ರಾಯಚೂರು: ‘ಎಲ್ಲ ಸಮುದಾಯದವರಿಗೂ ಕಾನೂನಿನ ಅಡಿಯಲ್ಲೇ ಸಮಾನತೆ ಕಲ್ಪಿಸಿದ ದೇಶದ ಪವಿತ್ರ ಗ್ರಂಥವಾದ ಸಂವಿಧಾನ ಉಳಿಸಲು ಕಾಂಗ್ರೆಸ್ ಬೆಂಬಲಿಸಬೇಕು’ ಎಂದು ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ನಾಯಕ ಮನವಿ ಮಾಡಿದರು.
ನಗರದ ಮೈಲಾರನಗರ, ಎಚ್ಎಂಟಿ ವೃತ್ತ, ಹರಿಜನವಾಡ ಹಾಗೂ ದೇವದುರ್ಗ ತಾಲ್ಲೂಕಿನ ಗಬ್ಬೂರಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
‘ನಾನು ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿರಬಹುದು. ಇನ್ನೂ 10 ವರ್ಷ ಜನ ಸೇವೆ ಮಾಡುವ ಸಾಮರ್ಥ್ಯ ಇದೆ. ನಾನು ನಿಮಗೆ ಹೊಸಬನಲ್ಲ. ನನಗೂ ರಾಯಚೂರು ಹೊಸದಲ್ಲ. ನಿಮ್ಮೆಲ್ಲರ ಮನೆ ಮಗನಾಗಿ ಸೇವೆ ಮಾಡಲು ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಮೇ 7ರಂದು ನನ್ನ ಪರವಾಗಿ ಮತ ಚಲಾಯಿಸುವ ಮೂಲಕ ಆಶೀರ್ವಾದ ಮಾಡಬೇಕು’ ಎಂದು ಮನವಿ ಮಾಡಿದರು.
‘ಸ್ವತಂತ್ರ್ಯ ಪೂರ್ವದಿಂದಲೂ ಕಾಂಗ್ರೆಸ್ಗೆ ಅದರದ್ದೇ ಆದ ಇತಿಹಾಸ ಇದೆ. ಕಾಂಗ್ರೆಸ್ ಜನಪರವಾದ ಕೆಲಸಗಳನ್ನು ಮಾಡಿಕೊಂಡು ಬಂದಿದೆ. ಅಂತೆಯೇ ಕಾಂಗ್ರೆಸ್ನಿಂದ ಚುನಾವಣಾ ಕಣಕ್ಕೆ ಇಳಿದಿರುವೆ. ಜಿಲ್ಲೆಯ ಅಭಿವೃದ್ಧಿಗಾಗಿ ನನ್ನನ್ನು ಬೆಂಬಲಿಸಬೇಕು’ ಎಂದರು.
ಕಾಂಗ್ರೆಸ್ ಯುವ ಮುಖಂಡರಾದ ರವಿ ಬೋಸರಾಜು ಮಾತನಾಡಿ, ‘ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ತಳಮಟ್ಟದಲ್ಲಿ ಎಲ್ಲ ಸಮುದಾಯದವರಿಗೂ ತಲುಪಿದೆ. ಬಿಜೆಪಿಗೆ ಜನರ ಬಳಿ ಹೋಗಲು ಮುಖ ಇಲ್ಲದಂತಾಗಿದೆ. ಸೋಲುವ ಭಯದಿಂದ ಕಾಂಗ್ರೆಸ್ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದರು.
‘ಜನರಿಗೆ ಸುಳ್ಳು ಭರವಸೆ ನೀಡಿ ಮೋಸ ಮಾಡುತ್ತಿರುವ ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಬೇಕು’ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಜಯಣ್ಣ, ಕೆ.ಶಾಂತಪ್ಪ, ಮೊಹ್ಮದ್ ಶಾಲಂ, ಬಶೀರುದ್ದೀನ್, ರಾಯಚೂರು ಬ್ಲಾಕ್ ಅಧ್ಯಕ್ಷ ಬಸವರಾಜ ರಡ್ಡಿ, ಪ್ರತಾಪರಡ್ಡಿ, ಜಿ.ಶಿವಮೂರ್ತಿ, ಬೋಳಬಂಡಿ, ನರಸಿಂಹಲು ಮಾಡಗಿರಿ, ಶೇಖರ, ಹನುಮಂತ ಹೊಸೂರು, ಜಯಣ್ಣ, ನರಸಮ್ಮ ಮಾಡಗಿರಿ, ಪ್ರತಿಭಾ ರಡ್ಡಿ, ದರೂರು ಬಸವರಾಜ ಪಾಟೀಲ, ಮಾರೆಪ್ಪ ವಕೀಲ, ನರಸಿಂಹಲು ಮಾಡಗಿರಿ, ಮಣಿಕಂಠ, ವಸಂತಕುಮಾರ, ರಾಮ್ ಪ್ರಸಾದ್, ಸಣ್ಣ ಬಾಬು, ಮಣಿಕಂಠ, ಸಿಂಗನೋಡಿ ರೆಡ್ಡಿ ಸುಭಾಷ, ಆರ್.ಸಗರ್, ಬಿ.ಎನ್.ಬಾಬು, ಮಮ್ಮದ್ ಬಾಷಾ, ರೆಡ್ಡಿ ತಿಪ್ಪಯ್ಯ, ಪ್ಯಾಟ್ ಅಂಬರೀಶ್, ರಘು, ಚೇತನ್ ಹಾಗೂ ತಿಮ್ಮಪ್ಪ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.