ರಾಯಚೂರು: ’ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಸಮೀಪದಲ್ಲಿ ಸುರೇಂದ್ರ ತೀರ್ಥರ ಮಠವಿದೆ. ಆದರೆ, ಸುರೇಂದ್ರ ತೀರ್ಥರ ಬೃಂದಾವನ ಎಲ್ಲಿದೆ ಎಂಬುದು ಇದುವರೆಗೂ ಪತ್ತೆಯಾಗಿರಲಿಲ್ಲ. ದೇವಸ್ಥಾನದ ಬಳಿ ಉತ್ಖನನ ಮಾಡುವಾಗ ಬೃಂದಾವನವೊಂದು ಕಂಡು ಬಂದಿದೆ ಎನ್ನುವ ವಿಚಾರ ಮಾಧ್ಯಮಗಳಿಂದ ಈಗಷ್ಟೇ ಗೊತ್ತಾಗಿದೆ. ಭಾನುವಾರ ಬೆಳಿಗ್ಗೆ ಹಂಪಿಗೆ ಹೋಗಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಶೀಲಿಸಲಾಗುವುದು’ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದ್ದಾರೆ.
ಶನಿವಾರ ಈ ಬಗ್ಗೆ ಹೇಳಿಕೆ ನೀಡಿರುವ ಅವರು, ’ಬೃಂದಾವನ ಪತ್ತೆ ಆಗಿರುವುದು ಸಂತೋಷದ ವಿಷಯ. ಅಧಿಕಾರಿಗಳೊಂದಿಗೆ ಚರ್ಚಿಸಿ ಐತಿಹಾಸಿಕ ದಾಖಲೆಗಳಲನ್ನು ನೋಡಿ, ಬೃಂದಾವನದ ಮಾದರಿ, ಅದರ ಮೇಲಿರುವ ಕುರುಹುಗಳನ್ನು ಪರಿವೀಕ್ಷಣೆ ಮಾಡಲಾಗುವುದು. ಮಠದಲ್ಲಿರುವ ದಾಖಲೆಗಳು ಮತ್ತು ಇತಿಹಾಸ ತಜ್ಞರ ಅಭಿಪ್ರಾಯವನ್ನು ಕ್ರೋಢೀಕರಿಸಿ ನಿರ್ಣಯಕ್ಕೆ ಬರಲಾಗುವುದು’ ಎಂದು ಹೇಳಿದ್ದಾರೆ.
ನವರಾತ್ರಿ ಉತ್ಸವ ನಿಮಿತ್ತ ಮಂತ್ರಾಲಯದಲ್ಲಿ ಪೂಜಾ ಕಾರ್ಯಗಳನ್ನು ಮುಗಿಸಿಕೊಂಡು ಹಂಪಿಗೆ ತೆರಳಲಾಗುವುದು.ಹಂಪಿ ಅಭಿವೃದ್ಧಿ ಪ್ರಾಧಿಕಾರದವರು, ಮಠದ ಶಿಷ್ಯರು ಈ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದು ಕೋರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.