ADVERTISEMENT

ರಾಜ್ಯಪಾಲ ಕಲ್ಯಾಣಸಿಂಗ್, ಚುನಾವಣಾಧಿಕಾರಿ ಸುನೀಲ ಅರೊರಾ ವಜಾಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಮೇ 2019, 14:35 IST
Last Updated 11 ಮೇ 2019, 14:35 IST
ಎಸ್‌.ಆರ್‌. ಹಿರೇಮಠ
ಎಸ್‌.ಆರ್‌. ಹಿರೇಮಠ   

ರಾಯಚೂರು: ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿಯಾಗಬೇಕು ಎಂದಿರುವ ರಾಜಸ್ಥಾನದ ರಾಜ್ಯಪಾಲ ಕಲ್ಯಾಣಸಿಂಗ್ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹಾಗೂ ಪ್ರಧಾನಿ ಮೋದಿ ಅವರಿಗೆ ನೀತಿ ಸಂಹಿತೆ ಉಲ್ಲಂಘನೆ ಸಂಬಂಧಿಸಿ ನೋಟಿಸ್‌ ನೀಡದ ಚುನಾವಣಾಧಿಕಾರಿ ಸುನೀಲ ಅರೊರಾ ಅವರನ್ನು ಸೇವೆಯಿಂದ ವಜಾಗೊಳಿಸಬೇಕು. 2017ರ ಫೈನಾನ್ಸ್‌ ಬಿಲ್‌ನ್ನು ಸುಪ್ರೀಂಕೋರ್ಟ್‌ನ ರೆಫೆರನ್ಸ್‌ಗೆ ವಹಿಸಬೇಕು ಎಂದು ಸಿಟಿಜನ್ ಫಾರ್ ಡೆಮಾಕ್ರಸಿ ಅಧ್ಯಕ್ಷ ಎಸ್.ಆರ್.ಹಿರೇಮಠ ಒತ್ತಾಯಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣತಂತ್ರ ವ್ಯವಸ್ಥೆ ಗಂಭೀರ ಬಿಕ್ಕಟ್ಟಿನಲ್ಲಿರುವ ಸಂವಿಧಾನ ಬದ್ಧ ಸ್ಥಾನದಲ್ಲಿರುವವರು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ರಾಷ್ಟ್ರಪತಿಗೆ ಬಹಿರಂಗ ಪತ್ರ ಬರೆಯಲಾಗಿದೆ. ದೇಶದ 11 ಸೆಕ್ಟರ್‌ನಲ್ಲಿ ಮಾಡಬೇಕಾಗಿರುವ ಬದಲಾವಣೆಗಳ ಬಗ್ಗೆ ಪತ್ರದಲ್ಲಿ ವಿವರಿಸಲಾಗಿದೆ ಎಂದರು.

ದೇಶದಲ್ಲಿ ತುರ್ತು ಪರಿಸ್ಥಿತಿ 20 ಪಟ್ಟು ಹೆಚ್ಚಾಗಿದೆ. ಆದರೆ, ನರೇಂದ್ರಮೋದಿ ಜನರ ದೃಷ್ಟಿಯನ್ನು ಬದಲಾಯಿಸುವ ಮೂಲಕ ದೇಶದ ಸಮಸ್ಯೆಗಳಾದ ನಿರುದ್ಯೋಗ, ರೈತರ ಆತ್ಮಹತ್ಯೆ ಹಾಗೂ ಭ್ರಷ್ಟಾಚಾರದ ಬಗ್ಗೆ ಮಾತೆತ್ತುತ್ತಿಲ್ಲ. ರಾಹುಲ್‌ ಗಾಂಧಿ ದೇಶದ ನಾಗರಿಕನಲ್ಲ ಎನ್ನುವ ಮೂಲಕ ಮುಖ್ಯ ವಿಷಯಗಳನ್ನು ಚರ್ಚಿಸದೇ ಅನಗತ್ಯವಾದ ವಿಚಾರಗಳನ್ನು ಚರ್ಚೆಗೆ ತರಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕಾಂಗ್ರೆಸ್‌ ಪರ್ಯಾಯವಲ್ಲ. ಎನ್‌ಡಿಎ ಹಾಗೂ ಮಹಾಘಟಬಂಧನ ಸೇರಿದಂತೆ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದಿಲ್ಲ. ಆದ್ದರಿಂದ ಪ್ರಜೆಗಳೇ ಜಾಗೃತರಾಗಬೇಕಾಗಿದೆ ಎಂದರು.

ರಾಹುಲ್ ಗಾಂಧಿ ಚೌಕಿದಾರ್ ಚೋರ್‌ ರಾಜಕೀಯ ಆರೋಪವನ್ನು ಸುಪ್ರೀಂಕೋರ್ಟ್ ಹೇಳಿದೆ ಎಂದು ಜನರನ್ನು ಮೋಸಮಾಡಲು ಪ್ರಯತ್ನಿಸಿದ್ದಾರೆ. ಮನಮೋಹನ ಸಿಂಗ್ ಹಣಕಾಸು ಮಂತ್ರಿಯಾಗಿದ್ದಾಗ ಮಾಡಿದ ತಪ್ಪುಗಳಿಂದ ದೇಶದ ಸಂಪತ್ತು ಕೆಲವೇ ಜನರ ಕೈಯಲ್ಲಿ ಉಳಿದಿದೆ. ಕಾಂಗ್ರೆಸ್ ಮಾಡಬಾರದ್ದನ್ನೆಲ್ಲ ಮಾಡಿದಾಗ ಜಯಪ್ರಕಾಶ ನಾರಾಯಣ ನೇತೃತ್ವದಲ್ಲಿ ಕಾಂಗ್ರೆಸ್‌ ಸೋಲಿಸಿ ಪ್ರಜಾಪ್ರಭುತ್ವ ಮರುಸ್ಥಾಪನೆ ಮಾಡಲಾಯಿತು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಮಾಲೀಕರಾಗಿದ್ದು, ಜವಾಬ್ದಾರಿ ನಿಭಾಯಿಸಬೇಕಾಗಿದೆ. ನಾಗರಿಕ ಸಮಾಜದ ಪರವಾಗಿ ಸಮಾನ ಮನಸ್ಕ ಸಂಘಟನೆಗಳು ಕೂಡಿಕೊಂಡು ವ್ಯವಸ್ಥಿತವಾಗಿ ದೀರ್ಘಾವಧಿ ಅಭಿಯಾನ ನಡೆಸುವ ಮೂಲಕ ಸಂವಿಧಾನಾತ್ಮಕ ಸಂಸ್ಥೆಗಳ ಸಶಕ್ತಿಕರಣಗೊಳಿಸಲು ಹೋರಾಟ ಮಾಡಲಾಗುತ್ತದೆ. ಇದಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದರು.

ಸಮಿತಿಯ ಸದಸ್ಯರಾದ ರಾಘವೇಂದ್ರ ಕುಷ್ಟಗಿ, ಖಾಜಾ ಅಸ್ಲಂ, ಜಾನ್‌ವೆಸ್ಲಿ, ವೀರಣ್ಣ ಭಂಡಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.