ರಾಯಚೂರು: ನವರಾತ್ರಿಯ ಪ್ರಯುಕ್ತ ನಗರ ಸೇರಿ ಜಿಲ್ಲೆಯಲ್ಲಿ ಪ್ರಮುಖ ದೇಗುಲಗಳಲ್ಲಿ ದೇವಿಯ ಮೂರ್ತಿಗಳಿಗೆ ವಿಶೇಷ ಅಲಂಕಾರ, ಅನ್ನ ಸಂತರ್ಪಣೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ನೃತ್ಯ ಸ್ಪರ್ಧೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಕಳೆಗಟ್ಟಿವೆ.
ನವರಾತ್ರೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ: ನವರಾತ್ರಿ ಉತ್ಸವದ ಅಂಗವಾಗಿ ನಗರದ ಮುನ್ನೂರುಕಾಪು ಸಮಾಜದ ವತಿಯಿಂದ ಅಕ್ಟೋಬರ್ 3ರಿಂದ 11ರ ವರೆಗೆ ನಗರದ ಗದ್ವಾಲ್ ರಸ್ತೆಯಲ್ಲಿ ಮಾತಾ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿವಿಧ ಸಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ.
53ನೇ ನವರಾತ್ರಿ: ನಗರದ ಬ್ರೇಸ್ತವಾರಪೇಟೆಯಲ್ಲಿನ ಉಪ್ಪಾರವಾಡಿ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಅಕ್ಟೋಬರ್ 3 ರಿಂದ 12 ವರೆಗೆ 53ನೇ ನವರಾತ್ರಿ ಉತ್ಸವ ಆಯೋಜಿಸಲಾಗಿದೆ.
ಶನಿವಾರ ಆಂಜನೇಯ ವಾಹನೋತ್ಸವ ಅಂಗವಾಗಿ ಬೆಳಗ್ಗೆ ಸುಪ್ರಭಾತ ಸೇವೆ, ಧ್ವಜಾರೋಹಣ ಕಾರ್ಯಕ್ರಮ, ಸಂಕಲ್ಪ ಸೇವೆ, ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ, ಮಹಾಮಂಗಳಾರತಿ ಹಾಗೂ ಸಂಜೆ 7 ಗಂಟೆಗೆ ಹನುಮಾನ ಚಾಲಿಸ ಪಾರಾಯಣ, ಆಂಜನೇಯ ವಾಹನದ ಪಲ್ಲಕ್ಕಿ ಉತ್ಸವ, ತೊಟ್ಟಿಲ ಸೇವೆ, ಸಂಗೀತ ಸೇವೆ, ನರ್ತನ ಸೇವೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷರು, ಕಾರ್ಯದರ್ಶಿಗಳು ಸೇರಿದಂತೆ ಸಮಿತಿಯ ಸದಸ್ಯರು, ಬಡಾವಣೆಯ ಯುವಕರು ಉಪಸ್ಥಿತರಿದ್ದರು.
ಗೌಳಿ ಸಮಾಜದಿಂದ ಅಂಬಾ ಭವಾನಿಯ ಘಟಸ್ಥಾಪನೆ: ನಗರದ ವೀರಶೈವ ಗೌಳಿ ಸಮಾಜದ ವತಿಯಿಂದ ಶರನ್ನವರಾತ್ರಿಯ ಅಂಗವಾಗಿ ಭಂಗಿಕುಂಟಾ (ಬ್ರೇಸ್ತವಾರಪೇಟೆ) ಭವಾನಿ ವೃತ್ತದಲ್ಲಿ ಅಂಬಾ ಭವಾನಿ ಹಾಗೂ ಘಟಸ್ಥಾಪನಾ ಪ್ರತಿಷ್ಠಾಪನೆ ಮಾಡಲಾಗಿದೆ. ಸಮಾಜದಿಂದ ಕಳೆದ 41 ವರ್ಷದಿಂದ ನವರಾತ್ರಿ ಆಚರಣೆ ಮಾಡಲಾಗುತ್ತಿದೆ.
ಈ ಬಾರಿ ಅ.3ರಿಂದ 12ರ ವರೆಗೆ ಸಂಜೆ 6ರಿಂದ 6.30 ರ ವರೆಗೆ ಅಂಬ ಭವಾನಿಗ ಅಭಿಷೇಷ ಅರ್ಚನೆ, ಮಂಗಳಾರತಿ(ಅಲಂಕಾರ) ನಡೆಯುತ್ತಿದೆ. ಅ.3ರಂದು ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಸ್ವಾಮೀಜಿ ಸಾನಿಧ್ಯದಲ್ಲಿ ಪಲ್ಲಕ್ಕಿ ಸೇವೆ ನಡೆಯಿತು. ಅ.11ರಂಧು ದುರಗಾಷ್ಠಮಿ ದಿನ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 2ರ ವರೆಗೆ ಹೋಮ, ಹವನ ಸಂಜೆ 7ರಂದು ದೀಪೋತ್ಸವ ನಡೆಯಲಿದೆ. ಪ್ರತಿನಿತ್ಯ ದೇವಿಯ ಮೂರ್ತಿಗೆ ಪಂಚಾಮೃತ ಅಭಿಷೇಕ, ಹಸಿರು ಉಡುಗೆ ತೊಡಿಸಿ, ವಿವಿಧ ಬಗೆಯ ಹೂವು, ಹಣ್ಣು–ಹಂಪಲಗಳಿಂದ ಅಲಂಕಾರ ಮಾಡಿ ಪೂಜಿಸಲಾಗುತ್ತಿದೆ. ಬೆಳಿಗ್ಗೆ 3ರಿಂದ ರಾತ್ರಿ 8ರ ವರೆಗೆ ಮಹಿಳೆಯರು ಕುಟುಂಬ ಸಮೇತರಾಗಿ ದೇವಸ್ಥಾನಗಳಿಗೆ ಭೇಟಿ ನೀಡಿ, ಪೂಜೆ ಸಲ್ಲಿಸುತ್ತಾರೆ. ನವರಾತ್ರಿಯ ಕೊನೆಯ ದಿನ ದೇವಿಗೆ ಪೂಜೆ ಸಲ್ಲಿಸಿ ಮೂರ್ತಿಯನ್ನು ಬಟ್ಟೆಯಿಂದ ಮುಚ್ಚಲಾಗುವುದು. ಅ.17ರಂದು ಶರದ ಪೂರ್ಣಿಮೆಯ ದಿನ ಬೆಳಿಗ್ಗೆ 8.ರಿಂದ 12ರ ವರೆಗೆ ಪೂಜೆ ಮಧ್ಯಾಹ್ನ 1ರಿಂದ ಸಂಜೆ 4ರ ವರೆಗೆ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಿದ್ದು ಸುಮಾರು 3 ಸಾವಿರ ಜನರಿಗೆ ಪ್ರಸಾದ ನೀಡಲಾಗುವುದು ಎಂದು ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷ ಶಾಮ ಸುಂದರ್ ತಿಳಿಸಿದರು.
ನಗರದ ವಿವಿಧೆಡೆ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ಸೋಮವಾರಪೇಟೆ ಹಿರೇಮಠ, ಪಂಚಲಿಂಗೇಶ್ವರ ದೇವಸ್ಥಾನ, ನವೋದಯ ಕಾಲೇಜಿನ ಬಳಿಯ ವೆಂಕಟೇಶ್ವರ ದೇವಸ್ಥಾನ ಸೇರಿ ವಿವಿಧ ದೇವಸ್ಥಾನಗಳಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.