ADVERTISEMENT

‘ಅಕ್ರಮ ಮರಳು ಸಾಗಣೆ ತಡೆಯಲಿ’

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2021, 15:23 IST
Last Updated 6 ನವೆಂಬರ್ 2021, 15:23 IST
ಭೀಮ್ ಆರ್ಮಿ ಸಂಘಟನೆಯ ಮುಖಂಡರು ರಾಯಚೂರಿನ ಉಪ ವಿಭಾಗೀಯ ಅಧಿಕಾರಿ ಸಂತೋಷ ಕಾಮಗೌಡ ಅವರಿಗೆ ಶನಿವಾರ ಮನವಿ ಸಲ್ಲಿಸಿದರು
ಭೀಮ್ ಆರ್ಮಿ ಸಂಘಟನೆಯ ಮುಖಂಡರು ರಾಯಚೂರಿನ ಉಪ ವಿಭಾಗೀಯ ಅಧಿಕಾರಿ ಸಂತೋಷ ಕಾಮಗೌಡ ಅವರಿಗೆ ಶನಿವಾರ ಮನವಿ ಸಲ್ಲಿಸಿದರು   

ರಾಯಚೂರು: ದೇವದುರ್ಗ ತಾಲ್ಲೂಕಿನಲ್ಲಿ ಅಕ್ರಮ ಮರಳು, ಮಟ್ಕಾ, ಇಸ್ಪಿಟ್ ಹಾಗೂ ಇತರೆ ಅಕ್ರಮ ಚಟುವಟಿಕೆ ತಡೆಯಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಭೀಮ್ ಆರ್ಮಿ ಸಂಘಟನೆಯ ಮುಖಂಡರು ಜಿಲ್ಲಾಡಳಿತ ಹಾಗೂ ಉಪ ವಿಭಾಗೀಯ ಅಧಿಕಾರಿಗೆ ಶನಿವಾರ ಮನವಿ ಸಲ್ಲಿಸಿದರು.

ದೇವದುರ್ಗದಲ್ಲಿ ಅಕ್ರಮ ಮರಳು ಎಗ್ಗಿಲ್ಲದೇ ಸಾಗಣೆ ಮಾಡಲಾಗುತ್ತಿದ್ದು ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಅಧಿಕಾರಿ, ಜಿಲ್ಲಾಡಳಿತದ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ. ಈಚೆಗೆ ಅಕ್ರಮ ಚಟುವಟಿಕೆಗಳ ಪ್ರಶ್ನಿಸಿದ್ದಕ್ಕೆ ದೇವದುರ್ಗದ ನಗರಗುಂಡ ವೃತ್ತದ ಬಳಿ ಭೀಮ್ ಆರ್ಮಿಯ ಮೂಖಂಡನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಎಂದು ದೂರಿದರು.

ರಾಜಧನವಿಲ್ಲದೇ ಅಕ್ರಮವಾಗಿ ಮರಳು ಸಾಗಣೆ ಮಾಡಲಾಗುತ್ತಿದ್ದು ತಪಾಸಣೆ ಕೇಂದ್ರದಲ್ಲಿ ಪೊಲೀಸರು ವಿಚಾರಣೆ ನಡೆಸದೇ ಮಾಮೂಲು ಪಡೆದು ಬಿಡುತ್ತಿದ್ದಾರೆ. ಈ ಬಗ್ಗೆ ಸಿಪಿಐ ನದಾಫ್‌, ಡಿವೈಎಸ್ಪಿ ಹುಲ್ಲೂರು, ತಹಶಿಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೂ ತಿಳಿಸಿದರೂ ಸ್ಪಂದಿಸದೇ ಉಡಾಫೆಯ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ದೇವದುರ್ಗ ತಾಲ್ಲೂಕಿನಲ್ಲಿ 80ಕ್ಕೂ ಹೆಚ್ಚು ಮಟಕಾ ಅಡ್ಡೆಗಳು ರಾಜರೋಷವಾಗಿ ನಡೆಯುತ್ತಿವೆ. ಆಂಧ್ರಪ್ರದೇಶ ಮೂಲದವರು ತಾಲ್ಲೂಕಿಗೆ ಬಂದು ಜೂಜು ಆಡುತ್ತಿದ್ದಾರೆ. ಶಾಸಕರು ಅಕ್ರಮ ಚಟುವಟಿಕೆಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಸಂಘಟನೆಯ ಮುಖಂಡರ ಮೇಲೆ ಹಲ್ಲೆ ಮಾಡಿದ್ದು ಬೆದರಿಕೆ ಹಾಕುತ್ತಿದ್ದಾರೆ. ಯಾವುದೇ ಅನಾಹುತ ಸಂಭವಿಸಿದ್ದಲ್ಲಿ ಶಾಸಕರು ಹಾಗೂ ಅಧಿಕಾರಿಗಳು ಹೊಣೆ ಎಂದು ಎಚ್ಚರಿಸಿದರು.

ಭೀಮ್ ಆರ್ಮಿಯ ಉಪಾಧ್ಯಕ್ಷ ರಮೇಶ ರಾಮನಾಳ, ಸಂತೋಷ ಕುಮಾರ, ಬಾಬಾ ಖಾನ್, ವಿಶ್ವನಾಥ ಬಲ್ಲಿದವ, ರವಿಕುಮಾರ ಬಾಗೂರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.