ರಾಯಚೂರು: ಬಾಕಿ ವೇತನ ಈ ಕೂಡಲೇ ಪಾವತಿ ಮಾಡಬೇಕು ಹಾಗೂ ಸೇವಾ ಭದ್ರತೆ ಒದಗಿಸಬೇಕು ಎಂದು ಕರ್ನಾಟಕ ಅತಿಥಿ ಉಪನ್ಯಾಸಕರು, ಅತಿಥಿ ಶಿಕ್ಷಕರ ಹೋರಾಟ ಸಮಿತಿ ಹಾಗೂ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂಥ್ ಆರ್ಗನೈಸೇಶನ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.
ಅತಿಥಿ ಶಿಕ್ಷಕರು, ಉಪನ್ಯಾಸಕರು ತಮ್ಮ ಸ್ವಂತ ಖರ್ಚಿನಿಂದ ಆನ್ಲೈನ್ ಬೋಧನೆ ಮಾಡುತ್ತಿದ್ದು, ಅನೇಕರು 20 ವರ್ಷಗಳಿಂದ ಅತಿಥಿ ಶಿಕ್ಷಕರಾಗಿಯೇ ಸೇವೆ ಸಲ್ಲಿಸುತ್ತಿದ್ದಾರೆ. 2019 ಜನವರಿ ಯುಜಿಸಿ ಸುತ್ತೋಲೆ ಹೊರಡಿಸಿ ಮಾಸಿಕ ₹ 50 ಸಾವಿರವರೆಗೆ ವೇತನ ನಿಗದಿ ಮಾಡಬೇಕು ಎಂದು ನಿರ್ದೇಶನ ನೀಡಿತ್ತು. ಆದರೆ ರಾಜ್ಯದಲ್ಲಿ ಇಂದಿಗೂ ನೆಟ್, ಸೆಟ್, ಪಿಎಚ್ಡಿ ಪಡೆದ ಉಪನ್ಯಾಸಕರಿಗೆ ಮಾಸಿಕ ₹13 ಸಾವಿರ ಉಳಿದವರಿಗೆ ₹11ಸಾವಿರ ಹಾಗೂ ಅತಿಥಿ ಶಿಕ್ಷಕರಿಗೆ ₹7.500 ನೀಡಲಾಗುತ್ತಿದೆ ಎಂದು ದೂರಿದರು.
ಕೂಡಲೇ ಸರ್ಕಾರ ಬಾಕಿ ವೇತನವನ್ನು ಒಂದೇ ಬಾರಿ ಬಿಡುಗಡೆ ಮಾಡಬೇಕು. ಅತಿಥಿ ಶಿಕ್ಷಕರ, ಉಪನ್ಯಾಸಕರಿಗೆ ವಿಶೇಷ ಪ್ಯಾಕೆಜ್ ಘೋಷಣೆ ಮಾಡಬೇಕು ಹಾಗೂ ಸೇವಾ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಎಐಟಿಯುಸಿಯ ಜಿಲ್ಲಾ ಅಧ್ಯಕ್ಷ ವೀರೇಶ ಎನ್.ಎಸ್, ಮುಖಂಡರಾದ ಚನ್ನಬಸವ ಜಾನೇಕಲ್, ಮಹೇಶ್ ಚೀಕಲಪರ್ವಿ, ಅತಿಥಿ ಉಪನ್ಯಾಸಕ ಯರಿಯಪ್ಪ ಬೆಳಗುರ್ಕಿ, ನರಸಿಂಹಲು ಆಯಾಜಪುರ, ನಾಗರಾಜ ಮತ್ತಿತರರು ಇದ್ದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.