ರಾಯಚೂರು: ಕಂದಾಯ ಇಲಾಖೆಯ ಗ್ರಾಮ ಸಹಾಯಕರ ಸೇವೆಯನ್ನು ಕಾಯಂಗೊಳಿಸಿ ಕನಿಷ್ಠ ವೇತನ ನೀಡಬೇಕು. ವೈದ್ಯಕೀಯ ಹಾಗೂ ಇತರೆ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ ಗ್ರಾಮ ಸಹಾಯಕರ ಸಂಘದ ಪದಾಧಿಕಾರಿಗಳು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಗುರುವಾರ ಮನವಿ ಸಲ್ಲಿಸಿದರು.
ಕಳೆದ 43 ವರ್ಷಗಳಿಂದ ಯಾವುದೇ ಸೇವಾ ಭದ್ರತೆಯಿಲ್ಲದೇ ಗ್ರಾಮ ಸಹಾಯಕರು ಸೇವೆ ಸಲ್ಲಿಸುತ್ತಾ ಬಂದಿದ್ಧಾರೆ. ಆದರೆ, ಕೇವಲ ₹12 ಸಾವಿರ ವೇತನ ನೀಡುತ್ತಿದ್ದು ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ಇತರೆ ಕಾರ್ಯಗಳಿಗೆ ಸಮಸ್ಯೆಯಾಗಿದೆ. ಸಚಿವ ಸಂಪುಟದ ಉಪಸಮಿತಿಯು ಈ ಹಿಂದೆಯೇ ಗ್ರಾಮ ಸಹಾಯಕರ ಹುದ್ದೆಯನ್ನು ಡಿ ಗ್ರೂಪ್ ನೌಕರರ ಹುದ್ದೆ ಎಂದು ಪರಿಗಣಿಸಲು ಆದೇಶಿಸಿದೆ. ಸರ್ಕಾರದ ಉನ್ನತ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳೂ ವರದಿ ಸಲ್ಲಿಸಿದ್ದರೂ ಇದುವರೆಗೂ ಡಿ ಗ್ರುಪ್ ನೌಕರೆಂದು ಪರಿಗಣಿಸಿಲ್ಲ ಎಂದು ದೂರಿದರು.
ಕೋವಿಡ್-19 ಸಾಂಕ್ರಾಮಿಕ ರೋಗ ತಡೆಗಟ್ಟಲು ಪ್ರತಿನಿತ್ಯ ವಾರಿಯರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದೇವೆ. ಹಲವು ಜಿಲ್ಲೆಗಳಲ್ಲಿ ಸಹಾಯಕರ ಮೇಲೆ ಹಲ್ಲೆ ಪ್ರಕರಣಗಳೂ ವರದಿಯಾಗಿವೆ. ಇದರಿಂದ ಜೀವದ ಮೇಲೆ ಬೆದರಿಕೆಗಳು ಹೆಚ್ಚಾಗಿವೆ. ಆದ್ದರಿಂದ ಸರ್ಕಾರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಸೇವೆಯನ್ನು ಕಾಯಂಗೊಳಿಸಬೇಕು ಎಂದರು.
ಗ್ರಾಮ ಸಹಾಯಕರಿಗೆ ಚೆಕ್ ಪೋಸ್ಟ್ ನಲ್ಲಿ ಸೂಕ್ತ ಭದ್ರತೆ ನೀಡಬೇಕು. ತಾಲ್ಲೂಕು ಕಚೇರಿಗಳಲ್ಲಿ ರಾತ್ರಿ ಸೇವೆಗೆ ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು ಹಾಗೂ ವಿನಾಕಾರಣ ಕೆಲಸದಿಂದ ವಜಾಗೊಳಿಸುತ್ತಿರುವುದನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಗೌರವಾಧ್ಯಕ್ಷ ಎಂ.ಡಿ.ಹನೀಫ್, ಜಿಲ್ಲಾಧ್ಯಕ್ಷ ಬಿ.ಸದಾಶಿವ, ಕಾರ್ಯದರ್ಶಿ ಎಂ.ರಾಘವೇಂದ್ರ, ತಿಮ್ಮಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.