ಶಕ್ತಿನಗರ(ರಾಯಚೂರು ಜಿಲ್ಲೆ): ಪೆದ್ದಕುರಂ (ಕುರ್ವಕುಲ) ಸಮೀಪದ ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ನಾಲ್ವರು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಮೃತದೇಹಗಳು ತೆಲಂಗಾಣ ಗಡಿ ಭಾಗದ ಜುರಾಲಾ ಸಮೀಪದ ಅಣೆಕಟ್ಟು ಬಳಿ ಬುಧವಾರ ಬೆಳಿಗ್ಗೆ 7.15ಕ್ಕೆ ಪತ್ತೆಯಾಗಿವೆ. ಆದರೆ, ಅವು ಯಾರವು ಎಂಬುದು ಗೊತ್ತಾಗಿಲ್ಲ.
ಘಟನೆ ನಡೆದು ಒಂದು ದಿನದ ಬಳಿಕ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಮಂಗಳವಾರ ಇಡೀ ದಿನ ಕಾರ್ಯಾಚರಣೆ ನಡೆಸಿದರೂ ಪತ್ತೆಯಾಗದ ಸಂದರ್ಭದಲ್ಲಿ, ನಾಲ್ವರು ಜುರಾಲಾ ಅಣೆಕಟ್ಟು ಬಳಿ ಸಿಲುಕಿರಬಹುದು ಎಂದು ಎನಡಿಆರೆಫ್ ಸಿಬ್ಬಂದಿ ಶಂಕೆ ವ್ಯಕ್ತಪಡಿಸಿದ್ದರು.
ಸೋಮವಾರ (ಆಗಸ್ಟ್ 17) ಸಂಜೆ ತೆಲಂಗಾಣ ರಾಜ್ಯದ ಮಖ್ತಲ್ ಪೊಲೀಸ್ ಠಾಣೆ ವ್ಯಾಪ್ತಿಯ ಪಂಚಪಾಡುವಿನಿಂದ 13 ಮಂದಿ ಸಂತೆ ಮುಗಿಸಿಕೊಂಡು ತಮ್ಮೂರು ಪೆದ್ದಕುರಂಗೆ ತೆಪ್ಪದಲ್ಲಿ ಮರಳುತ್ತಿದ್ದ ವೇಳೆ ಘಟನೆ ನಡೆದಿತ್ತು. 9 ಮಂದಿಯನ್ನು ರಕ್ಷಿಸಲಾಗಿತ್ತು. ಒಬ್ಬ ಬಾಲಕಿ ಮತ್ತು ಮೂವರು ಮಹಿಳೆಯರು ನಾಪತ್ತೆಯಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.