ರಾಯಚೂರು: ಹುಮನಾಬಾದ್ ತಹಶೀಲ್ದಾರ್ ಪ್ರದೀಪ ಕುಮಾರ ಹಿರೇಮಠ ಅವರ ಮೇಲೆ ಹಲ್ಲೆ ಮಾಡಿದ ಬಿಎಸ್ಪಿ ಕಾರ್ಯಕರ್ತರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ನೇತೃತ್ವದಲ್ಲಿ ಬೇಡ ಜಂಗಮ ಸಮಾಜ, ಜಿಲ್ಲಾ ಬಸವಕೇಂದ್ರ ಸೇರಿದಂತೆ ವೀರಶೈವ ಸಮಾಜದ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ವೀರಶೈವ ಕಲ್ಯಾಣ ಮಂಟಪದಿಂದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ತಹಶೀಲ್ದಾರ್ ಪ್ರದೀಪಕುಮಾರ್ ಅವರು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಬಿಎಸ್ಪಿ ಕಾರ್ಯಕರ್ತರು ಮನವಿ ಸ್ವೀಕರಿಸಿಲ್ಲ ಎಂದು ಆರೋಪಿಸಿ ತಹಶೀಲ್ದಾರರ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಪೀಠೋಪಕರಣ ಧ್ವಂಸಗೊಳಿಸಿ ಅಮಾನುಷವಾಗಿ ನಡೆದುಕೊಂಡಿದ್ದಾರೆ. ಇಂತಹ ಘಟನೆಯಿಂದ ಸುಸಂಸ್ಕೃತ ಸಮಾಜ ತಲೆ ತಗ್ಗಿಸುವಂತಾಗಿದೆ. ಕೂಡಲೇ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಂಡು ಇಂತಹ ಘಟನೆ ಮರುಕಳಿಸದಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಶಾಸಕ ಡಾ.ಶಿವರಾಜ ಪಾಟೀಲ್, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಮಿರ್ಜಾಪೂರ, ವೀರಶೈವ ಸಮಾಜದ ಅಧ್ಯಕ್ಷ ಎಂ.ವೀರನಗೌಡ, ಜಿಲ್ಲಾ ಬಸವಕೇಂದ್ರ ಅಧ್ಯಕ್ಷ ರಾಚನಗೌಡ ಕೋಳೂರು, ಕಾರ್ಯದರ್ಶಿ ಚನ್ನಬಸವಣ್ಣ ಮಹಾಜನ್ ಶೆಟ್ಟಿ, ಅಖಿಲ ಭಾರತ ಜಾಗತಿಕ ಲಿಂಗಾಯತ ಮಹಾಸಭೆಯ ತಾಲ್ಲೂಕು ಅಧ್ಯಕ್ಷ ಜೆ.ಬಸವರಾಜ, ಯುವ ಘಟಕದ ಅಧ್ಯಕ್ಷ ಅರಿಕೇರಿ ಶಿವಶರಣ, ರುದ್ರಸೇನೆ ಅಧ್ಯಕ್ಷ ಎಂ. ಶೀವಶರಣರೆಡ್ಡಿ, ಬೇಡ ಜಂಗಮ ಸಮಾಜದ ಅಧ್ಯಕ್ಷ ವೀರಯ್ಯ ಸ್ವಾಮಿ, ಗೌರವಾಧ್ಯಕ್ಷ ಪ್ರಭುಶಾಸ್ತ್ರಿ, ಜೆ.ನೀಲಕಂಠಯ್ಯ, ರಾಜಶೇಶ್ವರಿ, ಮಲ್ಲಿಕಾರ್ಜುನ, ವಿಜಯಕುಮಾರ ಸಜ್ಜನ್, ಬಸವರಾಜಸ್ವಾಮಿ ಮನ್ಸಲಾಪೂರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.