ADVERTISEMENT

ಗ್ರಾಮ ಲೆಕ್ಕಿಗನ ಕೊಲೆ: ನ್ಯಾಯಾಂಗ ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 13:06 IST
Last Updated 25 ಡಿಸೆಂಬರ್ 2018, 13:06 IST

ರಾಯಚೂರು: ಅಕ್ರಮ ಮರಳು ಲಾರಿಯ ರಾಯಲ್ಟಿ ತಪಾಸಣೆ ಮಾಡುವುದಕ್ಕೆ ಹೋದಾಗ ಗ್ರಾಮ ಲೆಕ್ಕಿಗನನ್ನು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸಲು ರಾಜ್ಯ ಸರ್ಕಾರ ಆದೇಶ ನೀಡಬೇಕು ಎಂದು ಜನಪರ ಸಂಘಟನೆಗಳ ವೇದಿಕೆ ಸಂಚಾಲಕ ಶ್ರೀನಿವಾಸ ಕೊಪ್ಪರ ಒತ್ತಾಯಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಮರಳುಗಾರಿಕೆ ವಿರುದ್ಧ ಜಿಲ್ಲೆಯಲ್ಲಿ ವ್ಯಾಪಕವಾಗಿ ಹೋರಾಟ ಮಾಡುತ್ತಿದ್ದರೂ ಅಧಿಕಾರಿಗಳು ಹಾಗೂ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ಮಾಡದಿದ್ದರೆ ಅಕ್ರಮದ ಹಿಂದಿನ ಶಕ್ತಿಗಳು ಯಾವವು ಎಂಬುದು ತಿಳಿಯುವುದಿಲ್ಲ ಎಂದು ತಿಳಿಸಿದರು.

ಈ ಬಗ್ಗೆ ಸಮಗ್ರ ತನಿಖೆ ಮಾಡದಿದ್ದರೆ ಅಕ್ರಮ ಮರಳುಗಾರಿಕೆಯನ್ನು ತಡೆಯುವುದಕ್ಕೆ ಯಾವುದೇ ಅಧಿಕಾರಿ ಮುಂದೆ ಬರದಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಪರ್ಮಿಟ್‌ ಇಲ್ಲದೆ ಮರಳು ಸಾಗಿಸಲಾಗುತ್ತಿತ್ತು ಎಂಬುದು ಈಗಾಗಲೇ ಕಂಡು ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಈ ಬಗ್ಗೆ ಸರ್ಕಾರದ ಗಮನ ಸೆಳೆದು, ಉನ್ನತ ತನಿಖೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ADVERTISEMENT

ಆಮ್‌ ಆದ್ಮಿ ಪಕ್ಷದ ಮುಖಂಡ ಭೀಮರಾಯ ಜರದಬಂಡಿ ಮಾತನಾಡಿ, ಅಕ್ರಮ ಮರಳುಗಾರಿಕೆಯನ್ನು ಪೋಷಣೆ ಮಾಡುವ ಕೆಲವು ಅಧಿಕಾರಿಗಳು ಆಯಕಟ್ಟಿನ ಜಾಗದಲ್ಲಿ ಬೇರೂರಿದ್ದಾರೆ. ನಿತ್ಯ ಅಕ್ರಮ ಮರಳುಗಾರಿಕೆ ಆಗುತ್ತಿದ್ದರೂ ಅಧಿಕಾರಿಗಳು ಅದನ್ನು ತಡೆಯುತ್ತಿಲ್ಲ ಎಂದರು.

ಬಿಎಸ್‌ಪಿ ಮುಖಂಡ ಶಿವಪ್ಪ ಬಲ್ಲಿದ್‌, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಹುಸೇನ ಭಾಷಾ, ಮಾರೆಪ್ಪ, ರಾಮು ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.