ಮಸ್ಕಿ: ಶೈಕ್ಷಣಿಕ ರಜಾ ದಿನಗಳ ಈ ಸಂದರ್ಭದಲ್ಲಿ ದೇಶಿಯ ಸಂಸ್ಕೃತಿ ಪರಿಚಯ ಮಾಡಿಕೊಡಬೇಕು ಎಂಬ ಉದ್ದೇಶದಿಂದ ಪಟ್ಟಣದ ಕೇಂದ್ರ ಶಾಲೆಯಲ್ಲಿ ನಡೆಯುತ್ತಿರುವ ಮೂರು ದಿನಗಳ ‘ಮಕ್ಕಳ ಬೇಸಿಗೆ ಸಂಭ್ರಮ-2025’ ಶಿಬಿರ ಇದೀಗ ಮಕ್ಕಳು ಹಾಗೂ ಪಾಲಕರ ಗಮನ ಸೆಳೆದಿದೆ.
ಮಕ್ಕಳ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ, ಕಸಾಪ, ಸಮೂಹ ಸಂಪನ್ಮೂಲ ಕೇಂದ್ರ ಸಹಯೋಗದಲ್ಲಿ ಏ.10 ರಿಂದ 12 ರವರೆಗೆ ನಡೆಯುತ್ತಿರುವ ಈ ಶಿಬಿರದಲ್ಲಿ ಪಟ್ಟಣದ ವಿವಿಧ ಶಾಲೆಗಳ 1ನೇ ತರಗತಿಯಿಂದ 10 ತರಗತಿ ವರೆಗಿನ ನೂರಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದಾರೆ.
ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ನಡೆಯುವ ಶಿಬಿರದಲ್ಲಿ ಎರಡು ತಂಡಗಳನ್ನು ಮಾಡಲಾಗಿದ್ದು 15 ಶಿಕ್ಷಕರು ಸ್ವಯಂ ಪ್ರೇರಿತರಾಗಿ ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ.
ಯೋಗ, ಧ್ಯಾನ, ನೃತ್ಯ, ಚಿತ್ರಕಲೆ ಜೊತೆಗೆ ದೇಶಿಯ ಕ್ರೀಢೆಗಳಾದ ಲಗೋರಿ, ಚಿನಿಮಿನಿ ಬಿಲ್ಲಿ, ಗೋಲಿಯಂತಹ ಜಾನಪದ ಆಟಗಳನ್ನು ಮಕ್ಕಳಿಗೆ ಕಲಿಸಿಕೊಡಲಾಗುತ್ತಿದೆ.
ಸಾಮೂಹಿಕ ನೃತ್ಯ, ಜಾನಪದ ಹಾಡುಗಳು, ಮೋಜಿನ ಗಣಿತ, ಸೃಜನಶೀಲ ಬರವಣಿಗೆ, ಕಥೆ, ಕವನ ರಚನೆ, ರಂಗಾಟ ಸೇರಿದಂತೆ ಮುಂತಾದ ದೇಶಿಯ ಸಂಸ್ಕೃತಿಯನ್ನು ಕಲೆಗಳನ್ನು ಮಕ್ಕಳಿಗೆ ಮೂರು ದಿನದ ಶಿಬಿರದಲ್ಲಿ ಹೇಳಿ ಕೊಡಲಾಗುತ್ತಿದೆ.
‘ಮಕ್ಕಳ ಬೇಸಿಗೆ ಸಂಭ್ರಮ-2025’ ಪಟ್ಟಣದಲ್ಲಿ ಹೆಚ್ಚು ಹೆಚ್ಚು ಮಕ್ಕಳು ಹಾಗೂ ಪಾಲಕರನ್ನು ಆಕರ್ಷಿಸುತ್ತಿದೆ. ಶಿಬಿರದ ಸಂಚಾಲಕರಾದ ಮಹೇಶ ಶೆಟ್ಟರ್, ರಾಮಸ್ವಾಮಿ, ವರದೇಂದ್ರ. ಕೆ. ಗುಂಡುರಾವ್ ದೇಸಾಯಿ ಅವರ ಕಾರ್ಯಕ್ಕೆ ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೇಸಿಗೆಯಲ್ಲಿ ಇಂತಹ ಶಿಬಿರಗಳು ಹೆಚ್ಚು ಹೆಚ್ಚು ನಡೆದರೆ ದೇಶಿಯ ಸಂಸ್ಕೃತಿ ಹಾಗೂ ಕಲೆಯನ್ನು ಬಾಲ್ಯ ವ್ಯವಸ್ಥೆಯಲ್ಲಿ ಮಕ್ಕಳಿಗೆ ಕಲಿಸಲು ಸಹಕಾರಿಯಾಗುತ್ತದೆಗುಂಡುರಾವ್ ದೇಸಾಯಿ ಶಿಕ್ಷಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.