ರಾಯಚೂರು: ಜಿಲ್ಲಾ ಪೊಲೀಸ್ ಅಧಿಕಾರಿಯಾಗಿದ್ದ ಡಾ.ಸಿ.ಬಿ. ವೇದಮೂರ್ತಿ ಅವರನ್ನು ವರ್ಗಾವಣೆ ಮಾಡಿದ್ದನ್ನು ರದ್ದುಗೊಳಿಸಿ ಅವರನ್ನೇ ಮುಂದುವರೆಸಬೇಕು ಎಂದು ಜಿಲ್ಲೆಯ ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರುಮಂಗಳವಾರ ಪ್ರತಿಭಟನೆ ನಡೆಸಿದರು.
ಆನಂತರ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿ, ಡಾ. ಸಿ.ಬಿ. ವೇದಮೂರ್ತಿ ಅವರನ್ನು ಸರ್ಕಾರ ಧಿಡೀರ್ ವರ್ಗಾವಣೆ ಮಾಡಿದ್ದು ಸರಿಯಲ್ಲ. ಕೋವಿಡ್ ತಡೆಗೆ ಸಾಕಷ್ಟು ಕೆಲಸ ಮಾಡಿ ಹೆಸರು ಮಾಡಿದ್ದಾರೆ. ಪರಿಸರ ಸಂರಕ್ಷಣೆ, ಸ್ವಚ್ಛತಾ ಅಭಿಯಾನ, ಕಲ್ಯಾಣಿ ಸ್ವಚ್ಛತೆ ಕೈಗೊಂಡಿದ್ದರು. ಜಿಲ್ಲೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಿ ಉನ್ನತ ಮಟ್ಟಕ್ಕೆ ಬೆಳೆಸುವ ಕ್ರಿಯಾಶೀಲ ವ್ಯಕ್ತಿಯಾಗಿದ್ದರು. ರಾಯಚೂರನ್ನು ಹಸಿರನ್ನಾಗಿ ಮಾಡುವ ಪಣ ತೊಟ್ಟಿ ದಕ್ಷ ಆಡಳಿತ ನೀಡಿದ್ದರು ಎಂದರು.
ಕೇವಲ ಒಂದು ವರ್ಷದ ಅವಧಿಯಲ್ಲಿ ಯಾವುದೇ ಆರೋಪ, ವಿವಾಧಗಳಿಲ್ಲದೇ ಆಡಳಿತ ನೀಡಿದ್ದರು. ಅವರ ವರ್ಗಾವಣೆ ಖಂಡನೀಯ. ರಾಜ್ಯ ಸರ್ಕಾರ ಕೂಡಲೇ ಜಿಲ್ಲೆಗೆ ಪುನಾ ಅಧಿಕಾರ ನೀಡಿ ಅವರನ್ನೇ ಮುಂದುವರೆಸಬೇಕು ಎಂದು ಒತ್ತಾಯಿಸಿದರು.
ಕಲ್ಲೂರಿನ ಅಡವೀಶ್ವರ ಮಠದ ಶಂಭುಲಿಂಗ ಸ್ವಾಮಿ, ಕಲಾ ಸಂಕುಲ ಸಂಸ್ಥೆಯ ಕಾರ್ಯದರ್ಶಿ ಮಾರುತಿ ಬಡಿಗೇರ, ಗ್ರೀನ್ ರಾಯಚೂರಿನ ರಾಜೇಂದ್ರ ಶಿವಾಳೆ, ಇಫಾ ಫೌಂಡೇಶನ್ ಸಂಸ್ಥೆಯ ಜಬೀನ ಬೇಗಂ, ಹಿಂದುಳಿದ ವರ್ಗಗಳ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ತಿಮ್ಮಪ್ಪ ಮಲದಕಲ್, ನರಸಿಂಹಲು, ಸಾಹಿತಿ ಪಲಗುಲ ನಾಗರಾಜ, ರಾಜೇಶ ಕುಮಾರ, ಹೊನ್ನಪ್ಪ ಪ್ರದೀಪ ಕುಮಾರ ಇತ್ತರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.