅಶೋಕ ಗಸ್ತಿ, ಎನ್.ಶ್ರೀನಿವಾಸರೆಡ್ಡಿ, ಎ.ಚಂದ್ರಶೇಖರ, ಗಿರೀಶ್ ಕನಕವೀಡು, ಕೆ.ಎಂ.ಪಾಟೀಲ್, ವಕೀಲ ಜಗದೀಶ, ಕಡಗೋಳ ರಾಮಚಂದ್ರ, ಶಶಿಧರ ಮಸ್ಕಿ, ತಿರುಮಲ ರೆಡ್ಡಿ, ಮಹೇಂದ್ರ ರೆಡ್ಡಿ, ಶರಣಮ್ಮ ಕಾಮರೆಡ್ಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.