ಸಿರವಾರ: ತಾಲ್ಲೂಕಿನ ಶಾಖಾಪೂರು ಗ್ರಾಮದ ಕುಡಿಯುವ ನೀರಿನ ಕೆರೆಯಲ್ಲಿ ವ್ಯಕ್ತಿಯೊಬ್ಬ ಕಲ್ಲು ಎಸೆದಿದ್ದಕ್ಕೆ ಅನುಮಾನಗೊಂಡ ಗ್ರಾಮಸ್ಥರು ಇಡೀ ಕೆರೆಯ ನೀರನ್ನೇ ಖಾಲಿ ಮಾಡಿಸುತ್ತಿರುವ ಘಟನೆ ಮಂಗಳವಾರ ನಡೆದಿದೆ.
ಅತ್ತನೂರು ಗ್ರಾಮ ಪಂಚಾಯಿತಿ ಸಿಬ್ಬಂದಿ ಮಹಮ್ಮದ್ ಎಂಬುವವರು ಶುಕ್ರವಾರ ಶಾಖಾಪೂರಿಗೆ ತೆರಳುವಾಗ ತಮಾಷೆಗಾಗಿ ಕಲ್ಲು ಎಸೆದಿದ್ದಾರೆ ಅದನ್ನು ಕಂಡ ಗ್ರಾಮಸ್ಥರು ಕೆರೆಯಲ್ಲಿ ಏನೋ ಎಸೆದ ಎಂದು ಅನುಮಾನಗೊಂಡು ವ್ಯಕ್ತಿಯನ್ನು ಕರೆದು ಆ ಕೆರೆಯ ನೀರನ್ನು ಕುಡಿಸಿದ್ದಾರೆ.
ಪೊಲೀಸರು ಹಾಗೂ ಗ್ರಾಮಸ್ಥರು ಈ ಬಗ್ಗೆ ಮಹಮ್ಮದ್ ಕರೆದು ವಿಚಾರಿಸಿದ್ದಾರೆ.
‘ಕೆಲ ಗ್ರಾಮಸ್ಥರು ಮನೆಯಲ್ಲಿನ ನೀರು ಮತ್ತು ಮಾಡಿದ ಅಡುಗೆಯನ್ನು ಹೊರಗಡೆ ಚೆಲ್ಲಿದ್ದಾರೆ. ಈ ವಿಷಯ ಕುರಿತು ಪೊಲೀಸರು ಕೆಲ ಮುಖಂಡರು ಏನು ಇಲ್ಲ ಎಂದು ಸಮಜಾಯಿಸಿ ಹೇಳಿದರೂ ಕೇಳದ ಗ್ರಾಮಸ್ಥರು ಭಾನುವಾರ ಬೇಳಿಗ್ಗೆಯಿಂದಲೇ ಕೆರೆಯಲ್ಲಿನ ನೀರನ್ನು ಪಂಪ್ಸೆಟ್ ಎಂಜಿನ್ ಮೂಲಕ ಸಂಪೂರ್ಣ ಖಾಲಿ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಇನ್ನೂ ನಾಲ್ಕು ದಿನ ನೀರು ತೆಗೆಯುವುಷ್ಟು ನೀರಿನ ಸಂಗ್ರಹವಿದೆ‘ ಎಂದು ಗ್ರಾಮದ ಮುಖಂಡರೊಬ್ಬರು ಮಂಗಳವಾರ ಪತ್ರಿಕೆಗೆ ಮಾಹಿತಿ ನೀಡಿದರು.
ಗ್ರಾಮದಲ್ಲಿ ಮೂರು ಸಾವಿರ ಜನಸಂಖ್ಯೆ ಇದೆ. ಇವರಿಗೆ ಕುಡಿಯಲು ಮೂರು ತಿಂಗಳಿಗೆ ಆಗುವಷ್ಟು ನೀರು ಇತ್ತು. ಒಂದು ತಿಂಗಳ ಹಿಂದೆಯಷ್ಟೇ ತುಂಗಭದ್ರ ಎಡನಾಲೆಯಿಂದ ಈ ಕೆರೆಗೆ ನೀರು ಹರಿಸಲಾಗಿತ್ತು.
‘ಕೆರೆಗೆ ಕಲ್ಲು ಎಸೆದಿದ್ದಕ್ಕೆ ಗ್ರಾಮಸ್ಥರು ನೀರನ್ನು ಖಾಲಿ ಮಾಡುವಂತೆ ಒತ್ತಡ ಹೆಚ್ಚಾಗಿದ್ದರಿಂದ ಗ್ರಾಮಸ್ಥರ ಒತ್ತಾಯದಂತೆ ಖಾಲಿ ಮಾಡಿಸಲಾಗುತ್ತಿದೆ'ಎಂದು ಅತ್ತನೂರು ಪಿಡಿಒ ವಿಜಯಕುಮಾರ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.