ಕವಿತಾಳ: ಸಿರವಾರ ತಾಲ್ಲೂಕಿನ ಕಡ್ಡೋಣಿ ತಿಮ್ಮಾಪುರ ಗ್ರಾಮದಲ್ಲಿ, ವಿಷಪೂರಿತ ಚವಳೆಕಾಯಿಯ ಪಲ್ಯ ಸೇವಿಸಿ ಅಸ್ವಸ್ಥರಾಗಿದ್ದ ತಂದೆ ಹಾಗೂ ಇಬ್ಬರು ಪುತ್ರಿಯರು ಮಂಗಳವಾರ ಮೃತಪಟ್ಟಿದ್ದಾರೆ. ಕುಟುಂಬದ ಮೂವರು ಅಸ್ವಸ್ಥಗೊಂಡಿದ್ದಾರೆ.
ರಮೇಶ ನಾಯಕ (38), ಪುತ್ರಿಯರಾದ ನಾಗಮ್ಮ (8), ದೀಪಾ (6) ಮೃತರು. ಅವರ ಪತ್ನಿ ಪದ್ಮಾ (35) ಸ್ಥಿತಿ ಗಂಭೀರವಾಗಿದ್ದು, ಪುತ್ರ ಕೃಷ್ಣ (12), ಪುತ್ರಿ ಚೈತ್ರಾ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.
ಮೂವರಿಗೂ ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ರಾಯಚೂರು ರಿಮ್ಸ್ಗೆ ದಾಖಲಿಸಲಾಗಿದೆ. ರಮೇಶ ನಾಯಕ ಅವರು ಎರಡು ಎಕರೆ ಸ್ವಂತ ಜಮೀನಿನಲ್ಲಿ ಹತ್ತಿ ಬೆಳೆದಿದ್ದರು. ಅದರಲ್ಲಿಯೇ ಮನೆ ಬಳಕೆಗಾಗಿ ತರಕಾರಿ ಬೆಳೆದಿದ್ದರು.
ಕೀಟ ನಿಯಂತ್ರಣಕ್ಕಾಗಿ ಹತ್ತಿ ಗಿಡಗಳ ಕೆಳಗೆ ಕೀಟನಾಶಕ ಮಾತ್ರೆಗಳನ್ನು ಇಟ್ಟಿದ್ದರು. ಸೋಮವಾರ ಹೊಲದಿಂದ ಚವಳೆಕಾಯಿ ತಂದು ಪಲ್ಯ ತಯಾರಿಸಿ ರಾತ್ರಿ ತಿಂದಿದ್ದರು. ನಂತರ ವಾಂತಿ–ಭೇದಿ ಕಾಣಿಸಿಕೊಂಡಿದೆ. ಗ್ರಾಮಸ್ಥರು ಎಲ್ಲರನ್ನು ಚಿಕಿತ್ಸೆಗೆ ಲಿಂಗಸುಗೂರು ಆಸ್ಪತ್ರೆಗೆ ದಾಖಲಿಸಿದ್ದರು. ಕವಿತಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.