ADVERTISEMENT

ಶಿಲ್ಪಾ ಮೆಡಿಕೇರ್‌ನ ಒಂದನೇ ಘಟಕ ಸೀಸ್ ಮಾಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಮೇ 2019, 13:41 IST
Last Updated 13 ಮೇ 2019, 13:41 IST

ರಾಯಚೂರು: ಪರಿಸರ ಮಾಲಿನ್ಯ ನಿಯಮಗಳನ್ನು ಉಲ್ಲಂಘಿಸಿರುವ ಶಿಲ್ಪಾ ಮೆಡಿಕೇರ್‌ ಕಂಪೆನಿಯ ಒಂದನೇ ಘಟಕವನ್ನು ಸೀಸ್‌ ಮಾಡಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ಆದೇಶವನ್ನು ಜಿಲ್ಲಾಧಿಕಾರಿ ಉಲ್ಲಂಘನೆ ಮಾಡಿದ್ದಾರೆ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ರಜಾಕ್ ಉಸ್ತಾದ್ ಆರೋಪಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸೂಗೂರು ಹೋಬಳಿಯ ಕೈಗಾರಿಕಾ ಪ್ರದೇಶದಲ್ಲಿ ಹಲವು ವರ್ಷಗಳಿಂದ ಔಷಧ ತಯಾರಿಸಲು ಉಪಯೋಗಿಸುವ ಡ್ರಗ್‌ನ್ನು ಉತ್ಪಾದನೆ ಮಾಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಈ ಕಂಪೆನಿ ನಿಯಮಗಳನ್ನು ಉಲ್ಲಂಘನೆ ಮಾಡಿದೆ. ಅಲ್ಲದೇ ಒಂದನೇ ಘಟಕದ ಪರವಾನಿಗೆ 2016ರ ಜೂನ್‌ 30ಕ್ಕೆ ಮುಗಿದಿದ್ದರೂ, ಅಕ್ರಮವಾಗಿ ಡ್ರಗ್‌ ಉತ್ಪಾದನೆ ಮಾಡಲಾಗುತ್ತಿದೆ ಎಂದು ದೂರಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು 2018ರ ಆಗಸ್ಟ್‌ 21ರಂದು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಮುಂದಿನ ಆದೇಶದವರೆಗೆ ಉತ್ಪಾದನೆ ಸ್ಥಗಿತಗೊಳಿಸಲು, ಜಿಲ್ಲಾಧಿಕಾರಿಗೆ ಸೀಸ್‌ ಮಾಡಲು ಹಾಗೂ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ. ಆದರೆ, ಇದುವರೆಗೆ ಯಾವುದೇ ಕ್ರಮ ಜರುಗಿಸಿಲ್ಲ ಎಂದರು.

ADVERTISEMENT

ಜೀವಕ್ಕೆ ಮಾರಕವಾಗುವ ರಸಾಯನಿಕ ವಸ್ತುಗಳನ್ನು ಉತ್ಪಾದನೆ ಮಾಡಿ ಲಕ್ಷಾಂತರ ಜನರ ಜೀವನ ಹಾಳು ಮಾಡುತ್ತಿರುವ ಕಂಪೆನಿಯ ಉತ್ಪಾದನೆಯನ್ನು ಸ್ಥಗಿತಗೊಳಿಸಲು ದೆಹಲಿಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ಸೂಚಿಸಿದೆ. ಕೇಂದ್ರದ ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಪಡೆದ ಸಿಎಫ್‌ಒ 2016ರ ಜೂನ್‌ 30ಕ್ಕೆ ಮುಗಿದಿದೆ. ಪುನಃಇಸಿ ಪಡೆಯದೇ ಉತ್ಪಾದನೆ ಮಾಡುತ್ತಿರುವುದು ಗಂಭೀರ ವಿಷಯವಾಗಿದೆ ಎಂದು ತಿಳಿಸಿದರು.

ಆದ್ದರಿಂದ ಜಿಲ್ಲಾಧಿಕಾರಿ ತ್ವರಿತವಾಗಿ ಕಾರ್ಖಾನೆಯನ್ನು ಸೀಸ್ ಮಾಡಿ, ಕಾನೂನು ಮೀರಿ ಉತ್ಪಾದನೆ ಮಾಡಿರುವ ಆಡಳಿತದ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. 2016ರಿಂದ ಇಲ್ಲಿಯವರೆಗೆ ಕಂಪೆನಿ ಗಳಿಸಿದ ಲಾಭವನ್ನು ವಸೂಲಿ ಮಾಡಿ ಪರಿಸರ ಸುಧಾರಣೆಗೆ ಬಳಸಬೇಕು ಎಂದು ಒತ್ತಾಯಿಸಿದರು.

ಶರಣಬಸಪ್ಪ, ಮಲ್ಲಿಕಾರ್ಜುನ ಶಿಖರಮಠ, ಮಹ್ಮದ ರಫಿಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.