
ಸಿಂಧನೂರು: ತಾಲ್ಲೂಕಿನ ಪಗಡದಿನ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಪ್ಪನಹಟ್ಟಿ ಗ್ರಾಮದ ನರೇಗಾ ಯೋಜನೆಯ ಕಾಮಗಾರಿ ಸ್ಥಳಕ್ಕೆ ಸಹಾಯಕ ನಿರ್ದೇಶಕ ಯಂಕಪ್ಪ ಭೇಟಿ ನೀಡಿ 389 ಕೂಲಿ ಕಾರ್ಮಿಕರೊಂದಿಗೆ ಚರ್ಚಿಸಿ ಎನ್ಎಂಎಂಎಸ್ ತಂತ್ರಾಂಶದಲ್ಲಿ ಕಡ್ಡಾಯವಾಗಿ ಎರಡು ಬಾರಿ ಹಾಜರಾತಿ ದಾಖಲಿಸಬೇಕು ಮತ್ತು ದಿನದ ಕೂಲಿ ದರವನ್ನು ₹ 370ಕ್ಕೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ ಎಂದು ತಿಳಿಸಿದರು.
‘ವಲಸೆ ಯಾಕ್ರಿ ನಿಮ್ಮೂರಲ್ಲೇ ಉದ್ಯೋಗ ಖಾತರಿ’ ಹಾಗೂ ಸ್ತ್ರೀ ಚೇತನ ಅಭಿಯಾನದಡಿ ಗಂಡು ಮತ್ತು ಹೆಣ್ಣಿಗೆ ₹370 ಸಮಾನ ಕೂಲಿ ಇದೆ ಎಂದರು.
ಪ್ರಧಾನ ಮಂತ್ರಿ ಭೀಮಾ ಸುರಕ್ಷಾ ಯೋಜನೆ ಮತ್ತು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಯೋಜನೆ ಬಗ್ಗೆ ಮಾಹಿತಿ ನೀಡಲಾಯಿತು.
ಸಾಮಾಜಿಕ ಭದ್ರತೆ ಕಲ್ಪಿಸುವ ಯೋಜನೆಯಡಿ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿಶೇಷ ಚೇತನರು ಹಾಗೂ ಗರ್ಭಿಣಿಯರಿಗೆ ಶೇ 50 ರಷ್ಟು ಕೆಲಸ ಮಾಡಿದರೂ ಪೂರ್ತಿ ಪ್ರಮಾಣದ ಕೂಲಿ ನೀಡಲಾಗುತ್ತದೆ. 3 ವರ್ಷದೊಳಗಿನ ಮಕ್ಕಳನ್ನು ಶಿಶು ಪಾಲನಾ ಕೇಂದ್ರದಲ್ಲಿ ಬಿಟ್ಟು ಬರಬೇಕು. 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಕರೆದುಕೊಂಡು ಬರಬಾರದು ಎಂದು ಮಾಹಿತಿ ನೀಡಲಾಯಿತು.
ಇ-ಕೆವೈಸಿ ಮಾಹಿತಿಯನ್ನು ಪಡೆದು ಶೇ 80.57ರಷ್ಟು ಈಗಾಗಲೇ ಪ್ರಗತಿ ಸಾಧಿಸಿದ್ದು, ಉಳಿದಂತೆ ತಮ್ಮ ಗುರಿಗೆ ಅನುಗುಣವಾಗಿ ಪ್ರಗತಿ ಸಾಧಿಸಿ, ಬಾಕಿ ಉಳಿಯಲು ಕಾರಣಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ವರದಿ ನೀಡಲು ತಿಳಿಸಲಾಯಿತು.
ತಾಲ್ಲೂಕು ಐಇಸಿ ಸಂಯೋಜಕ ಥಾಮಸ್, ಸಹಾಯಕ ಅಭಿಯಂತ ರಾಜಶೇಖರ್, ಬಿಎಫ್ಟಿ ಅಶೋಕ್ ಸೇರಿದಂತೆ ಕೂಲಿ ಕಾರ್ಮಿಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.