ಮಸ್ಕಿ: ತುಂಗಭದ್ರಾ ಎಡದಂಡೆ ಮುಖ್ಯ ಕಾಲವೆ ದುರಸ್ತಿ ಕಾರ್ಯ ಭರದಿಂದ ಸಾಗಿದ್ದು ಮಾರ್ಚ್ 13ರ ಸಂಜೆಯಿಂದಲೇ ಕಾಲುವೆಗೆ ನೀರು ಬಿಡುವ ಸಾಧ್ಯತೆ ಇದೆ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.
ಮುನಿರಾಬಾದ್ ಸಮೀಪದ ಅಗಳಕೇರಾ ಬಳಿ ಕಾಲುವೆ ಹಾಳಾದ ಸ್ಥಳಕ್ಕೆ ಭೇಟಿ ನೀಡಿ ದುರಸ್ತಿ ಕಾರ್ಯ ಪರಿಶೀಲನೆ ನಡೆಸಿದ ನಂತರ ತಾಲ್ಲೂಕಿನ ಗುಡದೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಕಾಲುವೆ ಹಾಳಾದ ಸ್ಥಳದಲ್ಲಿ ದೊಡ್ಡ-ದೊಡ್ಡ ಮರಗಳಿದ್ದು, ದೊಡ್ಡ ಮರವೊಂದು ಕಾಲುವೆ ಮೇಲೆ ಉರುಳಿಬಿದ್ದ ಪರಿಣಾಮ ಕಾಲುವೆ ಕುಸಿತವಾಗಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಗುತ್ತಿಗೆದಾರರಿಗೂ ಸೂಚನೆ ನೀಡಲಾಗಿದ್ದು, ತೀವ್ರ ಗತಿಯಲ್ಲಿ ಕೆಲಸ ಸಾಗಿದೆ. ರೈತರು ಯಾವುದೇ ಆತಂಕ ಪಡುವ ಅಗತ್ಯ ಇಲ್ಲ. ಮಾರ್ಚ್ 13 ರ ಸಂಜೆಯಿಂದಲೇ ಕಾಲುವೆಗೆ ನೀರು ಬರಲಿದ್ದು ಭತ್ತದ ಬೆಳೆಗೆ ನೀರು ಹರಿಸಿಕೊಳ್ಳಬಹುದಾಗಿದೆ’ ಎಂದರು
ತಹಶೀಲ್ದಾರ್ ಕವಿತಾ ಆರ್., ತಹಶೀಲ್ದಾರ್ (ಗ್ರೇಡ್ 2) ಪ್ರಭಾಕರ ಭಟ್ ಇತರರು ಇದ್ದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.