ರಾಯಚೂರು: ಕಬ್ಬು ಬೆಳೆಗಾರರ ವಿರೋಧಿ ಬ್ರೆಜಿಲ್ ಪ್ರಧಾನಿ ಬೋಲ್ಸೇನಾರೋ ಅವರನ್ನು ಗಣರಾಜ್ಯೋತ್ಸವ ಮುಖ್ಯ ಅತಿಥಿಯಾಗಿ ಆಹ್ವಾನಿಸುವುದು ಬೇಡ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವ ಅಧ್ಯಕ್ಷ ಚಾಮರಸ ಮಾಲಿಪಾಟೀಲ ಒತ್ತಾಯಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಕಬ್ಬು ಬೆಳೆಗಾರರ ವಿರೋಧಿ ಬ್ರೆಜಿಲ್ ಪ್ರಧಾನಿ ಬೋಲ್ಸೇನಾರೋ ಅವರು ಭಾರತಕ್ಕೆ ಬರುವುದನ್ನು ಎಲ್ಲ ರೈತರು ವಿರೋಧಿಸಿದ್ದಾರೆ. ಆಸ್ಟ್ರೇಲಿಯಾ ಮತ್ತು ಬ್ರೇಜಿಲ್ ದೇಶಗಳು ಜಿನಿವಾದಲ್ಲಿರುವ ವಿಶ್ವ ವಾಣಿಜ್ಯ ಒಪ್ಪಂದದ ವಿವಾದದ ನ್ಯಾಯಾಲಯದ ಮುಂದೆ ದಾವಾ ತಂದು ಭಾರತ ದೇಶದ ಕಬ್ಬು ಬೆಳೆಗಾರರಿಗೆ ವಿಶ್ವ ವಾಣಿಜ್ಯ ಒಪ್ಪಂದಕ್ಕೆ ವಿರೋಧವಾಗಿ ಹೆಚ್ಚು ಸಬ್ಸಿಡಿ ನೀಡುತ್ತಿದೆ ಮತ್ತು ಎಫ್ಆರ್ ಪಿ ದರ ನಿಗದಿ ಮಾಡುತ್ತಿದೆ, ಇದನ್ನು ರದ್ದು ಪಡಿಸಬೇಕೆಂದು ಕೇಳಿರುತ್ತಾರೆ. ಸ್ವತಃ ಬ್ರೆಜಿಲ್ ಪ್ರಧಾನಿ ಬೋಲ್ಸೇನಾರೋ ಆ ದಾವಾದಲ್ಲಿ ವಾದಿಯಾಗಿದ್ದಾರೆ. ಇಂತಹ ಪ್ರಧಾನಿಯನ್ನು ಭಾರತ ದೇಶಕ್ಕೆ ಆಹ್ವಾನಿಸುವುದು ಬೇಡ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಒತ್ತಾಯಿಸಲಾಗುವುದು. ಒಂದು ವೇಳೆ, ಭಾರತಕ್ಕೆ ಬಂದರೆ ರೈತರಿಂದ ಹೋರಾಟ ಮಾಡುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ರೈತರು ಸಂಕಷ್ಟದಲ್ಲಿದ್ದು ಫಸಲ ಭೀಮಾ ಯೋಜನೆ ಅಡಿ ಅರ್ಹ ಫಲಾನುಭವಿಗಳಿಗೆ ಪರಿಹಾರ ನೀಡಿಲ್ಲ. ರೈತರಿಗೆ ಬೆಳೆ ನಷ್ಟ ಪರಿಹಾರ ಪಾವತೀಸದೇ, ವಿಮಾ ಕಂಪನಿಗಳು ಅವ್ಯವಹಾರ ನಡೆಸಿವೆ. ಪರಿಹಾರಕ್ಕಾಗಿ ರೈತರು ವಿಮಾ ಕಂಪನಿಗಳ ಮುಖ್ಯ ಕಚೇರಿಗೆ ಹೋಗಿ ವಿಚಾರಿಸಿದರೆ ಪರಿಹಾರ ನೀಡುತ್ತೇವೆ. ಆದರೆ, ಕಮಿಷನ್ ನೀಡುವಂತೆ ಕೇಳುತ್ತಿದ್ದಾರೆ ಎಂದು ಆರೋಪಿಸಿದರು.
ಡಿಸೆಂಬರ್ 23 ರಂದು ವಿಶ್ವ ರೈತ ದಿನಾಚರಣೆ ಹಾಗೂ ರೈತ ಚೇತನಗಳಾದ ಕೆ.ಎಸ್ ಪುಟ್ಟಣ್ಣಯ್ಯ ಮತ್ತು ಎನ್.ಡಿ ಸುಂದರೇಶ್ ಅವರ ನೆನಪಿನ ದಿನಾಚರಣೆಯನ್ನು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಆಚರಿಸಲಾಗುವುದು ಎಂದರು.
ರಾಯಚೂರು ಜಿಲ್ಲೆಯ ಹಟ್ಟಿಯಲ್ಲಿ ಡಿಸೆಂಬರ್ 25 ರಂದು ರಸ್ತೆ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯಗಳಿಗೆ ಒದಗಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.ಬೂದಯ್ಯ ಸ್ವಾಮಿ, ಅಮರಣ್ಣ ಗುಡಿಹಾಳ, ಭೀಮೇಶ್ವರರಾವ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.