ADVERTISEMENT

ವಾರ್ಡ್‌ವಾರು ತರಕಾರಿ ಮಾರಾಟ ವ್ಯವಸ್ಥೆ

ನಗರ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಯಿಂದ ನಿಗಾ

​ಪ್ರಜಾವಾಣಿ ವಾರ್ತೆ
Published 22 ಮೇ 2021, 14:11 IST
Last Updated 22 ಮೇ 2021, 14:11 IST

ರಾಯಚೂರು: ಜಿಲ್ಲೆಯಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದು, ಮೇ 23 ರಂದು ಬೆಳಿಗ್ಗೆ 6 ರಿಂದ 2 ಗಂಟೆವರೆಗೂ ತರಕಾರಿ ಮತ್ತು ದಿನಸಿ ಖರೀದಿಗೆ ಅವಕಾಶ ನೀಡಲಾಗಿದೆ. ಜನದಟ್ಟಣೆ ಆಗುವುದನ್ನು ತಪ್ಪಿಸುವುದಕ್ಕಾಗಿ ಆಯಾ ವಾರ್ಡ್‌ಗಳಲ್ಲಿಯೇ ತರಕಾರಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.

ರಾಯಚೂರು ನಗರದಲ್ಲಿ 28 ಕಡೆಗಳಲ್ಲಿ ತರಕಾರಿ ಮಾರಾಟ ಸ್ಥಳಗಳನ್ನು ನಗರಸಭೆ ಅಧಿಕಾರಿಗಳು ಗುರುತಿಸಿದ್ದು, ಒಟ್ಟು 130 ವ್ಯಾಪಾರಿಗಳಿಗೆ ಅನುಮತಿ ನೀಡಲಾಗಿದೆ. ಒಂದು ಸ್ಥಳದಲ್ಲಿ ಐದರಿಂದ ಏಳು ವ್ಯಾಪಾರಿಗಳು ಇರಲಿದ್ದು, ಹೆಸರುಗಳನ್ನು ಪಟ್ಟಿ ಮಾಡಲಾಗಿದೆ. ಒಟ್ಟು 35 ವಾರ್ಡ್‌ಗಳಿದ್ದು, ನಡೆದುಹೋಗಿ ತರಕಾರಿ ಖರೀದಿಸಲು ಸಾಧ್ಯವಾಗಲಿದೆ.

ಪೊಲೀಸರು ನಿಗಾ ವಹಿಸಲಿದ್ದಾರೆ. ವಾಹನಗಳ ಸಂಚಾರಕ್ಕೆ ಅನುವಾಗುವಂತೆ ಕೆಲವು ಕಡೆಗಳಲ್ಲಿ ಬ್ಯಾರೆಕೇಡ್‌ ತೆರವುಗೊಳಿಸಲಾಗುತ್ತಿದೆ. ಆದರೆ, ದಟ್ಟಣೆ ಆಗುವುದನ್ನು ತಡೆಯಲಿದ್ದಾರೆ. ಕಡ್ಡಾಯವಾಗಿ ಕೋವಿಡ್‌ ನಿಯಮ ಪಾಲನೆ ಮಾಡಬೇಕು. ಮಾಸ್ಕ್‌ ಧರಿಸದೆ ವ್ಯಾಪಾರ ಮಾಡುವವರಿಗೆ ದಂಡ ವಿಧಿಸಲಾಗುತ್ತದೆ.

ADVERTISEMENT

ನಗರಸಭೆ ಕಿರಿಯ ಆರೋಗ್ಯ ನಿರೀಕ್ಷಕರು ಹಾಗೂ ನೈರ್ಮಲ್ಯ ನಿರೀಕ್ಷಕರು ಒಟ್ಟು 20 ಹೋಂ ಗಾರ್ಡ್‌ಗಳೊಂದಿಗೆ ನಿಯೋಜಿತ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಲಿದ್ದು, ಕೋವಿಡ್‌ ನಿಯಂತ್ರಣಕ್ಕೆ ಕ್ರಮ ವಹಿಸಲಿದ್ದಾರೆ. ಕೋವಿಡ್‌ ಕಡ್ಡಾಯ ನಿಯಮ ಪಾಲನೆ ಮಾಡದವರ ವಿರುದ್ಧ ‘ವಿಪತ್ತು ಕಾಯ್ದೆ–2005, ಸೆಕ್ಷೆನ್‌ 188 ರ ಪ್ರಕಾರ ಪ್ರಕರಣ ದಾಖಲಿಸಲಾಗುತ್ತದೆ.

ಹಣ್ಣು, ತರಕಾರಿ, ಕಿರಾಣಿ ಅಂಗಡಿ ಹಾಗೂ ಮಾಂಸ ಮಾರಾಟದ ಅಂಗಡಿಗಳು ಮಾತ್ರ ತೆರೆಯುವುದಕ್ಕೆ ಅನುಮತಿ ನೀಡಲಾಗಿದೆ. ಹೋಂ ಡೆಲಿವರಿ ಪಡೆಯುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ನಗರದಲ್ಲಿ ವಾಹನದಟ್ಟಣೆ ಸಮಸ್ಯೆ ಆಗದಂತೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೂ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಗ್ರಾಮೀಣ ಭಾಗದ ಜನರು ನಗರಕ್ಕೆ ಬಂದು ಖರೀದಿ ಮಾಡುವುದಕ್ಕೆ ಅವಕಾಶ ಇರುವುದಿಲ್ಲ.

ದರ ಏರಿಕೆ ಮಾಡಿದರೆ ಕ್ರಮ: ಹೆಚ್ಚಿನ ದರಕ್ಕೆ ತರಕಾರಿ ಮಾರಾಟ ಮಾಡುವುದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತವು ಈಗಾಗಲೇ ಸೂಚನೆ ನೀಡಿದೆ. ಈ ಸಂಬಂಧವಾಗಿ ತರಕಾರಿ ಚಿಲ್ಲರೆ ಮಾರಾಟಗಾರರ ಸಂಘದ ಪದಾಧಿಕಾರಿಗಳು ಮತ್ತು ಸಗಟು ವ್ಯಾಪಾರಿಗಳ ಸಭೆ ಆಯೋಜಿಸಲಾಗಿತ್ತು. ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಪ್ರತಿಯೊಂದು ತರಕಾರಿ ಮತ್ತು ಹಣ್ಣುಗಳಿಗೆ ಗರಿಷ್ಠ ದರ ನಿಗದಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.