ಸಿಂಧನೂರು: ಜವಳಗೇರಾ ನಾಡಗೌಡರ ಹೆಚ್ಚುವರಿ ಸರ್ಕಾರಿ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡು ಭೂಹೀನರಿಗೆ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿ ಸಿಪಿಐಎಂಎಲ್ ರೆಡ್ಸ್ಟಾರ್ ಹಾಗೂ ಕೆಆರ್ಎಸ್ ನೇತೃತ್ವದಲ್ಲಿ ಇಲ್ಲಿನ ಮಿನಿ ವಿಧಾನಸೌಧ ಕಚೇರಿ ಮುಂದೆ ನಡೆಯುತ್ತಿರುವ ಧರಣಿಯು ಸೋಮವಾರ 144ನೇ ದಿನಕ್ಕೆ ಕಾಲಿಟ್ಟಿದೆ.
ಧರಣಿ ಬೆಂಬಲಿಸಿ ಭಾಗವಹಿಸಿದ್ದ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮೌನೇಶ ಜಾಲವಾಡಿಗಿ ಮಾತನಾಡಿ, ‘ಜನಪ್ರತಿನಿಧಿಗಳು, ಅಧಿಕಾರಿಗಳಿಂದ ಹೋರಾಟ ನಿರ್ಲಕ್ಷ್ಯ ಸಲ್ಲದು. ಧರಣಿಗೆ ಸಂಪೂರ್ಣ ಬೆಂಬಲವಿದೆ. ಜವಳಗೇರಾ ನಾಡಗೌಡರ ಹೆಚ್ಚುವರಿ ಭೂಮಿ ಸೇರಿ ತಾಲ್ಲೂಕಿನ ಸರ್ಕಾರಿ, ಖಾರಿ ಜಖಾತಾ, ಇತರೆ ಭೂಮಿಗೆ ಅರ್ಜಿ ಸಲ್ಲಿಸಿದ ದಲಿತ, ಹಿಂದುಳಿದ, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಜಾತಿಯ ಭೂಹೀನ ಬಡ ಫಲಾನುಭವಿಗಳಿಗೆ ಪಟ್ಟ ನೀಡಬೇಕು. ನಾಡಗೌಡರ ಹೆಚ್ಚುವರಿ ಭೂಮಿ 4900 ಎಕರೆ ಕುರಿತು ಮರು ತನಿಖೆಗೆ ಸರ್ಕಾರ ಪ್ರಸ್ತಾವ ಕಳುಹಿಸಬೇಕು’ ಎಂದು ಆಗ್ರಹಿಸಿದರು.
ನಂತರ ದಲಿತ ವಿದ್ಯಾರ್ಥಿ ಪರಿಷತ್ ಮಸ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಮೌನೇಶ ತುಗ್ಗಲದಿನ್ನಿ, ಭೀಮ್ ಆರ್ಮಿ ಸಂಘಟನೆಯ ಸಂಚಾಲಕ ಪ್ರವೀಣ ಧುಮತಿ ಧರಣಿಯನ್ನು ಕಡೆಗಣಿಸಿದ ತಾಲ್ಲೂಕು ಆಡಳಿತ, ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರ ಹಾಕಿದರು.
ಸಿಪಿಐಎಂಎಲ್ ರೆಡ್ಸ್ಟಾರ್ನ ರಾಜ್ಯ ಮುಖಂಡ ಎಂ.ಗಂಗಾಧರ, ದಲಿತ ವಿದ್ಯಾರ್ಥಿ ಪರಿಷತ್ತಿನ ವಿರುಪಣ್ಣ ರಾಮತ್ನಾಳ, ಬಂಡೆ ಗುರು ಮಾನ್ವಿ, ಪ್ರಶಾಂತ ಮಾನ್ವಿ, ಶಿವರಾಜ.ಕೆ, ಸುರೇಶ ಜಾಲವಾಡಗಿ, ಲಿಂಗರಾಜ ಮಲ್ಲಾಪುರ, ಭೂಹೀನರಾದ ಮಾಬುಸಾಬ್ ಬೆಳ್ಳಟ್ಟಿ, ಎಚ್.ಆರ್.ಹೊಸಮನಿ, ಮುದಿಯಪ್ಪ, ರುಕ್ಮಿಣಿ, ಅಂಬಮ್ಮ ಬಸಾಪುರ, ಹನುಮಂತಪ್ಪ, ಹಂಪಮ್ಮ, ತುಳಸಮ್ಮ, ಪರಶುರಾಮ, ಲಕ್ಷ್ಮಿ, ಬೀಬಿ ಫಾತೀಮಾ, ಮಾನಪ್ಪ, ರೇಣುಕಮ್ಮ, ಧರಗಯ್ಯ ಹಾಗೂ ದೇವಮ್ಮ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.