ADVERTISEMENT

ಮೃತ ವಿದ್ಯಾರ್ಥಿನಿಗೆ ಶ್ರದ್ಧಾಂಜಲಿ: ನ್ಯಾಯಯುತ ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 13:39 IST
Last Updated 20 ಏಪ್ರಿಲ್ 2019, 13:39 IST
ರಾಯಚೂರಿನಲ್ಲಿ ಶುಕ್ರವಾರ ಸಂಜೆ ವೀರ ಸಾವರ್ಕರ್ ಯೂತ್‌ ಅಸೋಸಿಯೇಷನ್‌ನಿಂದ ವಿದ್ಯಾರ್ಥಿನಿ ಮಧು ಪತ್ತಾರ್‌ಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು
ರಾಯಚೂರಿನಲ್ಲಿ ಶುಕ್ರವಾರ ಸಂಜೆ ವೀರ ಸಾವರ್ಕರ್ ಯೂತ್‌ ಅಸೋಸಿಯೇಷನ್‌ನಿಂದ ವಿದ್ಯಾರ್ಥಿನಿ ಮಧು ಪತ್ತಾರ್‌ಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು   

ರಾಯಚೂರು: ವಿದ್ಯಾರ್ಥಿನಿ ಸಾವಿನ ಪ್ರಕರಣ ತಲೆತಗ್ಗಿಸುವಂತೆ ಮಾಡಿದ್ದು, ಪೊಲೀಸರು ನ್ಯಾಯಯುತವಾಗಿ ತನಿಖೆ ನಡೆಸಬೇಕು ಎಂದು ಬಿಜೆಪಿ ಮುಖಂಡ ತ್ರಿವಿಕ್ರಮ ಜೋಷಿ ಆಗ್ರಹಿಸಿದರು.

ನಗರದ ವೀರ ಸಾವರ್ಕರ್‌ ವೃತ್ತದಲ್ಲಿ ವೀರ ಸಾವರ್ಕರ್ ಯೂತ್‌ ಅಸೋಸಿಯೇಷನ್‌ನಿಂದ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮೇಣದ ಬತ್ತಿ ಹಚ್ಚಿ ಮೌನಾಚರಣೆ ನಡೆಸಿದ ನಂತರ ಮಾತನಾಡಿದರು.

ಚುನಾವಣೆ ಕರ್ತವ್ಯದ ನೆಪ ಹೇಳಿದ ಪೊಲೀಸರು ಪ್ರಕರಣದ ಬಗ್ಗೆ ಸರಿಯಾಗಿ ಕ್ರಮ ಜರುಗಿಸದಿರುವುದು ನಾಚಿಕೆಗೇಡಿನ ಸಂಗತಿಯಾಗಿದ್ದು, ಮುಂದಿನ ದಿನಗಳಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದರು.

ADVERTISEMENT

ಉಪನ್ಯಾಸಕ ಪಿ.ಎಸ್.ಹಿರೇಮಠ ಮಾತನಾಡಿ, ನನ್ನ ಹಳೆಯ ವಿದ್ಯಾರ್ಥಿನಿ ತುಂಬಾ ಧೈರ್ಯವಂತೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಸಿನವಳಲ್ಲ. ನೇಣುಹಾಕಿದ ಚಿತ್ರವನ್ನು ನೋಡಿದರೆ ಇದು ಕೊಲೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಈ ಸಾವಿಗೆ ನ್ಯಾಯ ದೊರಕಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಅಧ್ಯಕ್ಷ ಗೋವಿಂದರಾಜ್ ಮಾತನಾಡಿ, ಈ ಘಟನೆ ಹಳ್ಳಿಯಿಂದ ನಗರಕ್ಕೆ ಬರುವ ವಿದ್ಯಾರ್ಥಿನಿಯರಲ್ಲಿ ಭಯದ ವಾತಾವರಣ ನಿರ್ಮಿಸಿದೆ.ಸಾವಿಗೆ ನ್ಯಾಯ ಸಿಕ್ಕರೆ ಮಾತ್ರ ವಿದ್ಯಾರ್ಥಿನಿಯರಿಗೆ ಧೈರ್ಯ ಬರಲಿದೆ. ಆದ್ದರಿಂದ ಈ ಪ್ರಕರಣದಲ್ಲಿ ನ್ಯಾಯ ಸಿಗುವವರೆಗೆ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ಉಪನ್ಯಾಸಕರಾದ ಮಲ್ಲಿಕಾರ್ಜುನ, ಅಮೃತ, ಎಂ.ಪಿ.ವೀರೇಶ, ಮುಖಂಡರಾದ ಕಡಗೋಳ ಆಂಜನೇಯ, ಶಶಿರಾಜ ಮಸ್ಕಿ, ವಿಜಯಭಾಸ್ಕರ, ಅಂಬಾಜಿ, ಎನ್.ವಿನಾಯಕರಾವ, ವಿಜಯರಾಜ, ಪ್ರಶಾಂತಗೌಡ, ಭರತ, ಹನುಮಂತರೆಡ್ಡಿ, ಹರೀಶ, ಪರಮೇಶ, ಸಂತೋಷ, ಧನಂಜಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.