ರಾಯಚೂರು: ವಿವಿಧ ನಿಗಮಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಕಾರ್ಮಿಕರಿಗೆ ಪಿಂಚಣಿ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿ ಕಾರ್ಮಿಕ ಪಿಂಚಣಿ ಯೋಜನೆಯ ಪಿಂಚಣಿದಾರರ ಕ್ಷೇಮಾಭಿವೃದ್ಧಿಮಹಾಮಂಡಳಿ ನೇತೃತ್ವದಲ್ಲಿ ನಿವೃತ್ತ ಕಾರ್ಮಿಕರು ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಇಪಿಎಫ್ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಭವಿಷ್ಯನಿಧಿ ಅಧಿಕಾರಿಯ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿ, ಪಿಂಚಣಿ ಹೆಚ್ಚಿಸಲು ಆಗ್ರಹಿಸಿದರು.
ನಿವೃತ್ತ ಕಾರ್ಮಿಕರಿಗೆ ₹ 1200 ಪಿಂಚಣಿ ನೀಡಲಾಗುತ್ತಿದ್ದು, ಇದರಿಂದ ಜೀವನ ನಿರ್ವಹಣೆ ಮಾಡಲುಕಷ್ಟವಾಗಿದೆ. ಐದು ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಆದರೆ ಸರ್ಕಾರ ಪಿಂಚಣಿ ಹೆಚ್ಚಳ ಮಾಡಿಲ್ಲ. ಯುಪಿಎ ಸರ್ಕಾರದ ಅವಧಿಯಲ್ಲಿ ಪಿಂಚಣಿಯನ್ನು ₹3 ಸಾವಿರಕ್ಕೆ ಹೆಚ್ಚಿಸಲು ಸಮಿತಿ ರಚಿಸಲಾಗಿದ್ದು, ಆದರೆ, ಸರ್ಕಾರ ಬದಲಾದ ನಂತರ ಪಿಂಚಣಿ ಹೆಚ್ಚಳ ನಿರ್ಧಾರವನ್ನು ಕೈಬಿಡಲಾಗಿದೆ ಎಂದರು.
ಪದಾಧಿಕಾರಿಗಳಾದ ವೀರಭದ್ರಪ್ಪ, ಭೀಮಸೇನರಾವ್, ಸಿದ್ಧನಗೌಡ, ಮಂಜುನಾಥ, ಮಲ್ಲಿಕಾರ್ಜುನ ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.