ರಾಯಚೂರು: ಕೇಂದ್ರ ಸರ್ಕಾರ ಎನ್ಆರ್ ಸಿ ಮತ್ತು ಸಿಎಎ ಕಾಯ್ದೆಗಳನ್ನು ಜಾರಿಗೊಳಿಸುವುದನ್ನು ಖಂಡಿಸಿ ಜೀವಪರ ನಾಗರೀಕ ಸಂಘಟನೆ ಒಕ್ಕೂಟದ ಸದಸ್ಯರು ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿಯ ಸ್ಥಾನಿಕ ಅಧಿಕಾರಿಗಳ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ ಅವರು, ಆದಿವಾಸಿಗಳು, ದಲಿತರು, ಬಡವರು, ನಿರಾಶ್ರೀತರು ದೊಡ್ಡ ಯೋಜನೆಗಳಿಂದ ಸ್ಥಳಾಂತರಗೊಂಡವರು, ವಲಸೆ ಕಾರ್ಮಿಕರು, ಅಲೆಮಾರಿ ಬುಡಕಟ್ಟು ಸಮುದಾಯಗಳು, ಕಳ್ಳಸಾಗಾಣಿಕೆ ಯಾದವರು, ಮದುವೆ ನಂತರ ಗಂಡನ ಮನೆಗೆ ಹೋದ ಮಹಿಳೆಯರು ಸೇರಿದಂತೆ ಇವರೆಲ್ಲರೂ ಎನ್ಆರ್ಸಿ ಪೌರತ್ವದ ಆಧಾರಕ್ಕಾಗಿ ಬೇಕಾಗುವ 50 ವರ್ಷಗಳ ದಾಖಲೆಗಳನ್ನು ಪಡೆಯುವುದು ಕಷ್ಟ ಎಂದು ದೂರಿದರು.
ಅಷ್ಟೇ ಅಲ್ಲ ಶ್ರೀಲಂಕಾ, ತಮಿಳರು, ಮ್ಯಾನ್ಮಾರ್ ರೋಹಿಂಗ್ಯಾ ಸಮುದಾಯ, ಚೀನಾದಿಂದ ಬಂದಿರುವ ಬೌದ್ಧರು, ಬಾಂಗ್ಲಾದೇಶದ ಜಾತ್ಯತೀತ ವಿಚಾರವಾದಿಗಳು, ಪಾಕಿಸ್ತಾನದ ಅಹ್ಮದೀಯ ಸಮುದಾಯ ಮತ್ತು ಎಲ್ಲಾ ದೇಶಗಳ ಜಾತ್ಯತೀತರನ್ನು ಈ ಕಾಯ್ದೆಯಿಂದ ಹೊರಗಿಡಲಾಗಿದೆ. ಕೇಂದ್ರ ಸರ್ಕಾರದ ಈ ಕ್ರಮ ಸಂವಿಧಾನ ಆಶಯಗಳಿಗೆ ವಿರುದ್ಧವಾಗಿದೆ. ಸಂವಿಧಾನ ವಿಧಿ 14 ಮತ್ತು 21ರ ಪ್ರಕಾರ ಸಮಾನತೆ ಮತ್ತು ಬದುಕುವ ಹಕ್ಕನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಆದರೆ, ಈಗ ಜಾರಿಗೊಳ್ಳುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್ಆರ್ ಸಿ ಕಾಯ್ದೆ ಮೂಲಭೂತ ಹಕ್ಕುಗಳು, ನೈಸರ್ಗಿಕ ಹಕ್ಕುಗಳು ಮತ್ತು ಮಾನವ ಹಕ್ಕುಗಳು ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.
ಶೀಘ್ರವೇ ಕೇಂದ್ರ ಸರ್ಕಾರ ಸಿಎಎ ಮತ್ತು ಎನ್ಆರ್ಎ ಕಾಯ್ದೆ ರದ್ದು ಮಾಡುವಂತೆ ಒತ್ತಾಯಿಸಿದರು.
ವಿವಿಧ ಸಂಘಟನೆಯ ಮುಖಂಡರಾದ ಜನಾರ್ಧನ ಹಳ್ಳಿಬೆಂಚಿ, ಕೆ.ಪಿ.ಅನಿಲಕುಮಾರ, ಬಸವರಾಜ ಹೊಸುರ, ಎಂ.ಪಿ.ಶಿವಪ್ಪ, ಚಂದ್ರಶೇಖರ ಯಕ್ಲಾಸಪುರ, ವೆಂಕಟೇಶ ಭಂಡಾರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.