
ಹಟ್ಟಿ ಚಿನ್ನದ ಗಣಿ: ಸಮೀಪದ ಗೆಜ್ಜಲಗಟ್ಟಾ ಗ್ರಾಮದ ವೀರನಾಗಮ್ಮ ದೇವಿಯ ದೇವಸ್ಧಾನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸೋತ್ಸವ ಕಾರ್ಯಕ್ರಮ ನೆರವೇರಿಸಲು ಶಾಸಕ ವಜ್ಜಲ್ ಕುಟುಂಬಸ್ಥರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಶುಕ್ರವಾರ (ಫೆ.20) ಬೆಳಿಗ್ಗೆ ಪುಣ್ಯಾಹ ವಾಚನ ಮಹಾಗಣಪತಿಹೋಮ, ಅಧಿವಾಸಹೋಮ, ಪ್ರತಿಷ್ಠಾಂಗತತ್ವ ಹೋಮ ನಡೆಯಲಿದ್ದು 11.33 ಸಮಯಕ್ಕೆ ವೀರನಾಗಮ್ಮ ದೇವಿಯ ಬಿಂಬ ಪ್ರತಿಷ್ಠೆ, ಜೀವಕುಂಭಾಭಿಷೇಕ, ಉಡಿ ತುಂಬುವ ಕಾರ್ಯಕ್ರಮ ಸೇರಿದಂತೆ ವಿವಿದ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಬೇಡಿ ಬಂದ ಭಕ್ತರಿಗೆ ವರವ ನೀಡುವ ದೈವಿ ಸ್ವರೂಪಿಯಾಗಿ ಗೆಜ್ಜಲಗಟ್ಟಾ ಗ್ರಾಮದಲ್ಲಿ ಇರುವ ವೀರನಾಗಮ್ಮ ದೇವಿ ಶಾಸಕ ಮಾನಪ್ಪ ವಜ್ಜಲ್ ಅವರ ಅಣ್ಣ ನಾಗಪ್ಪ ವಜ್ಜಲ್ ಅವರ ಕನಸಿನಲ್ಲಿ ಬಂದು, ‘ಗೆಜ್ಜಲಗಟ್ಟಾ ಗ್ರಾಮದಲ್ಲಿ ನೆಲೆಸಿದ್ದೇನೆ ನಿಮ್ಮ ಪೂರ್ವಜರು ಇದೇ ಗ್ರಾಮಸ್ಧರು ಎಂದು ತಿಳಿಸಿದ್ದಾಳೆ’ ಎಂದು ವಜ್ಜಲ್ ಕುಟುಂಬದವರು ವೀರಾನಾಗಮ್ಮ ದೇವಸ್ಧಾನ ಕಟ್ಟಲು ಅಂದಿನಿಂದಲೇ ಮುಂದಾಗಿದ್ದಾರೆ.
ವಿವಿದ ಗ್ರಾಮಗಳ ಜನ ವೀರನಾಗಮ್ಮ ದೇವಿಯನ್ನು ಪೂಜಿಸುತ್ತಿದ್ದಾರೆ.
ಕಲ್ಲಿನ ರೂಪದಲ್ಲಿ ಉದ್ಬವಗೊಂಡ ದೇವಿಗೆ ಅದೇ ಸ್ಧಳದಲ್ಲಿ ಚಿಕ್ಕ ದೇವಸ್ಧಾನ ಕಟ್ಟಿ ಪೂಜಿಸಲಾಗುತ್ತಿತ್ತು. ಈಗ ಅದೇ ಸ್ಧಳದಲ್ಲಿ ಸಿಡಿಲು, ಮಳೆ, ಭೂಕಂಪನ ಸಂಭವಿಸಿದರೂ ಹಾನಿಯಾಗದಂತೆ ರಾಜ್ಯದ ಅನೇಕ ಕಡೆಗಳಿಂದ ದೊಡ್ಡ ಬಂಡೆಗಲ್ಲುಗಳನ್ನು ತರಿಸಿ 8 ವರ್ಷದಿಂದ ನಿರ್ಮಾಣ ಮಾಡಲಾಗುತ್ತಿದೆ. ಉಡುಪಿ ಜಿಲ್ಲೆಯ ಸಾಲಿಗ್ರಾಮ ಪ್ರಧಾನ ಶಿಲ್ಪಿ ಈಶ್ವರ ದೇಗುಲ ನಿರ್ಮಿಸಿದ್ದಾರೆ.
ದೇವಸ್ಧಾನ ಈಗ ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಿದ್ದವಾಗಿದೆ. ಗ್ರಾಮದಲ್ಲಿ ಕಳೆದ ಐದು ದಿನದಿಂದ ಹಬ್ಬದ ವಾತಾವರಣ ನಿರ್ಮಾಣಗೊಂಡಿದೆ. ಸಂಜೆ ಧರ್ಮಸಭೆ, ಕಲಾತಂಡಗಳಿಂದ ಸಂಗೀತ ಕಾರ್ಯಕ್ರಮ, ಹಾಸ್ಯಸಂಜೆ, ನೃತ್ಯ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದಿವೆ.
ಇಮ್ಮುಡಿ ಸಿದ್ದರಾಮೇಶ್ವರ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ.
ಕೇಂದ್ರದ ಸಚಿವ ಗಜೇಂದ್ರಸಿಂಗ್ ಶೇಖಾವತ್ ಕಾರ್ಯಕ್ರಮದ ಉದ್ಘಾಟಿಸಲಿದ್ದು ಕೇಂದ್ರದ ಪ್ರಹ್ಲಾದ್ ಜೋಷಿ, ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ.ವಿಜಯೇಂದ್ರ, ಬಿಜೆಪಿ ನಾಯಕರಾದ ಆರ್.ಅಶೋಕ, ಚಲುವಾದಿ ನಾರಾಯಣಸ್ವಾಮಿ, ಶ್ರೀರಾಮುಲು ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
ಗೆಜ್ಜಲಗಟ್ಟಾದಲ್ಲಿ ನಮ್ಮ ಮನೆಯ ಆರಾಧ್ಯ ದೇವಿ ನೆಲೆಸಿದ್ದರ ಬಗ್ಗೆ ವಿಚಾರಿಸಿದಾಗ ನಮ್ಮ ಪೂರ್ವಜರು ಇದ್ದ ಸ್ಧಳವೇ ಗೆಜ್ಜಲಗಟ್ಟಾ ಎಂದು ಗೊತ್ತಾಯಿತು. ಅದಕ್ಕಾಗಿ ವೀರನಾಗಮ್ಮ ದೇವಿಯ ದೇವಸ್ಧಾನ ನಿರ್ಮಾಣ ಮಾಡಲಾಗಿದೆ. ಈ ಭಾಗದ ಬಹುದೊಡ್ಡ ದೇವಸ್ದಾನ ಇದಾಗಿದ್ದು ಬೇಡಿ ಬಂದ ಭಕ್ತರಿಗೆ ವರವ ಕೊಡುವ ದೇವಿಯಾಗಿ ಈ ನೆಲದಲ್ಲಿ ನೆಲೆಸಿದ್ದಾಳೆಕರಿಯಪ್ಪ ವಜ್ಜಲ್ ಗುತ್ತಿಗೆದಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.