ADVERTISEMENT

ರಾಯಚೂರು | ಸರ್ಕಾರಿ ಕಚೇರಿಯಲ್ಲಿ ನಾಗರಹಾವು: ಬೆಚ್ಚಿಬಿದ್ದ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 5:09 IST
Last Updated 12 ಸೆಪ್ಟೆಂಬರ್ 2025, 5:09 IST
ರಾಯಚೂರಿನ ಮಾವಿನಕೇರಿ ರಸ್ತೆಯಲ್ಲಿರುವ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಚೇರಿಯಲ್ಲಿ ಕಂಡು ಬಂದ ನಾಗರಹಾವು
ರಾಯಚೂರಿನ ಮಾವಿನಕೇರಿ ರಸ್ತೆಯಲ್ಲಿರುವ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಚೇರಿಯಲ್ಲಿ ಕಂಡು ಬಂದ ನಾಗರಹಾವು   

ರಾಯಚೂರು: ಹದಿನೈದು ದಿನಗಳ ಹಿಂದೆ ಮಾವಿನಕೇರಿ ರಸ್ತೆಯಲ್ಲಿರುವ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಚೇರಿಯೊಳಗೆ ನುಗಿದ್ದ ನಾಗರಹಾವು ಗುರುವಾರ ವಿರಾಟರೂಪ ತೋರಿಸಿ ಸಿಬ್ಬಂದಿಯನ್ನು ಬೆಚ್ಚಿಬೀಳಿಸಿದೆ.

ಹದಿನೈದು ದಿನಗಳ ಹಿಂದೆ ಬಣ್ಣದ ಟೈಲ್ಸ್‌ಮೇಲೆ ತೆವಳಿಕೊಂಡು ಕಚೇರಿಯೊಳಗೆ ನುಗ್ಗಿತ್ತು. ಇದನ್ನು ಒಮ್ಮೆಲೇ ನೋಡಿದ ಪ್ರಥಮ ದರ್ಜೆ ಸಹಾಯಕ ವಿನಯಕುಮಾರ ಕಾಲುಗಳಲ್ಲಿನ ಶಕ್ತಿ ಹೊರಟು ಹೋದಂತಾಯಿತು. ಟೈಲ್ಸ್‌ ಬಣ್ಣ ಹೋಲುವ ಹಾವನ್ನು ನೋಡಿ ಸಿಬ್ಬಂದಿಗೂ ತಿಳಿಸಿ ಅಲರ್ಟ ಮಾಡಿದ್ದರು. ಎಂಟು ಸಿಬ್ಬಂದಿ ಸೇರಿ ಕಚೇರಿಯಲ್ಲಿ ಜಾಲಾಡಿದರೂ ಕಾಣಸಿಕ್ಕಿರಲಿಲ್ಲ.

ಮರುದಿನ ಹಾವು ಹಿಡಿಯುವವರನ್ನು ಕರೆಯಿಸಿ ಶೋಧ ನಡೆಸಿದರೂ ಹಾವು ಕಾಣಲಿಲ್ಲ. ಅದು ಕಚೇರಿಯಿಂದಲೂ ಹೊರಗೆ ಹೋಗಿರಲಿಲ್ಲ. ಸಿಬ್ಬಂದಿ ಭಯದಿಂದ ಟೇಬಲ್‌ ಕೆಳಗೆ ಕಾಲುಗಳನ್ನು ಇಡದೇ ಕುರ್ಚಿಯಲ್ಲಿ ಮಂಡೆಹಾಕಿಕೊಂಡು ಕುಳಿತು ಕೆಲಸ ಮಾಡಿದ್ದರು. ಹತ್ತು, ಹನ್ನೆರಡು ದಿನ ಆದರೂ ಹಾವು ಕಾಣಿಸದಿದ್ದಾಗ ಹೊರಗೆ ಹೋಗಿರಬಹುದು ಎನ್ನುವ ಭ್ರಮೆಯಲ್ಲಿ ಇದ್ದರು. ಆದರೆ, ಅದು ಇಲಿ ಹಾಗೂ ಕಪ್ಪೆಗಳನ್ನು ತಿಂದು ಕಚೇರಿಯ ಕಡತಗಳ ಮಧ್ಯೆ ಆಶ್ರಯ ಪಡೆದಿತ್ತು.

ADVERTISEMENT

ಗುರುವಾರ, ವಿಕಲಚೇತನರ ಪಾಲಕರ ಒಕ್ಕೂಟದ ಮುಖಂಡ ಹೊನ್ನಪ್ಪ ಗೂಳಪ್ಪನವರ ಕಚೇರಿಗೆ ಬಂದಾಗ ಹಾವು ಮತ್ತೆ ಕಾಣಿಸಿಕೊಂಡಿತು. ಹೊನ್ನಪ್ಪ ತಡಮಾಡದೆ ಎಚ್ಚರಿಕೆಯಿಂದ ಹಾವನ್ನು ಹಿಡಿದು ಮಾವಿನ ಕೆರೆಯ ಬಳಿ ಸುರಕ್ಷಿತವಾಗಿ ಬಿಟ್ಟು ಬಂದರು. ನಂತರ ಕಚೇರಿ ಸಿಬ್ಬಂದಿ ನಿಟ್ಟೂಸಿರು ಬಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.