ರಾಯಚೂರು: ನ್ಯಾ. ಸದಾಶಿವ ಆಯೋಗದ ವರದಿಯನ್ನು ಬಜೆಟ್ನಲ್ಲಿ ಅಂಗೀಕರಿಸಿ ಯಥಾವತ್ ಜಾರಿಗೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎನ್ನುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಸಮಿತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಧರಣಿ ನಡೆಸಲಾಯಿತು.
ಪಿಟಿಸಿಎಲ್ ಕಾಯ್ದೆಗೆ ಧಕ್ಕೆ ಆಗದಂತೆ ಸೂಕ್ತ ತಿದ್ದುಪಡಿಗಳನ್ನು ಮಾಡಬೇಕು. ದಲಿತರ ಸೇವೆಯನ್ನು ಪರಿಗಣಿಸಿ ಇನಾಂತಿ ಭೂಮಿಯನ್ನು ಮರುಸ್ಥಾಪನೆ ಮಾಡಲು ಆದೇಶ ನೀಡಿ ಸ್ವಾಧೀನಪಡಿಸಿಕೊಳ್ಳಬೇಕು. ಹಿಂದುಳಿದ ಜಾತಿ ಮತ್ತು ಅಲ್ಪಸಂಖ್ಯಾತರಿಗೆ ಸಂವಿಧಾನದ ಶೆಡ್ಯೂಲ್–9 ರ ಅಡಿ ಮೀಸಲಾತಿ ಕಲ್ಪಿಸಲಾಗಿದೆ. ಇದರಲ್ಲಿ ಒಳಮೀಸಲಾತಿ ತರಲು ಪ್ರತ್ಯೇಕ ಆಯೋಗ ರಚಿಸಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಬಗರ ಹುಕಂ ಸಕ್ರಮ ಪ್ರಕ್ರಿಯೆಯಲ್ಲಿ ದಲಿತರಿಗೆ ನಿಯಮಾನುಸಾರ ಭೂಮಿ ನೀಡಬೇಕು. ಎಸ್ಸಿಪಿ, ಎಸ್ಟಿಪಿ ಅನುದಾನ ವೆಚ್ಚ ಮಾಡದ ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ₹50 ಲಕ್ಷ ಮಿತಿ ಮಾಡಿರುವುದರಿಂದ ದಲಿತ ಗುತ್ತಿಗೆದಾರರಿಗೆ ತೊಂದರೆ ಅಗುತ್ತಿದ್ದು, ಇದನ್ನು ಸಡಿಲಗೊಳಿಸಿ ಟೆಂಡರ್ಗಳಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ಕೇಳಿಕೊಳ್ಳಲಾಗಿದೆ.
ಪದಾಧಿಕಾರಿಗಳ ಹನುಮಂತಪ್ಪ ಕಾಕರಗಲ್, ಸುರೇಶ ಬಳಗಾನೂರ, ಹನುಮಂತಪ್ಪ ವೆಂಕಟಾಪುರ, ಚಿನ್ನಪ್ಪ ಪಟ್ಟದಕಲ್, ಮಹಾದೇವಪ್ಪ ದುಮತಿ, ಜೆ.ಸತ್ಯನಾಥ, ಕೆ.ನಲ್ಲಾರೆಡ್ಡಿ ನಾಯಕ, ಹೈದರಅಲಿ, ಹನುಮಂತ ಮ್ಯಾತ್ರಿ, ಶಿವಪ್ಪ ಪಲಕನಮರಡಿ, ಮಹಾದೇವ ಪರಾಂಪುರ, ಅಮರನಾರ ಉದ್ಭಾಳ, ಈರಣ್ಣ ಕವಿತಾಳ, ಚಂದ್ರಶೇಖರ್ ಭಂಡಾರಿ, ಶಿವರಾಜ ಕೋರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.