ಶಕ್ತಿನಗರ: ರಾಯಚೂರ ತಾಲ್ಲೂಕಿನ ಮನ್ಸಲಾಪುರ ಗ್ರಾಮದ ಆರಾಧ್ಯದೈವ ಸಿದ್ಧಲಿಂಗೇಶ್ವರ ರಥೋತ್ಸವ ಗುರುವಾರ ಜರುಗಿತು.
ರಥೋತ್ಸವ ನಿಮಿತ್ತ ಬೆಳಿಗ್ಗೆ ದೇವಸ್ಥಾನದ ಗರ್ಭಗುಡಿಯಲ್ಲಿ ವಿಶೇಷ ಪೂಜೆ ಮತ್ತು ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆಯಿಂದಲೇ ಜಿಲ್ಲೆಯ ವಿವಿಧೆಡೆಯಿಂದ ಬಂದ ಭಕ್ತರು ದೇವರ ದರ್ಶನ ಪಡೆದು ನೈವೇದ್ಯ, ಕಾಯಿ ಕರ್ಪೂರಗಳನ್ನು ಅರ್ಪಿಸಿದರು.
ರಥಕ್ಕೆ ವೈವಿಧ್ಯಮಯ ಹೂಗಳು ಹಾಗೂ ತಳಿರು ತೋರಣದಿಂದ ಅಲಂಕಾರ ಮಾಡಿ, ಕಳಸ ಮತ್ತು ಛತ್ರಿ ಅರೋಹಣ ಮಾಡಲಾಯಿತು. ರಥದಲ್ಲಿ ಸಿದ್ಧಲಿಂಗೇಶ್ವರ ಸ್ವಾಮಿಯ ಮೂರ್ತಿಯೊಂದಿಗೆ ಅರ್ಚಕರು ರಥದಲ್ಲಿ ಅಸೀನರಾಗುತ್ತಿದ್ದಂತೆ, ಪುರವಂತಿಕೆ ಸೇವೆ, ನಂದಿಕೋಲು ಕುಣಿತ ಹಾಗೂ ಸಕಲ ಬಿರುದಾವಳಿ ಮಂಗಳವಾದ್ಯಗಳೊಂದಿಗೆ ನೆರೆದಿದ್ದ ಭಕ್ತರು ದೇವರ ಜಯಘೋಷಗಳ ಸಮೇತ ರಥವನ್ನು ಎಳೆದರು.
ಮನ್ಸಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮರೆಡ್ಡಿಗೌಡ, ಉಪಾಧ್ಯಕ್ಷೆ ಅನ್ನಮ್ಮ ನರಸಪ್ಪ, ಸದಸ್ಯರಾದ ಬಾಲಮ್ಮ ಬಸವರಾಜ, ಬಸಮ್ಮ ಮಾರೆಪ್ಪ ಬೋರೆಡ್ಡಿ, ರಂಗಮ್ಮ ದೊಡ್ಡಬಸಣ್ಣ, ವೆಂಕಟರೆಡ್ಡಿ ಶೀಲಗುಂಟಪ್ಪ, ಗ್ರಾಮದ ಮುಖಂಡರಾದ ಸಿದ್ದಪ್ಪಗೌಡ ಮಾಲಿ ಪಾಟೀಲ, ಮಲ್ಲಪ್ಪಗೌಡ ಮಾಲಿಪಾಟೀಲ, ಜಾಫರ್ ಹುಸೇನ್ ಮನ್ಸಲಾಪೂರ್ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.