ಲಿಂಗಸುಗೂರು: ‘ಜಲದುರ್ಗ ಜಮೀನು, ಗುಡ್ಡಗಾಡು ಪ್ರದೇಶ ದಾಖಲಾತಿಗಳ ಅಲಭ್ಯತೆ, ರೈತರ ಪರದಾಟ ಸಾಮೂಹಿಕ ಸಮಸ್ಯೆಗಳ ಕುರಿತಂತೆ ನ್ಯಾಯಾಧೀಶರು ವಿಶೇಷ ಅಧಿಕಾರ ಬಳಸಿ ನ್ಯಾಯ ಒದಗಿಸಬಹುದು. ಆದರೆ, ತಮಗೂ ಕೂಡ ವಿಶೇಷ ಅಧಿಕಾರ ಬಳಸಲು ಮಿತಿ ಇದೆ’ ಎಂದು ರಾಯಚೂರು ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಇ.ಎಸ್ ಇಂದಿರೇಶ ಹೇಳಿದರು.
ಶುಕ್ರವಾರ ನ್ಯಾಯಾಲಯಗಳ ಸಮುಚ್ಛಯ ನಿರ್ಮಾಣ ಕಾಮಗಾರಿ ಪರಿಶೀಲನೆ ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಪೂರ್ವಾಪರ ಮಾಹಿತಿ ಇರದೆ ಏನನ್ನೂ ಹೇಳಲಾಗದು. ಕಾಲಘಟ್ಟದಲ್ಲಿ ಅಂತಹ ಸಮಸ್ಯೆಗಳ ಕುರಿತು ಅಗತ್ಯ ಬಿದ್ದರೆ ವಿಶೇಷ ಅಧಿಕಾರ ಬಳಸಬಹುದೆ ಎಂಬುದರ ಚಿಂತನೆ ನಡೆಸುತ್ತೇವೆ. ಕಟ್ಟಡ ಕಾಮಗಾರಿ ತೃಪ್ತಿಕರವಾಗಿದೆ’ ಎಂದು ತಿಳಿಸಿದರು.
‘ಗುತ್ತಿಗೆದಾರರು ಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಕಟ್ಟಡಕ್ಕೆ ಬಳಸುವ ವಸ್ತುಗಳು ಗುಣಮಟ್ಟದಿಂದ ಕೂಡಿಬೇಕು. ಸ್ಥಳೀಯ ನ್ಯಾಯಾಧೀಶರು, ವಕೀಲರು ಆಗಾಗ ಭೇಟಿ ನೀಡಿ ಪರಿಶೀಲನೆ ಮಾಡುತ್ತಿರಬೇಕು. ಮಾದರಿ ಸಮುಚ್ಛಯವಾಗಿ ನಿರ್ಮಾಣಗೊಳಿಸಿ’ ಎಂದು ಸಲಹೆ ನೀಡಿದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಭೂಪನಗೌಡ ಪಾಟೀಲ ಕರಡಕಲ್ಲ ವಿವಿಧ ಕೋರ್ಟ್ಗಳ ನ್ಯಾಯಾಧೀಶರಾದ ಬಿ.ಬಿ ಜಕಾತಿ, ಚಂದ್ರಶೇಖರ ದಿಡ್ಡಿ, ದೇಶಮುಖ ಶಿವಕುಮಾರ, ಶ್ವೇತಾಸಿಂಗ್, ಹತ್ತಿಕಾಳ ಪ್ರಭು ಸಿದ್ಧಪ್ಪ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಯಾನಂದ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜ್ಯೋತಿಪ್ರಕಾಶ, ಕಿರಿಯ ಎಂಜಿನಿಯರ್ ಲಕ್ಷ್ಮಿಕಾಂತ ಗುಂಟಿ, ಗುತ್ತಿಗೆದಾರ ರಾಜು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.