ತುರ್ವಿಹಾಳ: ಸಿಂಧನೂರು ತಾಲ್ಲೂಕಿನ ಅತಿ ದೊಡ್ಡ ಹೋಬಳಿಯಾದ ತುರ್ವಿಹಾಳ ಸುತ್ತಲಿನ ಗ್ರಾಮಗಳ ಜನರು ಹೊಸ ಆಧಾರ್ ಕಾರ್ಡ್, ತಿದ್ದುಪಡಿಗೆ ಪರದಾಡುತ್ತಿದ್ದಾರೆ.
ಹೋಬಳಿ ವ್ಯಾಪ್ತಿಗೆ 32 ಹಳ್ಳಿ ಬರುತ್ತವೆ. ಪಟ್ಟಣದ ವ್ಯಾಪ್ತಿಗೆ ಸೇರಿದ ಗುಂಜಳ್ಳಿ ಕ್ಯಾಂಪ್, ಶ್ರೀನಿವಾಸ್ ಕ್ಯಾಂಪ್, ಬಸಣ್ಣ ಕ್ಯಾಂಪ್, ಮದ್ಯಕ್ಯಾಂಪ್ಗಳಲ್ಲಿ ಒಟ್ಟು 20 ಸಾವಿರ ಜನ ಇದ್ದಾರೆ. ಆದರೆ ಕಳೆದ 2 ತಿಂಗಳಿಂದ ಆಧಾರ್ ಸೇವಾ ಕೇಂದ್ರ ಮುಚ್ಚಿದ್ದರಿಂದ ಜನರು ಸರ್ಕಾರಿ ಸೇವೆ ಪಡೆಯಲು, ಮಕ್ಕಳನ್ನು ಶಾಲೆಗೆ ಹಚ್ಚಲು ಸಮಸ್ಯೆಯಾಗಿದೆ.
‘ಹೊಲದ ಪಹಣಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಬೇಕು. ಆದರೆ ಕೆಲ ಆಧಾರ್ ಕಾರ್ಡ್ನಲ್ಲಿ ಹೆಸರು, ವಿಳಾಸ ತಿದ್ದುಪಡಿ ಹಾಗೂ ದೂರವಾಣಿ ಸಂಖ್ಯೆ ಸೇರಿಸಲು ತೊಂದರೆಯಾಗಿದೆ’ ಎಂದು ರೈತ ಶಿವಪುತ್ರಪ್ಪ ಕೆಂಗೇರಿ ದೂರಿದರು.
‘ಶೈಕ್ಷಣಿಕ ವರ್ಷ ಆರಂಭವಾಗಿದ್ದು ದಾಖಲಾತಿ ಪಡೆಯಲು, ವಿದ್ಯಾರ್ಥಿ ವೇತನ ಸೇರಿ ಇತರೆ ಸೌಲಭ್ಯಕ್ಕಾಗಿ ಆಧಾರ್ ಕಾರ್ಡ್ ಅವಶ್ಯ. ಕೆಲವು ಮಕ್ಕಳ ಜನನ ಪ್ರಮಾಣ ಪತ್ರಕ್ಕೂ ಮತ್ತು ಮಗುವಿನ ಹೆಸರಿಗೂ ವ್ಯತ್ಯಾಸವಿದೆ. ಹೀಗಾಗಿ ಆಧಾರ್ ತಿದ್ದುಪಡಿಯಾಗಬೇಕು, ಶಾಲಾ ಪ್ರವೇಶಕ್ಕೆ ಸಮಸ್ಯೆ ಉಂಟಾಗುತ್ತಿದೆ. ಪಟ್ಟಣದಲ್ಲಿ ಶೀಘ್ರ ಆಧಾರ್ ಸೇವಾ ಕೇಂದ್ರ ತೆರೆಯಬೇಕು’ ಎಂದು ಪಾಲಕರು ಆಗ್ರಹಿಸಿದ್ದಾರೆ.
ಆಧಾರ್ ಕೇಂದ್ರ ನೌಕರರ ಹಳೆಯ ಗುತ್ತಿಗೆ ಮುಗಿದಿದೆ. ಐದು ದಿನಗಳಲ್ಲಿ ಹೊಸ ಗುತ್ತಿಗೆ ನೌಕರರ ನೇಮಕ ಮಾಡಿಕೊಂಡು ಸೇವಾ ಕೇಂದ್ರ ಆರಂಭಿಸಲಾಗುವುದು
-ಅಂಬಾದಾಸ ಉಪ ತಹಶೀಲ್ದಾರ್ ತುರ್ವಿಹಾಳ
ಪ್ರತಿಯೊಂದು ಸೌಲಭ್ಯಕ್ಕೂ ಆಧಾರ್ ಕಾರ್ಡ್ ಕೇಳುವ ಸರ್ಕಾರಿ ಅಧಿಕಾರಿಗಳು ಆಧಾರ್ ಸೇವಾ ಕೇಂದ್ರಕ್ಕೆ ಮಹತ್ವ ನೀಡುತ್ತಿಲ್ಲ
-ನವಾಬ್ ಶರೀಫ್ ತುರ್ವಿಹಾಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.