ಲಿಂಗಸುಗೂರು: ತಾಲ್ಲೂಕಿನ ಹಾಲಭಾವಿ ತಾಂಡಾದಲ್ಲಿ ಬುಧವಾರ 6 ಪ್ರಕರಣಗಳು ವರದಿಯಾಗಿದ್ದು, ತಾಲ್ಲೂಕು ಆಡಳಿತ ಪ್ರಕರಣ ಹರಡದಂತೆ ಸಾಕಷ್ಟು ಮುಂಜಾಗ್ರತ ಕ್ರಮಕ್ಕೆ ಹರಸಾಹಸ ನಡೆಸಿದೆ.
ಬುಧವಾರ ಪತ್ತೆಯಾದ ಹೊಸ ಪ್ರಕರಣಗಳ ಸಂತ್ರಸ್ತರಿಗೆ ಸ್ಥಳೀಯವಾಗಿ ಚಿಕಿತ್ಸೆ ನೀಡಲಾಗುತ್ತಿದೆ. 4 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮದಲ್ಲಿ ಆರೋಗ್ಯ ಇಲಾಖೆ ಮತ್ತು ತಾಲ್ಲೂಕು ಪಂಚಾಯಿತಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿ ಮನೆ ಮನೆಗೆ ಜಾಗೃತಿ ಮೂಡಿಸಲಾಗುತ್ತಿದೆ.
ಟ್ಯಾಂಕರ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಮಾಂಸ, ಮದ್ಯ ಸೇವನೆ ಮಾಡಬಾರದು. ಕಾಯಿಸಿ ಆರಿಸಿದ ನೀರನ್ನೆ ಸೇವಿಸಬೇಕು. ಕುಡಿಯುವ ನೀರಲ್ಲಿ ಆರೋಗ್ಯ ಇಲಾಖೆ ನೀಡುವ ಪೌಡರ್, ಮಾತ್ರೆ ಮಿಶ್ರಣ ಮಾಡಿ ಸೇವಿಸುವುದು ಸೇರಿದಂತೆ ಇತರೆ ಸಲಹೆಗಳನ್ನು ನೀಡಲಾಗುತ್ತಿದೆ.
ತಾಂಡಾ ಜನ ಮಾತ್ರ ದೇವರ ಹೆಸರಲ್ಲಿ ಕೋಳಿ, ಕುರಿ ಬಲಿ ಕೊಡುತ್ತಿದ್ದಾರೆ. ಅನ್ಯ ತಾಂಡಾಗಳ ಜನ ಮದ್ಯ, ಮಾಂಸ ಮಾರಾಟ ನಿರ್ಭಯದಿಂದ ಮಾರಾಟ ಮಾಡುತ್ತಿದ್ದಾರೆ. ನಿಷೇಧಿತ ವಸ್ತು ಮಾರಾಟ ಮಾಡದಂತೆ ತಡೆಯುವುದು ಸವಾಲಾಗಿ ಪರಿಣಮಿಸಿದೆ.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಮರೇಶ ಪಾಟೀಲ ಮಾಕಾಪುರ, ತಾಲ್ಲೂಕು ಪಂಚಾಯಿತಿ ಇಒ ಅಮರೇಶ ನೇತೃತ್ವದ ತಂಡ ತಾಂಡಾದಲ್ಲಿ ಬಿಡಾರ ಹೂಡಿದೆ. ಮಾಂಸ, ಮದ್ಯ ಮಾರಾಟ ತಡೆಗೆ ಪೊಲೀಸ್ ಇಲಾಖೆಗೆ ಲಿಖಿತ ಮಾಹಿತಿ ಕೂಡ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.