
ಸಿಂಧನೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವ ಮಹತ್ವಾಕಾಂಕ್ಷೆ ಯೋಜನೆ ಜಲಜೀವನ್ ಮಿಷನ್ ಆಗಿದ್ದು, ಗುತ್ತಿಗೆದಾರರು ಗುಣಮಟ್ಟದ ಕೆಲಸ ಮಾಡಬೇಕು. ಇಲ್ಲದಿದ್ದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕಾಗುತ್ತದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಎಚ್ಚರಿಕೆ ನೀಡಿದರು.
ತಾಲ್ಲೂಕಿನ ಸೋಮಲಾಪುರ ಗ್ರಾಮದಲ್ಲಿ ₹131.75 ಲಕ್ಷ, ಗೊಬ್ಬರಕಲ್ ಗ್ರಾಮದಲ್ಲಿ ₹75.50 ಲಕ್ಷ ಹಾಗೂ ಹುಡಾ ಗ್ರಾಮದಲ್ಲಿ ₹127 ಲಕ್ಷ ವೆಚ್ಚದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿಗಳಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವುದು ಜೆಜೆಎಂ ಯೋಜನೆಯ ಉದ್ದೇಶವಾಗಿದೆ. ಗ್ರಾಮಸ್ಥರು ಒಗ್ಗಟ್ಟಾಗಿ ಮಂಜೂರಾದ ಕೆಲಸವನ್ನು ಗುಣಮಟ್ಟದಿಂದ ಮಾಡಿಸಿಕೊಂಡು ಸದುಪಯೋಗ ಪಡೆಯಬೇಕು’ ಎಂದರು.
‘ಮಾ.5ರಿಂದ 16ರವರೆಗೆ ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ಕುಡಿಯುವ ಉದ್ದೇಶಕ್ಕಾಗಿ ನೀರು ಬಿಡುತ್ತಿದ್ದು, ತಾಲ್ಲೂಕನಲ್ಲಿರುವ 139 ಕೆರೆಗಳನ್ನು ಸ್ವಚ್ಛಗೊಳಿಸಿ ತುಂಬಿಸಿಕೊಳ್ಳಬೇಕು. ಕೆರೆ ಭರ್ತಿ ಮಾಡಿಕೊಳ್ಳುವ ಹೊಣೆಗಾರಿಕೆ ಗ್ರಾಮ ಪಂಚಾಯಿತಿಗೆ ವಹಿಸಲಾಗಿದೆ. ರೈತರು ಹೊಲಗದ್ದೆಗಳಿಗೆ ನೀರು ಹರಿಸಿಕೊಳ್ಳಬಾರದು. ಕುಡಿಯುವ ನೀರು ವಿನಾಃಕಾರಣ ಪೋಲು ಮಾಡಬಾರದು. ಜೂನ್ವರೆಗೆ ನೀರಿನ ನಿರ್ವಹಣೆ ಮಾಡಿ ಕುಡಿಯಲು ಪೂರೈಸಬೇಕು’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸವರಾಜ ಹಿರೇಗೌಡರ್, ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶಿವಪ್ಪ ಐಹೊಳೆ, ಕಾಂಗ್ರೆಸ್ ಮುಖಂಡರಾದ ರಾಜುಗೌಡ ಬಾದರ್ಲಿ, ಅಶೋಕ ಉಮಲೂಟಿ, ಎನ್.ಅಮರೇಶ, ಶ್ರೀದೇವಿ ಶ್ರೀನಿವಾಸ, ಲಿಂಗಾಧರ ಗುರುಸ್ವಾಮಿ, ಶರಣಬಸವ ವಕೀಲ ಸಾಲಗುಂದಾ, ಶ್ರೀನಿವಾಸ ಬಂದಿ, ಚಂದ್ರೇಗೌಡ, ಮೇಘರಾಜ, ವೆಂಕಟರೆಡ್ಡಿ ಹುಡಾ, ಮಹ್ಮದ್ಸಾಬ, ಪಿಡಿಒ ದಿವ್ಯ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.